PLACE YOUR AD HERE AT LOWEST PRICE
ಕೋಲಾರ:ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆಗೆ ಒಳಪಡಿಸಬೇಕೆಂದು ಸಿಐಟಿಯು ರಾಜ್ಯ ಮುಖಂಡ ಹಾಗೂ ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಖಜಾಂಚಿ ಲಿಂಗರಾಜು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಸಂಘಟನಾ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಂ ಹೆಬ್ಬಾರ್, ಕಲ್ಯಾಣ ಮಂಡಳಿಯ ನಿಧಿಯನ್ನು ದೋಚಲು ಕಾನೂನು, ನಿಯಮಾವಳಿಗಳನ್ನು ಗಾಳಿಗೆ ತೂರಿ, ಕಮೀಷನ್ ಹೊಡೆಯಲು ಬೇಕಾಬಿಟ್ಟಿ ಕಾಮಗಾರಿಗಳ ವಸ್ತುಗಳ ಖರೀದಿ ವ್ಯವಹಾರ ನಡೆಸಿದ್ದಾರೆ. ಕಾರ್ಮಿಕರ ಅಭಿವೃದ್ಧಿಗೆ ಬಳಸಬೇಕಾದ ಹಣದ ಕಾರ್ಮಿಕರು ಅಲ್ಲದವರು ದೋಚಿದ್ದಾರೆ ಕೂಡಲೇ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಒಳಿತಿಗಾಗಿ ಶ್ರಮಿಕರ ಬವಣೆಗೆ ಇರುವ ಕಲ್ಯಾಣ ಮಂಡಳಿಯು ಫಲಾನುಭವಿಗಳಿಗೆ ವಿತರಿಸುವಾಗ ಡಿಬಿಟಿ ಮೂಲಕವೇ ನೀಡಬೇಕೆಂದು ಕಾನೂನಿನ ಪ್ರಕಾರ ನಿಯಮಾವಳಿಗಳು ಇದ್ದರೂ ಖರೀದಿ ವ್ಯವಹಾರದಲ್ಲಿ ಮುಳುಗಿ ಸಾವಿರಾರು ಕೋಟಿ ರೂಪಾಯಿಗಳ ಗುಳುಂ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು. ಈ ವಿಚಾರದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ತಡಮಾಡದೇ ತನಿಖೆಗೆ ಆದೇಶಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಸರಕಾರವು ಕೂಡ ಭ್ರಷ್ಟಾಚಾರಕ್ಕೆ ಸಮ್ಮತಿಸಿದಂತಾಗುತ್ತದೆ ಎಂದರು.
ಕಾರ್ಮಿಕ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು, ಆಗ ಮಾತ್ರವೇ ಬೋಗಸ್ ತಡೆಯಬಹುದು ೨೦೨೨ – ೨೩ ನೇ ಸಾಲಿನ ಶೈಕ್ಷಣಿಕ ಸಹಾಯಧನ ಈವರೆಗೂ ಬಿಡುಗಡೆ ಮಾಡದಿರುವುದು ಸರಿಯಲ್ಲ, ಕೂಡಲೇ ಧನಸಹಾಯವನ್ನು ಬಿಡುಗಡೆ ಮಾಡಬೇಕು ಈ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿಗೆ ಆಹ್ವಾನಿಸಬೇಕೆಂದು ಆಗ್ರಹಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕಾರ್ಮಿಕ ವರ್ಗವು ಬಿಜೆಪಿ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಮತ್ತು ಅದರ ಭ್ರಷ್ಟಾಚಾರದ ವಿರುದ್ಧ ಮತ ಚಲಾಯಿಸಿದ್ದಾರೆ. ಅದರ ಪರಿಣಾಮವೇ ಕಾಂಗ್ರೆಸ್ ನೇತೃತ್ವದ ಸರ್ಕಾರ ರಚನೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಭೀಮರಾಜ್, ಕಾರ್ಯಾಧ್ಯಕ್ಷ ಮಂಜುನಾಥ್, ಖಜಾಂಚಿ ಆಶಾ, ಸಿಐಟಿಯು ಮುಖಂಡ ವಿಜಯಕೃಷ್ಣ ಮುಂತಾದವರು ಇದ್ದರು.