PLACE YOUR AD HERE AT LOWEST PRICE
ಕಾವೇರಿ ನೀರು ಉಳಿಸಿಕೊಳ್ಳಲು ರೈತರು ಸುಪ್ರೀಂ ಕೊರ್ಟ್ಗೆ ಹೋಗುವುದಾದರೆ ನೀವೇಕೆ ಅಧಿಕಾರದಲ್ಲಿದ್ದೀರಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ನಿನ್ನೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಬೀಗದ ಕೈ ನಮ್ಮ ಕಡೆ ಇಲ್ಲ ಅಂತ ಹೇಳಿದ್ದಾರೆ. ಡ್ಯಾಮ್ ನಮ್ಮಲಿದೆ, ನಮ್ಮ ಹಕ್ಕನ್ನು ಇವರು ಬಿಟ್ಟು ಕೊಡುತ್ತಿದ್ದಾರೆ”ಎಂದರು.
“ಡಿಕೆ ಶಿವಕುಮಾರ್ ಅವರಿಗೆ ಮಾಹಿತಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಮ್ಮ ಹಕ್ಕನ್ನು ಅವರಿಗೆ ಬಿಟ್ಟು ಕೊಟ್ಟು, ತಾವು ಮಾಡಿದ ತಪ್ಪಿಗೆ. ರೈತರಿಗೆ ಸುಪ್ರೀಂ ಕೋರ್ಟಿಗೆ ಹೋಗಿ ಅಂತ ಹೇಳುತ್ತಿದ್ದಾರೆ. ರೈತರು ಸುಪ್ರೀಂ ಕೋರ್ಟಿಗೆ ಹೋಗಬೇಕಾದರೆ ನಿಮ್ಮನ್ನು ಯಾಕೆ ಆಯ್ಕೆ ಮಾಡಬೇಕಿತ್ತು? ಇವರು ಯಾಕೆ ಸರ್ಕಾರದಲ್ಲಿ ಅಧಿಕಾರ ಮಾಡಬೇಕು. ನೀವು ರಕ್ಷಣೆ ಮಾಡಲಿ ಅಂತಾನೆ ಜನ ನಿಮ್ಮನ್ನು ಆಯ್ಕೆ ಮಾಡಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.
“ಕಾವೇರಿ ಜಲಾನಯನ ಪ್ರದೇಶದ ಜನ ಶಾಸಕರನ್ನು ಕೊಟ್ಟಿದ್ದಾರೆ. ಅವರು ರೈತರನ ರಕ್ಷಣೆ ಮಾಡದೇ ಇದ್ದರೆ ನೀವುಗಳು ಯಾಕೆ ಬೇಕು? ಇದರಲ್ಲಿ ಏನೋ ರಾಜಕೀಯ ಹಿತಾಸಕ್ತಿ ಇದೆ ಅಂತ ಕಾಣಿಸುತ್ತಿದೆ. ನಾನು ವಿರೋಧ ಪಕ್ಷದ ಸದಸ್ಯನಾಗಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಿದ್ದೇನೆ. ರೈತರ ರಕ್ಷಣೆ ಮಾಡದೆ ಇವರು ನಿಜವಾದ ರಾಜಕಾರಣವನ್ನು ಮಾಡುತ್ತಿದ್ದಾರೆ” ಎಂದು ಕಿಡಿಕಾರಿದರು.
ರುವೈ ಬೆಳೆಗೆ ಅಗತ್ಯಕ್ಕಿಂತ ಹೆಚ್ಚು ನೀರು.
“ಕಾವೇರಿ ಜಲಾನಯನದ ವಿವಾದ ಹೊಸದಲ್ಲ ಟ್ರಿಬ್ಯುನಲ್ ಆದೇಶ ಆಗಿದೆ. ಯಾವ ರೈತರು ಎಷ್ಟು ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ. ತಮಿಳುನಾಡು ರೈತರು 32 ಟಿಎಂಸಿ ನೀರು ಬಳಕೆ ಮಾಡಿಕೊಂಡು 1.80 ಲಕ್ಷ ಹೆಕ್ಟೇರ್ ಬೆಳೆ ಬೆಳೆಯಬೇಕು ಅಂತ ನಿರ್ಧಾರ ಆಗಿದೆ. ಅವರು 60 ಟಿಎಂಸಿ ನೀರು ಬಳಕೆ ಮಾಡಿಕೊಂಡು 4 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆದಿದ್ದಾರೆ.
ಅದನ್ನು ನಮ್ಮ ರಾಜ್ಯ ಸರ್ಕಾರ ಪ್ರಶ್ನಿಸಬೇಕಿದೆ. ಇವರು ಪ್ರಶ್ನೆ ಮಾಡುತ್ತಿಲ್ಲ. ನಮ್ಮ ಜಲಾಶಯದ ನೀರನ್ನು ನಮ್ಮ ರೈತರಿಗೆ ಸರಿಯಾದ ಸಮಯದಲ್ಲಿ ಬಿಡಲಿಲ್ಲ. ಈಗ ತಮಿಳು ನಾಡಿನವರು ನೀರು ಕೇಳುತ್ತಿದ್ದಾರೆ. ಇದರಿಂದ ನಮ್ಮ ರೈತರಿಗೆ ಅನ್ಯಾಯವಾಗುತ್ತಿದೆ” ಎಂದರು.
“ಮುಖ್ಯಮಂತ್ರಿಗಳು ನೀರು ಬಿಡುವುದಿಲ್ಲ ಅಂತ ಹೇಳಿದ್ದಾರೆ. ಆದರೆ, ಡಿಸಿಎಂ ನಾವು ಲೀಗಲ್ ಅಡ್ವೈಸರ್ ಮಾತು ಕೇಳುತ್ತೇವೆ ಅಂತ ಹೇಳುತ್ತಾರೆ. ಸರ್ಕಾರ ಲೀಗಲ್ ಟೀಂಗೆ ಸುಪ್ರೀಂ ಕೋರ್ಟ್ ನಲ್ಲಿ ಸರಿಯಾಗಿ ವಾದ ಮಾಡಲು ಹೇಳಬೇಕು. 10 ಟಿಎಂಸಿ ನೀರು ಬೀಡಲು ಮುಂದಾಗಿದ್ದು ಈ ಸರ್ಕಾರ ರಾಜ್ಯದ ರೈತರ ಹಿತ ಬಲಿಕೊಡುತ್ತಿದೆ. ರೈತರ ಹಿತ ಕಾಯಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇತ್ತೀಚೆಗೆ ಇಂಡಿಯಾ ಒಕ್ಕೂಟ ಕಟ್ಟಿಕೊಂಡಿದ್ದು, ಡಿಎಂಕೆ ಸರ್ಕಾರದ ಹಿತ ಕಾಯಲು ರಾಜ್ಯ ಸರ್ಕಾರ ರಾಜ್ಯದ ರೈತರಿಗೆ ದ್ರೋಹ ಬಗೆಯುತ್ತಿದೆ” ಎಂದು ಆರೋಪಿಸಿದರು.
ಯಾರೂ ಬಿಜೆಪಿ ಬಿಡುವುದಿಲ್ಲ
“ಬಿಜೆಪಿಯ ಕೆಲವು ಶಾಸಕರು ಕಾಂಗ್ರೆಸ್ ಹೋಗುತ್ತಾರೆ ಎನ್ನುವ ಮಾತು ಸತ್ಯಕ್ಕೆ ದೂರವಾದದ್ದು, ಕಾಂಗ್ರೆಸ್ ಮೇಲೆ ಕಮಿಷನ್ ಆರೋಪ ಕೇಳಿ ಬಂದಿರುವುದರಿಂದ ಅದನ್ನು ಡೈವರ್ಟ್ ಮಾಡಲು ಈ ರೀತಿಯ ಸುದ್ದಿ ಹಬ್ಬಿಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ಥಳಿಯವಾಗಿ ಕೆಲವು ಸಮಸ್ಯೆ ಇರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದಾರೆ. ಅದನ್ನು ಪರಿಹರಿಸಲಾಗುವುದು. ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ” ಎಂದು ಹೇಳಿದರು.