PLACE YOUR AD HERE AT LOWEST PRICE
ಕೆಜಿಎಫ್:ಗಣರಾಜ್ಯೋತ್ಸವ, ಮಹಾತ್ಮಗಾಂಧಿ ಜಯಂತಿಗಳಂದು ದೇಶದೆಲ್ಲೆಡೆ ಮಾಂಸದಂಗಡಿ ಮತ್ತು ಮದ್ಯದಂಗಡಿ ನಿಷೇಧ ಮಾಡುವ ರೀತಿಯಲ್ಲಿ ಏಪ್ರಿಲ್ 14ರ ಅಂಬೇಡ್ಕರ್ ಜಯಂತಿಗೂ ಸಹ ಮಾಂಸ ಮತ್ತು ಮದ್ಯದಂಗಡಿಗಳ ನಿಷೇಧ ಮಾಡಲು ಆದೇಶ ಹೊರಡಿಸಬೇಕೆಂದು ಡಿಎಸ್ಎಸ್ ಮುಖಂಡ ಎಪಿಎಲ್ ರಂಗನಾಥ್ ಆಗ್ರಹಿಸಿದರು.
ನಗರದ ತಾಲ್ಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಪ್ರತಿ ವರ್ಷ ಏಪ್ರಿಲ್ 5 ರಂದು ಬಾಬು ಜಗಜೀವನ್ರಾಮ್ ಜಯಂತಿ ನಿಗದಿಯಾಗಿದ್ದು, ಜಯಂತಿಯ ಆಚರಣೆಗೆ ಸಂಬಂಧಿಸಿದಂತೆ ರೂಪುರೇಷೆಗಳನ್ನುಸಿದ್ದಪಡಿಸಲು ತಾಲ್ಲೂಕು ಆಡಳಿತದ ವತಿಯಿಂದ ಈ ಬಾರಿ ಕೇವಲ ಎರಡು ದಿನಗಳು ಇರುವಾಗ ಪೂರ್ವಭಾವಿ ಸಭೆಯನ್ನು ಕರೆದಿರುವುದು ಸರಿಯಲ್ಲ.
ಮುಂದಿನ ಬಾರಿಯಿಂದ ಬಾಬು ಜಗಜೀವನ್ರಾಮ್ ದಿನಾಚರಣೆಗೆ ಕಾಲಾವಕಾಶ ಇರುವಂತೆಯೇ ಪೂರ್ವಭಾವಿ ಸಭೆಯನ್ನು ಕರೆಯಬೇಕೆಂದು ಸಭೆಯಲ್ಲಿ ಸಲಹೆ ನೀಡಿದರು. ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ, ಕಳೆದ ಮಾರ್ಚ್ 29 ರಿಂದ ವಿಧಾನಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದ್ದು, ಮೇ 15ರ ವರೆಗೆ ಮುಂದುವರೆಯಲಿದೆ.
ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಾಬು ಜಗಜೀವನ್ರಾಮ್ ರವರುಗಳ ಜಯಂತಿಗಳನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶವಿಲ್ಲದೇ ಇರುವುದರಿಂದ ಎಲ್ಲ ಇಲಾಖೆಗಳ ಮುಖ್ಯಸ್ಥರನ್ನು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಿ, ತಾಲ್ಲೂಕು ಆಡಳಿತ ಸೌಧದ ಎದುರಿನಲ್ಲಿ ಸರಳವಾಗಿ ಆಚರಿಸಲಾಗುವುದು.
ಈ ಬಾರಿ ಮೇ 10ರಂದು ಮತದಾನ ನಡೆದು 15ಕ್ಕೆ ನೀತಿ ಸಂಹಿತೆ ಮುಕ್ತಾಯವಾಗಲಿದ್ದು, ಆ ಬಳಿಕ ಬೇಕಾದರೆ ವಿಜೃಂಭಣೆಯಿಂದ ಅಂಬೇಡ್ಕರ್ ಜಯಂತಿಯನ್ನು ಆಚರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಕ್ಕೆ ಸಭೆಯಲ್ಲಿದ್ದ ದಲಿತ ಮುಖಂಡರು ಒಪ್ಪಿಗೆ ಸೂಚಿಸಿದರು.
ಮುಖಂಡರಾದ ಪಿಚ್ಚಳ್ಳಿ ಮಂಜು, ಬಿ.ಎಂ.ರಮೇಶ್, ಲಕ್ಷ್ಮಯ್ಯ, ಬಬ್ಲು, ಸಂತೋಷ್, ಕೆಂಚಪ್ಪ, ಶಿವ, ಸುಬ್ರಾಯಪ್ಪ, ತಾಪಂ ಇಒ ಮಂಜುನಾಥ್, ಪೌರಾಯುಕ್ತೆ ಅಂಬಿಕಾ, ಸಮಾಜ ಕಲ್ಯಾಣಾಧಿಕಾರಿ ಅಂಜಲಿದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ಮೊದಲಾದವರು ಇದ್ದರು.