PLACE YOUR AD HERE AT LOWEST PRICE
ಕೋಲಾರ:ಸರ್ಕಾರಿ ಶಾಲೆ ಎಂದರೆ ತಾತ್ಸಾರದ ಮನೋಭಾವ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆ ಮತ್ತು ಬಡ ವಿದ್ಯಾರ್ಥಿಗಳ ಸಬಲೀಕರಣಕ್ಕೆಂದೇ ಕಾರ್ಯೋನ್ಮುಖವಾಗಿದೆ ಧ್ರುವ ಚಾರಿಟಬಲ್ ಟ್ರಸ್ಟ್.
ಹೌದು, ಕೋಲಾರ ಜಿಲ್ಲೆಯ ಮುಳಬಾಗಿಲು ನಗರದಲ್ಲಿ ಕಳೆದ ಆರು ತಿಂಗಳಿಂದ ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ಅಲ್ಲಿನ ಸಮಾಜ ಸೇವಕ ನಾಗರಾಜ್ ಅವರು ಟ್ರಸ್ಟ್ ಸ್ಥಾಪಿಸಿದರು.
ಟ್ರಸ್ಟ್ ನ ಕಾರ್ಯದರ್ಶಿ ಶಿವಶಂಕರ್ ರೆಡ್ಡಿ ,ಕ್ರಿಯಾಶೀಲ ಸದಸ್ಯ ಕೂತಂಡಹಳ್ಳಿ ಶ್ರೀಹರಿ, ಮತ್ತು ಸುಬ್ರಹ್ಮಣ್ಯ ರೆಡ್ಡಿ ಟ್ರಸ್ಟ್ ನ ಗುರಿ ಉದ್ದೇಶಗಳಿಗಾಗಿ ಪ್ರತಿ ನಿತ್ಯ ಕೆಲಸ ಮಾಡುತ್ತಿದ್ದಾರೆ.
ಕೋವಿಡ್ ಸಂದರ್ಭದಲ್ಲಿ ಜನರ ಸಂಕಷ್ಟಗಳನ್ನು ಕಣ್ಣಾರೆ ಕಂಡ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಅವರು, ಬಡ ಮಕ್ಕಳಿಗೆ ಸಹಾಯ ಮಾಡಬೇಕೆಂಬ ಮಹದಾಸೆಯನ್ನು ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕ ಸಹಾಯ ಮಾಡಲು ಮುಂದಾಗಿದ್ದಾರೆ.
ಇಲ್ಲಿಯ ತನಕ ಮುಳಬಾಗಿಲು ತಾಲ್ಲೂಕಿನ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯ ಹಸ್ತ ನೀಡುತ್ತಿದ್ದ ದ್ರುವ ಚಾರಿಟಬಲ್ ಟ್ರಸ್ಟ್ ಇದೀಗ ತನ್ನ ಸೇವೆಯನ್ನು ಕೋಲಾರ ಜಿಲ್ಲೆಯ ವ್ಯಾಪ್ತಿಗೆ ವಿಸ್ತರಿಸಿಕೊಂಡಿದೆ.
ಕಳೆದ ಒಂದು ವಾರದಿಂದ ಜಿಲ್ಲೆಯ ಇತರೆ ತಾಲ್ಲೂಕುಗಳ ಶಾಲೆಗಳ ಮಕ್ಕಳಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗುವಂತೆ ಕ್ರೀಡಾ ಸಮವಸ್ತ್ರ ವಿತರಣೆ ಮಾಡುವ ಮೂಲಕ ಕ್ರೀಡೆಯಲ್ಲೂ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಇಂದು ಕೋಲಾರ ಸರ್ಕಾರಿ ಕಾನೂನು ಕಾಲೇಜಿನ ಕ್ರೀಡಾಪಟುಗಳಿಗೆ ಕಾಲೇಜಿನ ಪ್ರಾಂಶುಪಾಲರ ಜೊತೆಗೆ ಪ್ರಾಧ್ಯಾಪಕಿ ಡಾ.ಪ್ರಸನ್ನ ಕುಮಾರಿ ಕ್ರೀಡಾ ಸಮವಸ್ತ್ರ ವಿತರಣೆ ಮಾಡಿದರು.
ಇದೇ ರೀತಿ ಜಿಲ್ಲೆಯ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹ ಟ್ರಸ್ಟ್ ಸಹಾಯ ಮಾಡಬೇಕೆಂಬ ಉದ್ದೇಶ ಹೊಂದಿದೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ಸಹ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸೆಡ್ಡು ಹೊಡೆಯುವಂತೆ ಅಭಿವೃದ್ಧಿಗೊಳಿಸಲು ಶ್ರಮಿಸುವ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಕಡೆ ಹೆಜ್ಜೆ ಹಾಕಿರುವ ಪೋಷಕರು ಮರಳಿ ಸರ್ಕಾರಿ ಶಾಲೆಗಳ ಕಡೆಗೆ ಮುಖ ಮಾಡುವಂತೆ ಬದಲಾವಣೆಗೆ ಬದ್ದವಾಗಿದೆ ಅಂತಾರೆ ಸದಸ್ಯ ಕೂತಂಡಹಳ್ಳಿ ಶ್ರೀಹರಿ.
ಒಟ್ಟಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಉಳಿವು ಮತ್ತು ಬಡ ವಿದ್ಯಾರ್ಥಿಗಳ ಸಬಲೀಕರಣಕ್ಕೆ ಸಂಸ್ಥೆಯೊಂದು ಮುಂದಾಗಿರುವುದು ಇತರೇ ಸಂಸ್ಥೆಗಳೂ ಮಾದರಿಯಾಗಿದೆ.