PLACE YOUR AD HERE AT LOWEST PRICE
ಮಹಿಳೆಯರು ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಉದ್ದಿಮೆದಾರರಾಗಿ ಇತರೆ ನಿರುದ್ಯೋಗಿಗಳಿಗೂ ಉದ್ಯೋಗ ಕಲ್ಪಿಸಬೇಕೆಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಉಪ ನಿರ್ದೇಶಕ ಎನ್.ರವಿಚಂದ್ರ ಹೇಳಿದರು.
ಕೋಲಾರ ನಗರದ ಎಚ್.ಡಿ.ಆರ್.ಸಿ ಕೌಶಲ್ಯ ತರಭೇತಿ ಸಂಸ್ಥೆಯಲ್ಲಿ ವಿವಿಧ ಇಲಾಖೆಗಳಸಹಯೋಗದಲ್ಲಿ ೨೦೨೨-೨೩ ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮಶೀಲತಾ ಪ್ರೇರಣಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡುತ್ತಿದ್ದರು.
ಸ್ವಯಂ ಉದ್ದಿಮೆದಾರರು ಸರಕಾರ ಸಾಕಷ್ಟು ಯೋಜನೆಗಳನ್ನು ರೂಪಿಸಿದ್ದು, ವಿವಿಧ ಇಲಾಖೆಗಳ ಮೂಲಕ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ, ಸರಕಾರದ ಎಲ್ಲಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡು ಸ್ವಯಂ ಉದ್ಯೋಗಿಗಳಾಗುವತ್ತ ತರಬೇತುದಾರರು ಗುರಿ ಹೊಂದಿ ತಲುಪಬೇಕೆಂದರು.
ಜಿಲ್ಲಾ ಕೈಗಾರಿಕಾ ಇಲಾಖೆಯಿಂದ ಪಿಎಂಇಜಿಪಿ ಮತ್ತಿತರ ಸಾಲ ಯೋಜನೆಗಳನ್ನು ನೀಡಲಾಗುತ್ತಿದ್ದು, ಮೂರು ದಿನಗಳ ಶಿಬಿರದಲ್ಲಿ ತರಬೇತಿ ಪಡೆದ ಎಲ್ಲರೂ ಉದ್ದಿಮೆದಾರರಾದರೆ ಶಿಬಿರ ಸಾರ್ಥಕವಾದಂತೆ ಎಂದು ಅವರು ಅಭಿಪ್ರಾಯಪಟ್ಟರು.
ಸಿಡಾಕ್ ತರಬೇತುದಾರ ಆರ್.ಕಲ್ಯಾಣಕುಮಾರ್ ಮಾತನಾಡಿ, ಕೋಲಾರ ಮತ್ತು ಬಂಗಾರಪೇಟೆ ತಾಲೂಕುಗಳಲ್ಲಿ ಟೈಲರಿಂಗ್ ತರಬೇತಿ ಪಡೆದವರು ೬೧ ಮಹಿಳೆಯರು ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದು, ಸ್ವಯಂ ಉದ್ಯೋಗಿಗಳಾಗುವುದರ ಜೊತೆಗೆ ಉದ್ದಿಮೆದಾರರಾಗುವತ್ತಲೂ ಅವರನ್ನು ಪ್ರೇರೇಪಿಸಲಾಗಿದೆಯೆಂದು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಶಿಬಿರಾರ್ಥಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಶಿಬಿರದಲ್ಲಿ ಭಾಗವಹಿಸಿದ್ದ ಎಲ್ಲಾ ಮಹಿಳೆಯರಿಗೂ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.