PLACE YOUR AD HERE AT LOWEST PRICE
ಬಂಗಾರಪೇಟೆ:ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಚುನಾವಣೆ ಅಧಿಕಾರಿಗಳಾಗಿ ನೇಮಕವಾಗಿರುವ ಎಂ.ಕೆ ಶೃತಿ ಪತ್ರಿಕಾ ಗೋಷ್ಠಿಯನ್ನು ಏರ್ಪಡಿಸಿದ್ದರು.
ಈ ವೇಳೆ ಅವರು ಮಾತನಾಡಿ, ಕರ್ನಾಟಕ ಸಾರ್ವತ್ರಿಕ ಚುನಾವಣೆ 2023ರ ಸಂಬಂಧ ಚುನಾವಣಾ ಆಯೋಗದಿಂದ ಚುನಾವಣಾ ಪ್ರಕ್ರಿಯೆಗಳ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಅದರಂತೆ ದಿನಾಂಕ:13/04/2023 ರಿಂದ 20/04/2023 ರ ವರೆಗೂ ನಾಮಪತ್ರ ಸ್ವೀಕೃತಿ, ದಿನಾಂಕ:21/04/2023 ರಂದು ನಾಮಪತ್ರ ಪರಿಶೀಲನೆ ದಿನಾಂಕ: 24/04/2023 ರಂದು ನಾಮಪತ್ರ ವಾಪಸ್ಸು ಪಡೆಯಲು ಕೊನೆಯ ದಿನಾಂಕವಾಗಿರುತ್ತದೆ.
ಮತದಾನವು ದಿನಾಂಕ: 10/05/2023 ರಂದು ಹಾಗೂ ಮತ ಎಣಿಕೆ ಕಾರ್ಯವು ದಿನಾಂಕ 13/05/2023 ರಂದು ನಡೆಯುತ್ತದೆ. ತಾಲ್ಲೂಕು ಕಛೇರಿಯಲ್ಲಿ ಚುನಾವಣಾಧಿಕಾರಿಗಳ ಕಛೇರಿಯನ್ನು ತೆರೆಯಲಾಗಿದ್ದು ನಾಮಪತ್ರಗಳನ್ನು ಚುನಾವಣಾಧಿಕಾರಿಗಳ ಕಛೇರಿಯಿಂದ ಪಡೆಯಬಹುದಾಗಿರುತ್ತದೆ. ಹಾಗೂ ನಿಗಧಿತ ಅವಧಿಯಲ್ಲಿ ನಾಮಪತ್ರ ಸಲ್ಲಿಸಬಹುದಾಗಿರುತ್ತದೆ.
ದಿನಾಂಕ:29/03/2023 ರಿಂದ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಚುನಾವಣಾ ಪ್ರಚಾರಗಳ ಕಾರ್ಯಕ್ರಮಗಳನ್ನು ನಡೆಸಲು 24 ಗಂಟೆ ಮುಂಚಿತವಾಗಿ ಚುನಾವಣಾಧಿಕಾರಿಗಳ ಕಛೇರಿಯಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಕ್ಷೇತ್ರ ವ್ಯಾಪ್ತಿಯಲ್ಲಿ ಪ್ಲೆಕ್ಸ್, ಬಂಟಿಂಗ್ಸ್, ಅಳವಡಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಂದ ಸೂಕ್ತ ಕಿಮ್ಮತ್ತು ಪಾವತಿಸಿ ಅನುಮತಿ ಪಡೆಯಬೇಕಾಗಿರುತ್ತದೆ. ಮೈಕು, ಸ್ವೀಕರ್, ಹಾಗೂ ಡಿ.ಜೆ ಅಳವಡಿಸಿಕೊಳ್ಳಲು ಆರಕ್ಷಕರ ಇಲಾಖೆಯಲ್ಲಿ ಇಲಾಖೆಯಲ್ಲಿ ಅನುಮತಿ ಪಡೆಯಬೇಕಾಗಿರುತ್ತದೆ ಎಂದರು.
ಕಾರ್ಯಕ್ರಮಗಳನ್ನು ನಡೆಸಲು ಖಾಸಗಿ ಸ್ಥಳವಾದಲ್ಲಿ ಸ್ಥಳದ ಮಾಲೀಕರಿಂದ ಒಪ್ಪಿಗೆ ಪತ್ರ, ಸರ್ಕಾರಿ ಸ್ಥಳವಾಗಿದ್ದಲ್ಲಿ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯಬೇಕಾಗಿರುತ್ತದೆ. ಪ್ರಚಾರಕ್ಕೆ ಬಳಸುವ ಕರಪತ್ರಗಳನ್ನು ಮುದ್ರಿಸುವ ಸಮಯದಲ್ಲಿ ಕರಪತ್ರಗಳನ್ನು ಮುದ್ರಿಸುವ ಒಟ್ಟು ಸಂಖ್ಯೆ ಮತ್ತು ಮುದ್ರಣಾಲಯದ ವಿವರಗಳನ್ನು ನಮೂದಿಸಬೇಕಾಗಿರುತ್ತದೆ.
ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸಂಸ್ಥೆಗಳನ್ನು ಉಪಯೋಗಿಸುವಂತಿಲ್ಲ, ಧರ್ಮ, ಜಾತಿ, ಮಕ್ಕಳನ್ನು ಉಪಯೋಗಿಸಿಕೊಂಡು ಪ್ರಚಾರ ಮಾಡುವಂತಿಲ್ಲ ಹಾಗೂ ಇದಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವಂತಿಲ್ಲ. ಮತದಾರರಿಗೆ ಯಾವುದೇ ಆಸೆ-ಅಮಿಶಗಳನ್ನು ನೀಡಬಾರದು. ಪ್ರಚಾರಕ್ಕೆ ಬಳಸುವ ವಾಹನಗಳಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಬೇಕಾಗಿರುತ್ತದೆ.
ಚುನಾವಣಾ ಅಕ್ರಮಗಳು ನಡೆದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಿಂದ ನೇಮಿಸಲಾಗಿರುವ ಕಣ್ಣಾವಲುಪಡೆ ಹಾಗೂ ಸೆಕ್ಟರ್ ಅಧಿಕಾರಿಗಳಿಗೆ ತಿಳಿಯಪಡಿಸಬಹುದಾಗಿರುತ್ತದೆ. ಮತಗಟ್ಟೆ ಸುತ್ತಲೂ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುವುದು ನಿಷೇದಿಸಲಾಗಿದೆ. ಹಾಗೂ ಚುನಾವಾಣೆ ಪ್ರಾರಂಭಕ್ಕೆ 48 ಗಂಟೆ ಒಳಗಾಗಿ ಬಹಿರಂಗ ಪ್ರಚಾರ ಮುಗಿಸಬೇಕಾಗಿರುತ್ತದೆ ಎಂದರು.
ಈ ವೇಳೆ ತಹಶಿಲ್ದಾರ್ ದಯಾನಂದ, ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ಮೊದಲಾದವರಿದ್ದರು.