PLACE YOUR AD HERE AT LOWEST PRICE
ಕಾವೇರಿ ಜಲಾನಯನ ಪ್ರದೇಶದ ಕುರುವೈ ಬೆಳೆ ರೈತರು ಮಳೆ ಕೊರತೆಯಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಕಾರಣ ತಾವು ತಮಿಳುನಾಡಿಗೆ ನೀಡಬೇಕಾದ ಕಾವೇರಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರಕ್ಕೆ ಸೂಚನೆ ನೀಡಲು ತಕ್ಷಣ ಮಧ್ಯಪ್ರವೇಶಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಪತ್ರ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ನಿಗದಿಪಡಿಸಿದ ನೀರಿನ ಪಾಲನ್ನು ಕರ್ನಾಟಕ ಬಿಡುತ್ತಿಲ್ಲ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನಗಳನ್ನು ಸಹ ಅನುಸರಿಸುತ್ತಿಲ್ಲ ಎಂದು ಸ್ಟಾಲಿನ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ
ಪ್ರಸಕ್ತ 2023-2024 ನೀರಿನ ವರ್ಷದಲ್ಲಿ, ಕರ್ನಾಟಕವು ಜೂನ್ 1 ರಿಂದ ಜುಲೈ 31 ರವರೆಗೆ ಬಿಳಿಗೊಂಡ್ಲು ಪ್ರದೇಶಕ್ಕೆ 40.4 ಟಿಎಂಸಿಗೆ ಬದಲಾಗಿ 11.6 ಟಿಎಂಸಿ ನೀರನ್ನು ಮಾತ್ರ ಬಿಡುಗಡೆ ಮಾಡಿದೆ. ಬಾಕಿಯುಳಿದ 28.8 ಟಿಎಂಸಿಯಷ್ಟು ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿಲ್ಲ. ಕರ್ನಾಟಕದಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ನಾಲ್ಕು ಪ್ರಮುಖ ಜಲಾಶಯಗಳ ಒಟ್ಟು ಸಾಮರ್ಥ್ಯದ 114.6 ಟಿಎಂಸಿಯಲ್ಲಿ ಪ್ರಸ್ತುತ 91 ಟಿಎಂಸಿ ನೀರು ಸಂಗ್ರಹವಿದೆ ಎಂದು ಎಂ ಕೆ ಸ್ಟಾಲಿನ್ ತಿಳಿಸಿದ್ದಾರೆ.
ಭಾರತದ ಇತರ ಭಾಗಗಳಿಗೆ ಹೋಲಿಸಿದರೆ, ತಮಿಳುನಾಡಿನ ಕಾವೇರಿ ನದಿ ಭೂಮಿಯಲ್ಲಿ ಈ ಬಾರಿ ಮುಂಗಾರು ಮಳೆ ಕಡಿಮೆ ಬಿದ್ದಿದೆ. ಆದ್ದರಿಂದ, ಕುರುವೈ ಕೃಷಿ ಮತ್ತು ಸಾಂಬಾ ಭತ್ತದ ಬೆಳೆಗಳ ಬಿತ್ತನೆಯು ಮೆಟ್ಟೂರು ಜಲಾಶಯದಿಂದ ನೀರನ್ನು ಬಿಡುಗಡೆ ಮಾಡುವುದರ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಇದು ಕರ್ನಾಟಕದಿಂದ ಪಡೆಯುವ ಕಾವೇರಿ ನೀರಿನ ಮೇಲೆ ಮಾತ್ರ ಅವಲಂಬಿತವಾಗಿರುತ್ತದೆ ಎಂದು ಸ್ಟಾಲಿನ್ ಪತ್ರದಲ್ಲಿ ವಿವರಿಸಿದ್ದಾರೆ.
ಕಾವೇರಿ ನದಿ ಮುಖಜಭೂಮಿಯ ಜೀವನಾಡಿಯಾಗಿರುವ ತಮಿಳುನಾಡಿನ ಮೆಟ್ಟೂರು ಜಲಾಶಯದಲ್ಲಿ ಆಗಸ್ಟ್ 2 ಕ್ಕೆ ಕೇವಲ 26.6 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಕುಡಿಯುವ ನೀರು ಮತ್ತು ಇತರ ಅಗತ್ಯಗಳಿಗೆ ಒದಗಿಸಿದ ನಂತರ ಜಲಾಶಯದಲ್ಲಿ ಕುರುವೈ ಬೆಳೆಗೆ ಲಭ್ಯವಿರುವ ನೀರು ಕೇವಲ 15 ದಿನಗಳವರೆಗೆ ಮಾತ್ರ ಸಾಲುತ್ತದೆ. ಪೂರ್ಣ ಇಳುವರಿಯನ್ನು ಪಡೆಯಬೇಕಾದರೆ ಈ ಪ್ರದೇಶದಲ್ಲಿ 45 ದಿನಗಳವರೆಗೆ ನೀರು ಬೇಕಾಗುತ್ತದೆ”ಎಂದು ಪತ್ರದಲ್ಲಿ ಸ್ಟಾಲಿನ್ ಸೂಚಿಸಿದ್ದಾರೆ.
ಈ ವಿಚಾರವನ್ನು ಮುನ್ನೆಚ್ಚರಿಕಾ ಕ್ರಮವಾಗಿ ತಮಿಳುನಾಡು ಸರ್ಕಾರವು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಗಮನಕ್ಕೂ ತಂದಿದ್ದೇವೆ. ಹೀಗಾಗಿ, ಕೂಡಲೇ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿ ಹಾಗೂ ಸುಪ್ರೀಂ ಕೋರ್ಟ್, ಕಾವೇರಿ ನದಿ ನೀರು ಪ್ರಾಧಿಕಾರದ ಆದೇಶಕ್ಕೆ ಬದ್ಧರಾಗಿರುವಂತೆ ನಿರ್ದೇಶಿಸುವಂತೆ ಸ್ಟಾಲಿನ್ ಹೇಳಿದ್ದಾರೆ.
ಇದೇ ವೇಳೆ ಕರ್ನಾಟಕ ರಾಜ್ಯದಲ್ಲಿ ಕಬಿನಿ ಜಲಾಶಯ ಪೂರ್ಣ ತುಂಬಿದ್ದರೂ ನೀರು ಬಿಟ್ಟಿಲ್ಲ. ಇನ್ನು ಮಿಕ್ಕ ಜಲಾಶಯಗಳಲ್ಲಿ ಶೇ. 80ರಷ್ಟು ನೀರಿದೆ, ನಿರಂತರ ಒಳ ಹರಿವು ಇದೆ. ಆದರೂ ನೀರು ಬಿಡುತ್ತಿಲ್ಲ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೆ ಕೇಂದ್ರ ಸರ್ಕಾರ ಬಾಸ್ಮತಿ ಅಲ್ಲದ ಅಕ್ಕಿಯ ರಫ್ತನ್ನು ನಿಷೇಧಿಸಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಆದ ಕಾರಣ ಕಾವೇರಿ ಜಲಾನಯನ ಪ್ರದೇಶದಲ್ಲಿ ಕುರುವೈ ಭತ್ತದ ಬೆಳೆ ಮತ್ತು ನಮ್ಮ ರೈತರ ಜೀವನಾಡಿಯನ್ನು ರಕ್ಷಿಸಲು ನಿಮ್ಮ ತುರ್ತು ಮಧ್ಯಸ್ಥಿಕೆ ಅತ್ಯಂತ ಮುಖ್ಯವಾಗಿದೆ ಎಂದು ಪತ್ರದಲ್ಲಿ ಸ್ಟಾಲಿನ್ ತಿಳಿಸಿದ್ದಾರೆ.