PLACE YOUR AD HERE AT LOWEST PRICE
ಕೆಜಿಎಫ್: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ ಎಂಬ ಕಾರಣಕ್ಕೆ ರೈತನ ಕೊಳವೆ ಬಾವಿಯ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವುದನ್ನು ಖಂಡಿಸಿ ಬಿಜೆಪಿ ಮುಖಂಡ ವಿ.ಮೋಹನ್ ಕೃಷ್ಣ ನೇತೃತ್ವದಲ್ಲಿ ಪಂತನಹಳ್ಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.
ಬೇತಮಂಗಲ ಹೋಬಳಿಯ ಎನ್.ಜಿ ಹುಲ್ಕೂರು ಗ್ರಾಪಂ ವ್ಯಾಪ್ತಿಯ ಪಂತನಹಳ್ಳಿ ಗ್ರಾಮದ ರೈತ ಮಹಿಳೆ ಮುದ್ದಮ್ಮರ ಟೊಮೊಟೊ ಬೆಳೆಯು ಫಸಲು ಬಂದಿದ್ದು, ಬೆಳೆಯನ್ನು ಮಾರುಕಟ್ಟೆಗೆ ಹಾಕುವ ಸಂದರ್ಭದಲ್ಲಿ ವಿದ್ಯುತ್ ಕಡಿತ ಮಾಡಿರುವುದರಿಂದ ರೈತ ಮಹಿಳೆ ಮತ್ತು ಅವರ ಕುಟುಂಬ ಕೆಂಗೆಟ್ಟಿದ್ದಾರೆ ಎಂದು ಮುಖಂಡರು ಆರೋಪ ಮಾಡಿದರು.
ಬಿಜೆಪಿ ಮುಖಂಡ ವಿ.ಮೋಹನ್ ಕೃಷ್ಣ ಮಾತನಾಡಿ,ಇತ್ತೀಚಿಗೆ ಎನ್.ಜಿ ಹುಲ್ಕೂರು ಗ್ರಾಮದಲ್ಲಿ ಬಿಜೆಪಿಯಿಂದ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಮುದ್ದಮ್ಮರ ರೈತ ಕುಟುಂಭವು ಸೇರ್ಪಡೆಯಾಗಿಲ್ಲ ಎಂಬ ಕಾರಣಕ್ಕೆ ಸ್ವಂತ ಸಹೋದರರಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಶಾಂತಿಯುತವಾಗಿದ್ದ ಕೆಜಿಎಫ್ ತಾಲೂಕಿನಲ್ಲಿ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡರು ದಬ್ಬಾಳಿಕೆ, ಗೂಂಡಾಗಿರಿಯನ್ನು ಪ್ರಾರಂಭಸಿದ್ದಾರೆ ಎಂದು ಆರೋಪಿಸಿದರು.
ಶಾಸಕರು ಭಾಷಣ ಮಾಡುವಾಗ ರೈತ ದೇಶದ ಬೆನ್ನುಲುಬು, ಅನ್ನದಾತ ಎನ್ನುತ್ತಾರೆ, ರೈತರಿಗೆ ಸಾಗುವಳಿ ಚೀಟಿ ವಿತರಿಸಿದ್ದೇನೆ. ತಾವು ಶಾಸಕರಾದ ಮೇಲೆ ಒಳ್ಳೆ ಮಳೆಯಾಗಿ ರೈತ ಚೈತನ್ಯನಾಗಿದ್ದಾನೆ ಎಂದು ಹೇಳುತ್ತಾರೆ. ಆದರೆ ಇದೇನಾ ರೈತನಿಗೆ ಇವರು ಕೊಟ್ಟಿರುವ ಭಾಗ್ಯವೆಂದು ಪ್ರಶ್ನಿಸಿದರು.
ಕೆಜಿಎಫ್ ತಾಲೂಕಿಗೆ ಬಂದು ರಾಜಕೀಯ ಮಾಡಲು ಭಾರ್ಗವ್ ರಾಮ್ ಯಾರು, ಕೆಜಿಎಫ್ ತಾಲೂಕಿನಲ್ಲಿ ವಿದ್ಯಾವಂತರಿಲ್ಲವೆ, ನಮ್ಮ ಜನ ಸ್ವಾಭಿಮಾನಿಗಳು ಈ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ ಎಂದು ಹೇಳುತ್ತಿದ್ದವರು ಇದೀಗ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮ ನಡೆಸಿ ಕುಟುಂಭಗಳ ಮಧ್ಯೆ ಬೆಂಕಿ ಇಡುವ ಕೆಲಸ ಮಾಡಿದ್ದಾರೆಂದು ದೂರಿದರು.
ಕೆಜಿಎಫ್ನಲ್ಲಿ ಕೋಲಾರದ ಗೋವಿಂದಗೌಡರು, ಮುಳಬಾಗಿಲು ತಾಲೂಖಿನ ಭಾರ್ಗವ್ ರಾಮ್ ಜಾತಿ ರಾಜಕೀಯ ಮಾಡಲು ಬಂದಿದ್ದು, ಶೀಘ್ರದಲ್ಲೇ ಜನತೆ ತಕ್ಕ ಪಾಠ ಕಳುಹಿಸುತ್ತಾರೆ. ನಾನು ಒಬ್ಬ ರೈತನ ಮಗನಾಗಿ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ರೈತನಿಗೆ ಹಾಗೂ ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿಸುತ್ತೇನೆ.
ಕಾಂಗ್ರೆಸ್ ಮುಖಂಡ ಭಾರ್ಗವ್ರಾಮ್ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನವೇ ಬೆದರಿಕೆ ಹಾಕಿದ್ದರು, ನೀವು ಕಾಂಗ್ರೆಸ್ಗೆ ಬರದಿದ್ದರೆ ನಿಮ್ಮ ಕುಟುಂಭದಲ್ಲೇ ಸಮಸ್ಯೆ ಮಾಡುತ್ತೇನೆಂದು ಹೇಳಿ ನಮ್ಮ ಟೊಮೊಟೋ ನಾಶಕ್ಕೆ ಕಾರಣರಾಗಿದ್ದಾರೆ. ನಮಗೆ ತಕ್ಷಣ ವಿದ್ಯುತ್ ಸಂಪರ್ಕ ಕೊಡಿಸಿ ಬೆಳೆ ಉಳಿಸಿಕೊಡಿ ಎಂದು ರೈತ ಮಹಿಳೆ ಅಳಲು ತೋಡಿಕೊಂಡರು.
ರೈತರಾದ ಮುನಿಯಪ್ಪ ಮತ್ತು ತಿಮ್ಮರಾಯಪ್ಪ ಪ್ರತಿಭಟನೆ ವೇಳೆ ಸ್ಥಳಕ್ಕೆ ಆಗಮಿಸಿ ಇದು ನಮ್ಮ ಕುಟುಂಭದ ವ್ಯಾಜ್ಯಗಳಾಗಿದ್ದು, ಇದಕ್ಕೆ ಪಕ್ಷ ಬೇಧವನ್ನು ಕಟ್ಟಬೇಡಿ ನಾವು ನಮ್ಮ ಇಷ್ಟಕ್ಕೆ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳುತ್ತೇವೆ ನಾವು ವಿದ್ಯುತ್ ಕಡಿತಗೊಳಿಸಿಲ್ಲ ಅವರೇ ಕಡಿತಗೊಳಿಸಿ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆಂದು ಹೇಳಿದಾಗ ಎರಡೂ ಕುಂಟಿಉಂಬಗಳ ನಡುವೆ ಕೈ ಕೈ ಮೀಲಾಯಿಸಿಕೊಂಡ ಘಟನೆಗಳು ಸಹ ಸ್ಥಳದಲ್ಲಿ ನಡೆದವು.