PLACE YOUR AD HERE AT LOWEST PRICE
ಕೆಜಿಎಫ್:ದಿನಾಂಕ:ಕ್ಯಾಸಂಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮರದಘಟ್ಟ ಗ್ರಾಮದಲ್ಲಿ, ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಕಲ್ಲು ಬಂಡೆಯನ್ನು ಸ್ಪೋಟಿಸಲಾಗುತ್ತಿದೆ ಎಂಬ ಮಾಹಿತಿಯ ಮೇರೆಗೆ ದಾಳಿ ನಡೆಸಿರುವ ಕ್ಯಾಸಂಬಳ್ಳಿ ಪೋಲಿಸರು ಸ್ಪೋಟಕ ವಸ್ತುಗಳ ಸಹಿತ ಮೂವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಅಧಿಕಾರಿಗಳು ಮತ್ತು ಕ್ಯಾಸಂಬಳ್ಳಿ ಪೊಲೀಸ್ ಠಾಣೆಯ ಪಿ.ಎಸ್.ಐ ಮತ್ತು ಸಿಬ್ಬಂದಿಯವರು ಸ್ಥಳಕ್ಕೆ ಹೋಗಿ ನೋಡಿದಾಗ, ಖಾಸಗಿ ಜಮೀನಿನಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ೩ ಜನ ವ್ಯಕ್ತಿಗಳು ಸದರಿ ಜಮೀನಿನಲ್ಲಿದ್ದ ಬಂಡೆಗೆ ರಂಧ್ರಗಳನ್ನು ಮಾಡಿ, ಸ್ಪೋಟಕ ವಸ್ತುವನ್ನು ತುಂಬಿ ಬಂಡೆಯನ್ನು ಸ್ಪೋಟಿಸಲು ತಯಾರಿ ಮಾಡಿಕೊಂಡಿರುವುದು ಕಂಡು ಬಂದಿದೆ.
ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮುಂದಿನ ಕಾನೂನು ಕ್ರಮ ಜರುಗಿಸಲು ಕೋರಿ ಕೊಟ್ಟ ದೂರಿನ ಮೇರೆಗೆ ಸ್ಪೋಟಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೋಲಿಸರು ೩ ಜನ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಕೈಗೊಂಡಿದ್ದು, ಪ್ರಕರಣ ತನಿಖೆಯಲ್ಲಿರುತ್ತದೆ.
ಘಟನಾ ಸ್ಥಳಕ್ಕೆ ಬೆಂಗಳೂರಿನಿಂದ ಬಿ.ಡಿ.ಡಿ.ಎಸ್. ತಂಡವನ್ನು ಕರೆಯಿಸಿ ಬಂಡೆಗೆ ಕೊರೆಯಿಸಿದ್ದ ರಂಧ್ರಗಳಲ್ಲಿ ತುಂಬಿದ್ದ ಹಾಗೂ ಹೆಚ್ಚುವರಿಯಾಗಿ ಶೇಖರಿಸಿ ಇಟ್ಟುಕೊಂಡಿದ್ದ ಸ್ಪೋಟಕ ವಸ್ತುಗಳನ್ನು ತಜ್ಞರ ತಂಡದ ಸಹಯೋಗದೊಂದಿಗೆ ನಿಷ್ಕ್ರಿಯಗೊಳಿಸಿ ನಾಶಗೊಳಿಸಲಾಗಿದೆ.
ಸ್ಪೋಟಕ ಪದಾರ್ಥಗಳ ಸಂಗ್ರಹಣೆ, ಸಾಗಾಣಿಕೆ ಮತ್ತು ಬಳಸುವಿಕೆಯು ಸ್ಪೋಟಕ ಕಾಯ್ದೆ ೧೮೮೪ ಮತ್ತು ಸ್ಪೋಟಕ ಪದಾರ್ಥ ಕಾಯ್ದೆ ೧೯೦೮ ಕಾನೂನುಗಳಿಗೆ ಒಳಪಟ್ಟಿರುತ್ತದೆ ಎಂದು ಪೋಲಿಸ್ ಇಲಾಖೆ ತಿಳಿಸಿದೆ.