PLACE YOUR AD HERE AT LOWEST PRICE
ಮುಳಬಾಗಿಲು::ಡಿಸಿಸಿ ಬ್ಯಾಂಕ್ ಸಾಲ ವಸೂಲಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಬೈಕ್ ಗೆ ಮಹಿಳೆಯರು ಬೆಂಕಿ ಹಚ್ಚಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದು ಇದು ಸುಳ್ಳು ಸುದ್ದಿಯಾಗಿದ್ದು, ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಿಲ್ಲ ಎಂದು ಕೋಲಾರ ಎಸ್.ಪಿ ಎಂ.ನಾರಾಯಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಗೂಕುಂಟೆ ಸಹಕಾರ ಸಂಘದ ಸಿಬ್ಬಂದಿ ಜೋಸೆಫ್ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಿದ್ದ ಸಾಲ ವಸೂಲಿಗೆಂದು ಬಿಸ್ನಹಳ್ಳಿಗೆ ಭೇಟಿ ನೀಡಿ ಸಾಲ ಕಟ್ಟುವಂತೆ ಕೇಳೀದ್ದಾರೆ. ಆಗ ಸಂಘದ ಮಹಿಳೆಯರು ಚುನಾವಣಾ ಪ್ರಚಾರದ ವೇಳೆ ಕಾಂಗ್ರೇಸ್ ಗೆದ್ದರೆ ಮಹಿಳಾ ಸಂಘಗಳ ಸಾಳ ಮನ್ನಾ ಮಾಡುತ್ತೇವೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹೇಳಿದ್ದರು.
ಈಗ ಕಾಂಗ್ರೇಸ್ ಗೆದ್ದು ರಾಜ್ಯವಾಳುತ್ತಿದೆ. ಸಿದ್ದರಾಮಯ್ಯರವರು ಮತ್ತೆ ಮುಖ್ಯಮಂತ್ರಿಯಾಗಿದ್ದಾರೆ. ಅವರು ಮಾತು ಕೊಟ್ಟಿದ್ದಾರೆ. ಹಾಗಾಗಿ ನಾವು ಸಾಲ ಕಟ್ಟುವುದಿಲ್ಲ ಎಂದು ಹೇಳಿ ಬ್ಯಾಂಕ್ ಸಿಬ್ಬಂದಿಯನ್ನು ಊರಿಂದ ಹೊರಹೋಗುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಸ್ವಲ್ಪ ಸಮಯ ಕಾಲ ತಳ್ಳಾಟ ನೂಕಾಟ ನಡೆದಿದೆ.
ಸಾಲ ವಸೂಲಿಗೆಂದು ಬಂದಿದ್ದ ಸಿಬ್ಬಂದಿ ಜೋಸೆಫ್ ಸಾಲ ಮನ್ನಾ ಕುರಿತು ಯಾವುದೇ ಆದೇಶ ಬಂದಿಲ್ಲವಾದ್ದರಿಂದ ಸ್ತ್ರೀ ಶಕ್ತಿ ಸಂಘಗಳು ಪಡೆದಿರುವ ಸಾಲವನ್ನು ಕಟ್ಟಲೇಬೇಕು ಎಂದು ತಿಳಿಸಿದ್ದಾರೆ. ಆಗ ಮಹಿಳೆಯರಲ್ಲೇ ಎರಡು ಗುಂಪುಗಳಾಗಿ ಸಾಲ ಕಟ್ಟುವ ವಿಷಯದಲ್ಲಿ ಆರೋಪ ಪ್ರತ್ಯಾರೋಪಗಳು ನಡೆದಿವೆ.
ಇದೇ ಸಂದರ್ಭಕ್ಕೆ ಗ್ರಾಮದಲ್ಲಿ ದ್ವಿಚಕ್ರವಾಹವೊಂದಕ್ಕೆ ಬೆಂಕಿ ಬಿದ್ದು ಸುಡುತ್ತಿರುವುದನ್ನು ನೋಡಿದ ಕೆಲವರು ವಿಡಿಯೋ ಮಾಡಿ ಡಿಸಿಸಿ ಬ್ಯಾಂಕ್ ಸಾಲ ಕಟ್ಟುವುದಿಲ್ಲ ಎಂದು ಸಾಲ ವಸೂಲಿಗೆ ಬಂದಿದ್ದ ಜೋಸೆಫ್ ರ ಬೈಕ್ ಗೆ ಬೆಂಕಿ ಹಚ್ಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಸಾಲ ವಸೂಲಿಗೆ ಬಂದ ಡಿಸಿಸಿ ಬ್ಯಾಂಕ್ ಸಿಬ್ಬಂದಿ ಬೈಕ್ ಗೆ ಬೆಂಕಿ ಹಚ್ಚಿ ಸ್ತ್ರೀ ಶಕ್ತಿ ಸಂಘದ ಮಹಿಳೆಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ ಎಂದು ಬಿಂಬಿಸಲಾಗಿತ್ತು ಜೊತೆಗೆ ಇದೇ ಸುಳ್ಳು ಸುದ್ದಿ ಮತ್ತು ವಿಡಿಯೋಗಳನ್ನು ಕೆಲವು ಟಿವಿ ಚಾನಲ್ ಗಳಿಗೂ ನೀಡಿದ್ದು ಸುದ್ದಿ ಪ್ರಚಾರವಾಗಿದೆ.
ಈ ಕುರಿತು ಜಿಲ್ಲಾ ಎಸ್.ಪಿ ಎಂ.ನಾರಾಯಣ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ, ಡಿಸಿಸಿ ಬ್ಯಾಂಕ್ ಸಾಲ ವಸೂಲಿಗೆಂದು ಹೋಗಿದ್ದ ಸಿಬ್ಬಂದಿ ವಾಹನಕ್ಕೆ ಯಾರೂ ಬೆಂಕಿ ಹಚ್ಚಿಲ್ಲ. ಬದಲಾಗಿ ಅದೇ ಗ್ರಾಮದ ಮಂಜು ಎಂಬುವವರು ತಮ್ಮ ಬೈಕ್ ಗೆ ತಾವೇ ಬೆಂಕಿ ಹಚ್ಚಿ ಅದನ್ನು ವಿಡಿಯೋ ಮಾಡಿ ಸಾಲ ವಸೂಲಿಗೆ ಬಂದ ಸಿಬ್ಬಂದಿ ಬೈಕ್ ಗೆ ಮಹಿಖಳೆಯರು ಬೆಂಕಿ ಹಚ್ಚಿದ್ದಾರೆಂದು ಸುಳ್ಳು ಹಬ್ಬಿಸಿದ್ದಾರೆ.
ಘಟನೆಯನ್ನು ಬೇರೆ ರೀತಿ ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ನಂತರ ಮಾದ್ಯಮಗಳಿಗೆ ವಿಡಿಯೋ ನೀಡಿರುತ್ತಾರೆ. ಈ ಬಗ್ಗೆ ಡಿ.ವೈ.ಎಸ್.ಪಿ ಟಿ.ಆರ್.ಜಯಶಂಕರ್ ಮತ್ತು ಆರಕ್ಷಕ ಉಪ ನಿರೀಕ್ಷಕ ವಿಠಲ್ ವೈ ತಳವಾರ್ ಮತ್ತು ಸಿಬ್ಬಂದಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ವಿಷಯ ತಿಳಿದಿದೆ ಎಂದು ಸ್ಪಷ್ಟಪಡಿಸಿದ್ದಾರೆ.