PLACE YOUR AD HERE AT LOWEST PRICE
ಬಂಗಾರಪೇಟೆ:ಮಣಿಪುರ ರಾಜ್ಯದಲ್ಲಿ ಇತ್ತೀಚಿಗೆ ಬುಡಕಟ್ಟು ಜನಾಂಗದ ಮಹಿಳೆಯರನ್ನು ವಿವಸ್ತ್ರಗೊಳಿಸಿ ಅತ್ಯಾಚಾರ ಮಾಡಿ ಮೆರವಣಿಗೆ ಮಾಡಿದ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸಿ ಗಲ್ಲಿಗೇರಿಸಬೇಕೆಂದು ದಲಿತ ಸಮಾಜ ಸೇನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸೂಲಿಕುಂಟೆ ಆನಂದ್ ಒತ್ತಾಯ ಮಾಡಿದರು.
ಪಟ್ಟಣದ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಉಪತಹಶಿಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಪತ್ರ ನೀಡಿ ಅವರು ಮಾತನಾಡಿ, ಇಡೀ ದೇಶವೇ ತಲೆತಗ್ಗಿಸುವಂತಹ, ಹೆಣ್ಣು ಕುಲಕ್ಕೆ ಕಳಂಕ ತರುವಂತಹ ಅವಮಾನ ಕೃತ್ಯ ಮಣಿಪುರ ರಾಜ್ಯದಲ್ಲಿ ನಡೆದಿದೆ. ಒಂದು ಕ್ಷಣ ದೇಶವೇ ಬೆಚ್ಚಿ ಬೀಳುವಂತಹ ದುರ್ಘಟನೆ ನಡೆದಿದೆ. ಅಲ್ಲಿನ ಸರ್ಕಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ವಿಫಲವಾಗಿದೆ. ಕೇಂದ್ರ ಸರ್ಕಾರ ಸಹ ಮೌನವಾಗಿರುವುದು ನೋವಿನ ಸಂಗತಿ ಎಂದರು.
ಭಾರತ ಮಾತೆಗೆ ಜೈ ಅನ್ನುವ ನಾವು ಅದೇ ಮಾತೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರಿವ ಘಟನೆ ಹೆಣ್ಣು ಕುಲಕ್ಕೆ ಅವಮಾನ ಮಾಡಿದಂತಾಗಿದೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಕೂಡಲೇ ಮಣಿಪುರ ಸರ್ಕಾರವನ್ನು ವಜಾ ಗೊಳಿಸಬೇಕು. ಅಲ್ಲಿನ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಧ್ಯಪ್ರವೇಶಿಸಿ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಕ್ರಮ ಕೈಗೊಂಡು, ಮಹಿಳೆಯರಿಗೆ ರಕ್ಷಣೆ ನೀಡಿ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮಹಿಳೆಯರಿಗೆ ರಕ್ಷಣೆ ಮತ್ತು ನ್ಯಾಯ ಸಿಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಇಡೀ ರಾಜ್ಯದ್ಯಂತ ಉಗ್ರ ಹೋರಾಟವನ್ನು ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಮಾಜಸೇನೆಯ ಪದಾಧಿಕಾರಿಗಳಾದ ದ್ರಾಕ್ಷಾಯಿಣಿ,ಮಂಜುಳಾ, ಕವಿತಾ,ಅಯ್ಯಪ್ಪ, ಕರುಣ,ನಾಗೇಶ್, ಶೇಖರ್, ವೆಂಕಟೇಶ್,ಗೌತಮ್, ಮೂರ್ತಿ, ನಾಗರಾಜ್, ಹರೀಶ್ ಮೊದಲಾದವರು ಇದ್ದರು.