PLACE YOUR AD HERE AT LOWEST PRICE
ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲೂ ಮಹಿಳೆ ವಿರುದ್ದ ಸಿಟ್ಟಾದ ಸಂಸದ ಮುನಿಸ್ವಾಮಿ, ನಿನ್ನ ಗಂಡ ಬದುಕಿದ್ದಾನೆ ತಾನೆ ಎಂದು ಸಾರ್ವಜನಿಕವಾಗಿ ಗದರಿ ನಿಂದಿಸಿದ್ದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಬುಧವಾರ ನಗರದ ಟಿ.ಚನ್ನಯ್ಯ ರಂಗಮoದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎನ್.ಆರ್.ಎಲ್.ಎಂ ಸಂಜೀವಿನಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ (DAY-NULM), ಕೋಲಾರ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಜಿಲ್ಲಾ ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭಾಗವಹಿಸಿದ್ದರು.
ಸಂಸದರು ಮಾರಾಟ ಮಳಿಗೆಗಳ ವೀಕ್ಷಣೆ ಮಾಡುತ್ತಿದ್ದ ಸಮಯದಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಗಮನಿಸಿ, ಏನಮ್ಮ ನಿನ್ನ ಹೆಸರು ಹಣೆಗೆ ಕುಂಕುಮ ಯಾಕಿಟ್ಟಿಲ್ಲಾ, ಕಾಸು ಕೊಟ್ಟು ಬಲವಂತವಾಗಿ ಮತಾಂತರ ಮಾಡಿದ್ದಾರೆ ಅಲ್ವ ನಿಂಗೆ, ವೈಷ್ಣವಿ ಅಂತ ಅಂಗಡಿ ಹೆಸರು ಯಾಕಿಟ್ಟುಕೊಂಡಿದ್ದೀಯಾ, ಸುಜಾತ ಅಂತ ಹೆಸರು ಇಟ್ಟುಕೊಂಡು ಯಾರೊ ಕಾಸು ಕೊಡ್ತಾರೆ ಅಂತ, ಬೊಟ್ಟು ಇಟ್ಕೋ ಮೊದಲು. ಏ ಕೊಡಮ್ಮ ಆಯಮ್ಮನಿಗೆ ಬೊಟ್ನ ಎಂದ ಅವರು, ಗಂಡ ಬದುಕಿದ್ದಾನೆ ತಾನೇ ಎಂದು ಸಿಟ್ಟಿನಿಂದ ಕೇಳಿ, ಕಾಮನ್ ಸೆನ್ಸ್ ಇಲ್ಲ ನಿಂಗೆ, ತಂದೆ ಹೆಸರು ಬದಲಾಯಿಸ್ತಿಯಾ ನೀನು, ಅದನ್ನೆಲ್ಲ ಇಟ್ಕೋಳ್ಳೊದಿಕ್ಕೆ ಯೋಗ್ಯತೆ ಇಲ್ಲ ನಿನಗೆ ಎಂದು ಗೊಣಗುತ್ತಾ ಮುಂದೆ ನಡೆದ ಘಟನೆಗೆ ಎಂ.ಎಲ್.ಸಿ. ಇಂಚರ ಗೋವಿಂದರಾಜು, ಶಾಸಕ ಕೆ.ಶ್ರೀನಿವಾಸಗೌಡ ಸಾಕ್ಷಿಯಾದರು.
ಮಹಿಳಾ ದಿನಾಚರಣೆ ಅಂಗವಾಗಿ ಮಾರಾಟ ಮಳಿಗೆ ತೆತೆದಿದ್ದ ಮಹಿಳೆ, ಸಂಸದರಿಗೆ ಉತ್ತರಿಸಲಾಗದೆ ತಡಬಡಾಯಿಸಿ ಪೇಚಾದ ಮಹಿಳೆ, ಮುಳಬಾಗಿಲು ಪಟ್ಟಣದ ಮತ್ಯಾಲಪೇಟೆ ನಿವಾಸಿ ಸುಜಾತ ಎಂದು ತಿಳಿದು ಬಂದಿದ್ದು, ಈ ಬಗ್ಗೆ ಜೊತೆಯಲ್ಲಿ ಇದ್ದ ಶಾಸಕ ಶ್ರೀನಿವಾಸಗೌಡ ಬೇರೆ ಕಾರಣ ಇರಬಹುದು ಬಿಡಪ್ಪ ಎಂದರೂ ಬಿಡದ ಸಂಸದ, ವಿಧಾನಪರಿಷತ್ ಸದಸ್ಯ ಗೋವಿಂದರಾಜು ಕೂಡ ಸಮಾಧಾನಿಸಲು ಯತ್ನ, ಯಾರ ಮಾತನ್ನು ಕೇಳದೆ ಮಹಿಳೆ ವಿರುದ್ದ ಹರಿಹಾಯ್ದರಿಂದ ಘಟನೆ ಸಾರ್ವಜನಿಕ ವಲಯದಲ್ಲಿ ತಿವ್ರ ಚರ್ಚೆಗೆ ಗ್ರಾಸವಾಗಿದೆ