PLACE YOUR AD HERE AT LOWEST PRICE
ಸಹಕಾರಿ ಸಂಸ್ಥೆಗಳಲ್ಲಿ ರಾಜಕೀಯಕ್ಕೆ ಅವಕಾಶ ನೀಡದೇ ರೈತರ ಹಿತ ಕಾಯುವ ಬದ್ದತೆಯೊಂದಿಗೆ ಕೆಲಸ ನಿರ್ವಹಿಸಬೇಕು ಎಂದು ಮಾಜಿ ಸಚಿವ ಹಾಗೂ ಇಪ್ಕೋಟೋಕಿಯೋ ವಿಮಾ ಕಂಪನಿ ಅಂತರರಾಷ್ಟ್ರೀಯ ಅಧ್ಯಕ್ಷ ಕೆ.ಶ್ರೀನಿವಾಸಗೌಡ ತಿಳಿಸಿದರು.
ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿ ಮದ್ದೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವತಿಯಿಂದ ನೂತನವಾಗಿ ತಾಲೂಕಿನ ಸೀತಿ ಗ್ರಾಮದಲ್ಲಿ ನಿರ್ಮಿಸಲಿರುವ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಡಿಸಿಸಿ ಬ್ಯಾಂಕ್ ದಿವಾಳಿಯಾದಾಗ ಮತ್ತು ನಂತರ ಉತ್ತಮ ಸ್ಥಿತಿಗೆ ಬಂದಾಗ ಎರಡೂ ಪರಿಸ್ಥಿತಿಗಳನ್ನು ಕಂಡಿದ್ದೇವೆ, ದಿವಾಳಿಯಾದಾಗ ಜಿಲ್ಲೆಯ ರೈತರು, ಮಹಿಳೆಯರಿಗೆ ಅನ್ಯಾಯವಾಯಿತು. ಕೇಂದ್ರ,ರಾಜ್ಯ ಸರ್ಕಾರಗಳ ಸಾಲ ಮನ್ನಾ ಯೋಜನೆಗಳ ಪ್ರಯೋಜನ ಸಿಗದಂತಾಯಿತು ಎಂದರು.
ಆದರೆ ಡಿಸಿಸಿ ಬ್ಯಾಂಕ್ ಬ್ಯಾಲಹಳ್ಳಿ ಗೋವಿಂದಗೌಡರು ಅಧ್ಯಕ್ಷರಾದ ನಂತರ ರಾಜ್ಯದಲ್ಲೇ ಅತ್ಯುತ್ತಮ ಬ್ಯಾಂಕ್ ಎಂಬಹೆಗ್ಗಳಿಕೆಗೆ ಪಾತ್ರವಾಗಿ ಜಿಲ್ಲೆಯ ರೈತರು, ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುವಂತಾಯಿತು ಮತ್ತು ರಾಜ್ಯ ಸರ್ಕಾರ ಜಾರಿಗೆ ತಂದ ಸಾಲ ಮನ್ನಾ ಯೋಜನೆಯಿಂದ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ರೈತರ ೩೮೦ ಕೋಟಿಗೂ ಅಧಿಕ ಸಾಲ ಮನ್ನಾ ಆಗಿ ರೈತರಿಗೆ ಪ್ರಯೋಜನವಾಯಿತು ಎಂದರು.
ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಚಂಜಿಮಲೆ ಬಿ.ರಮೇಶ್ ಮಾತನಾಡಿ, ಕೋಲಾರ ಡಿಸಿಸಿ ಬ್ಯಾಂಕ್ ನಿಂದ ನಮ್ಮ ಗ್ರಾಮ ಪಂಚಾಯ್ತಿಯ ಎಲ್ಲಾ ಗ್ರಾಮದ ರೈತರಿಗೂ ಬಡ್ಡಿ ರಹಿತ ಸಾಲವನ್ನು ನೀಡಿ ರೈತರು ಆರ್ಥಿಕತೆಯಲ್ಲಿ ಮುಂದೆ ಬರಲು ಸಹಕಾರ ನೀಡಲಾಗಿದೆ ಎಂದರು.
ಅದೇ ರೀತಿ ನಮ್ಮ ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರ ಸಂಘದಲ್ಲಿ ಮಹಿಳೆಯರು ಉತ್ತಮ ಠೇವಣಿ ಇಡುವ ಮೂಲಕ ಬ್ಯಾಂಕ್ ಆರ್ಥಿಕವಾಗಿಯೂ ಸದೃಢಗೊಳ್ಳಲು ಸಹಕರಿಸಿದ್ದಾರೆ ಎಂದ ಅವರು, ಮಹಿಳೆಯರಿಗೂ ಸಾಲ ಸೌಲಭ್ಯವನ್ನು ನೀಡಿದ್ದೇವೆ ಅವರಿಂದ ಉತ್ತಮ ರೀತಿಯಲ್ಲಿ ಮರುಪಾವತಿ ಆಗುತ್ತಿದೆ ಇದೇ ರೀತಿ ಸಂಘವನ್ನು ಮುನ್ನಡೆಸಿದರೆ ಪಂಚಾಯಿತಿಯ ಎಲ್ಲಾ ಮಹಿಳೆಯರಿಗೂ ಸಾಲ ನೀಡಲು ಸಾಧ್ಯವಾಗುತ್ತದೆ ಎಂದರು.
ರೈತರು ರೇಷ್ಮೆ ಹುಳ ಸಾಕಾಣಿಕೆಗೆ ಮನೆ ಕಟ್ಟಿಕೊಳ್ಳಲು ಆರ್ಥಿಕ ನೆರವು, ಚಂದ್ರಂಕಿ ಶೆಡ್ಡು ನಿರ್ಮಾಣಕ್ಕೆ , ಕೋಳಿ ಫಾರಂ ನಿರ್ಮಾಣಕ್ಕೆ, ಈ ಎಲ್ಲಾ ರೀತಿಯ ಸಾಲ ಸೌಲಭ್ಯಗಳನ್ನು ನಮ್ಮ ಸಹಕಾರ ಬ್ಯಾಂಕಿನಿಂದ ಮಾಡುತ್ತಿದ್ದೇವೆ ಈ ಎಲ್ಲಾ ರೀತಿಯ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಕಿಡಿಗೇಡಿಗಳು ಡಿಸಿಸಿ ಬ್ಯಾಂಕ್ ನಿಂದ ಮಹಿಳೆಯರಿಗೆ ನೀಡಿರುವ ಸಾಲವನ್ನು ಮರು ಪಾವತಿ ಮಾಡಬೇಡಿ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಇಂಥವರ ಮಾತುಗಳನ್ನು ಮಹಿಳೆಯರು ಕೇಳಬಾರದು ನಿಮಗೆ ಕೊಟ್ಟಿರುವ ಸಾಲವನ್ನು ಸಮಯಕ್ಕೆ ಸರಿಯಾಗಿ ಮರು ಪಾವತಿ ಮಾಡಿದರೆ ಇನ್ನೊಬ್ಬರಿಗೆ ಸಾಲ ನೀಡಲು ಸಹಾಯವಾಗುತ್ತದೆ ಎಂದರು.
ಮದ್ದೇರಿ ರೇಷ್ಮೆ ಬೆಳೆಗಾರರ ಸಹಕಾರದ ಸಂಘದ ಅಧ್ಯಕ್ಷರಾದ ಜಂಬಾಪುರ್ ವೆಂಕಟರಾವ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಂದ ಯಾವುದೇ ರೀತಿಯ ಸಾಲ ಸೌಲಭ್ಯಗಳು ದೊರೆಯುತ್ತಿಲ್ಲ ನಮ್ಮ ರೈತರು ಡಿಸಿಸಿ ಬ್ಯಾಂಕ್ ನಲ್ಲಿ ಸಾಲ ಸೌಲಭ್ಯ ಪಡೆಯುತ್ತಾರೆ ಡೆಪಾಸಿಟ್ ಮಾಡುವಾಗ ಮಾತ್ರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಹಣ ಇಡುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ರೀತಿ ಮಾಡಬೇಡಿ ನೀವು ಇಡುವ ಠೇವಣಿಗೆ ಸೂಕ್ತ ಬಡ್ಡಿ ನೀಡುತ್ತೇವೆ ಜೊತೆಗೆ ಇನ್ನೊಬ್ಬ ರೈತರಿಗೆ ಅನುಕೂಲವಾಗುತ್ತದೆ ನಮ್ಮ ಬ್ಯಾಂಕಿನಿಂದ ಕೊಡುತ್ತಿರುವ ಸಾಲಕ್ಕೆ ಕಡಿಮೆ ಬಡ್ಡಿ ಸಮಯಕ್ಕೆ ಸರಿಯಾಗಿ ಪಾವತಿ ಮಾಡುವುದರಿಂದ ಬಡ್ಡಿಯನ್ನು ಸಹ ತೆಗೆದುಕೊಳ್ಳುತ್ತಿಲ್ಲ ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರ ಸಂಘದಲ್ಲಿ ಈ ಭಾಗದ ರೈತರು ಪಡೆದಿರುವಂತಹ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡುತ್ತಿದ್ದಾರೆ ಇದು ಹೆಮ್ಮೆಯ ಸಂಗತಿ ಎಂದರು.
ಸ್ತ್ರೀಶಕ್ತಿ ಸಂಘದವರು ಸಹ ಸಾಲವನ್ನು ತೆಗೆದುಕೊಂಡು ಮರುಪಾವತಿ ಮಾಡುವುದರಲ್ಲಿ ಮೇಲುಗೈ ಸಾಧಿಸಿದ್ದಾರೆ ಈ ಸಂಘಕ್ಕೆ ಸೇರಿದ ಪ್ರತಿಯೊಂದು ಗ್ರಾಮದ ಪ್ರತಿಯೊಂದು ಮನೆಗೂ ಸಾಲ ಸೌಲಭ್ಯವನ್ನು ಮುಂದಿನ ದಿನಗಳಲ್ಲಿ ನೀಡುತ್ತೇವೆ ಇದರಲ್ಲಿ ಯಾವುದೇ ರೀತಿಯ ಸಂಶಯ ಬೇಡ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಅನಿಲ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ,ಕೆ.ವಿ.ದಯಾನಂದ್, ಮದ್ದೇರಿ ರೇಷ್ಮೆ ಬೆಳೆಗಾರ ಸಹಕಾರದ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸಗೌಡ, ದಯಾನಂದ, ಸೀತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸೀತಾಲಕ್ಷ್ಮಮ್ಮ, ಉಪಾಧ್ಯಕ್ಷರಾದ ಮಂಜುಳಾ, ಗ್ರಾಮ ಪಂಚಾಯತಿ ಸದಸ್ಯರಾದ ಮುನಿರಾಜು, ರೇಷ್ಮೆ ಬೆಳೆಗಾರರ ಸಹಕಾರ ಸಂಘದ ಉಪಾಧ್ಯಕ್ಷರಾದ ನಾರಾಯಣಸ್ವಾಮಿ, ಎಂ ವೆಂಕಟಸ್ವಾಮಿ, ಮುನಿರಾಮಕ್ಕ, ಮಾಜಿ ಅಧ್ಯಕ್ಷ ಗೋಪಾಲ್ ರೆಡ್ಡಿ, ಮಠಪುರ ಶ್ರೀನಿವಾಸ್, ಬೈರೇಗೌಡ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯದ ಭಾಸ್ಕರ್ ಮತ್ತಿತರರು ಹಾಜರಿದ್ದರು.