PLACE YOUR AD HERE AT LOWEST PRICE
ಅನ್ಯಾಯದ ದರಗಳನ್ನು ತಡೆದು ಸ್ಪರ್ಧಾತ್ಮಕ ದರದಲ್ಲಿ ವಹಿವಾಟು ನಡೆಸಲು ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ೨೦೦೨ ರ ಕಾಯ್ದೆ ಅನುವು ಮಾಡಿಕೊಡುತ್ತದೆಯೆಂದು ಕೈಗಾರಿಕಾ ಇಲಾಖೆಯ ನಿವೃತ್ತ ಅಧಿಕ ನಿರ್ದೇಶಕ ಎಚ್.ಪ್ರಕಾಶ್ ಹೇಳಿದರು.
ಕೋಲಾರ ನಗರದ ಕೈಗಾರಿಕಾ ಕೇಂದ್ರದ ಸಭಾಂಗಣದಲ್ಲಿ ಮಂಗಳವಾರ ಕಾಯ್ದೆ ಕುರಿತಂತೆ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು.
ಕಾಂಪಿಟೇಷನ್ ಕಮೀಷನ್ ಆಫ್ ಇಂಡಿಯಾ ೨೦೦೨ ರ ಕಾಯ್ದೆ ಜನವರಿ ೧೩, ೨೦೦೩ ರಿಂದ ಭಾರತದಲ್ಲಿ ಜಾರಿಗೆ ಬಂದಿದ್ದು, ಈ ಕಾಯ್ದೆಗೆ ೨೦೦೯-೨೦೧೧ ರಲ್ಲಿ ತಿದ್ದುಪಡಿ ಮಾಡಿ ಜಾರಿಯಲ್ಲಿಡಲಾಗಿದೆ, ಈ ಕಾಯ್ದೆಯು ಎಲ್ಲಾ ಇಲಾಖೆಗಳಿಗೆ, ಸಂಘ ಸಂಸ್ಥೆ, ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳಿಗೆ ಅನ್ವಯವಾಗುತ್ತದೆ ಎಂದು ವಿವರಿಸಿದರು.
ಅನ್ಯಾಯದ ದರದ ವ್ಯಾಪಾರ ತಡೆಯಲು ಈ ಕಾಯ್ದೆಯನ್ನು ಬಳಸಲಾಗುತ್ತಿದ್ದು, ಸ್ಪರ್ಧಾತ್ಮಕ ದರದಲ್ಲಿ ವಹಿವಾಟು, ಟೆಂಡರ್ ನ್ಯೂನ್ಯತೆಗಳನ್ನು ಸರಿಪಡಿಸಿ ಸ್ಪರ್ಧಾತ್ಮಕ ದರಗಳಲ್ಲಿಯೇ ಇಲಾಖೆಗಳಿಂದ ಖರೀದಿಸಲು ಮಾರ್ಗದರ್ಶನವನ್ನು ನೀಡುತ್ತದೆ.
ಕೈಗಾರಿಕೋದ್ಯಮಿಗಳು ಗ್ರಾಹಕರಿಗೆ ಸ್ಪರ್ಧಾತಕ ದರಗಳಲ್ಲಿಯೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬೇಕು ಎಂದು ಹೇಳಿದ ಅವರು, ಕೈಗಾರಿಕೆಗಳಲ್ಲಿ ತಾಂತ್ರಿಕತೆ ಅಭಿವೃದ್ಧಿಪಡಿಸಿ ಕೈಗಾರಿಕಾ ಉತ್ಪನ್ನ ಅಭಿವೃದ್ಧಿಪಡಿಸಲು ಸಹಕಾರಿಯಾಗಲಿದೆಯೆಂದು ವಿವರಿಸಿದರು.
ಕೈಗಾರಿಕಾ ಇಲಾಖೆಯ ನಿವೃತ್ತ ಅಧಿಕ ನಿರ್ದೇಶಕ ಡಾ.ಮಹಾಂತೇಶ್ ಎನ್ ಕರೂರು ಮಾತನಾಡಿ, ಕೈಗಾರಿಕಾ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ಕಾಂಪಿಟೇಷನ್ ಕಾಯ್ದೆ ಯೋಜನೆಯನ್ನು ಕೆಸಿಟಿಯು ಸಂಸ್ಥೆಯಿಂದ ಜಾರಿಗೊಳಿಸುತ್ತಿರುವ ಕ್ಲಸ್ಟರ್ ಡೆವೆಲಪ್ಮೆಂಟ್ ಯೋಜನೆಯಡಿ ಲಾಭ ಪಡೆದುಕೊಳ್ಳಬಹುದು ಎಂದು ಕೋರಿದರು.
ಎಂಎಸ್ಎಂಇ ಘಟಕಗಳು ಝಡ್ ಇಡಿ ಯಲ್ಲಿ ನೋಂದಣಿಮಾಡಿಸಿ ತಮ್ಮ ಉತ್ಪಾದನೆಗಳ ಗುಣಮಟ್ಟ ಅಭಿವೃದ್ಧಿಪಡಿಸಿಕೊಳ್ಳಲು ಸಲಹೆ ನೀಡಿದರು.
ಕೆಸಿಟಿಯು ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾತನಾಡಿ, ಕೆಸಿಟಿಯು ೨೦೨೦-೨೦೨೫ರ ಸಾಲಿನ ಕೈಗಾರಿಕಾ ನೀತಿಯಡಿ ಕೈಗಾರಿಕೆಗಳಿಗೆ ನೀಡುತ್ತಿರುವ ಸಹಾಯ, ಸವಲತ್ತುಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಜಿಲ್ಲಾ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ಮಹಮದ್ ಅತೀಕುಲ್ಲಾ ಷರೀಫ್ ಜಿಲ್ಲಾ ಮಟ್ಟದಲ್ಲಿ ಎಂಎಸ್ಎಮ್ ಎಸ್ ಎಂಇಗಳಿಗೆ ಅನುಕೂಲವಾಗಲೆಂದು ಕೋಲಾರ ಜಿಲ್ಲಾ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಿ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಎಫ್ಕೆಸಿಸಿ ಜಿಲ್ಲಾಧ್ಯಕ್ಷ ನಾಗಶೇಖರ್, ವಿಶ್ವೇಶ್ವರಯ್ಯ ಜಿಲ್ಲಾ ಕೈಗಾರಿಕೆಗಳ ಕಲ್ಯಾಣ ಸಮಿತಿ ಅಧ್ಯಕ್ಷ ಮಹಮದ್ ಶಫೀವುಲ್ಲಾ, ಕೆಐಎಡಿಬಿ ಮಾಲೂರು ಅಧಿಕಾರಿ ಶ್ರೀಪ್ರಕಾಶ್, ಕೈಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಎನ್.ರವಿಚಂದ್ರ, ಶ್ರೀನಿವಾಸರೆಡ್ಡಿ, ಪ್ರಭಾರಸಹಾಯಕ ನಿರ್ದೇಶಕಿ ನಂದಿನಿ, ಡಿಕ್ಕಿ ನಾರಾಯಣಸ್ವಾಮಿ ಇತರರು ಹಾಜರಿದ್ದರು.