PLACE YOUR AD HERE AT LOWEST PRICE
ಮಾಲೂರು : ತಾಲೂಕಿನ ಭಾವನಹಳ್ಳಿಯಲ್ಲಿ ಕೆಐಎಡಿಬಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ನೂರಾರು ಎಕರೆ ಜಮೀನು ವಶಪಡಿಸಿಕೊಂಡಿದ್ದು ಪರಿಹಾರ ವಿತರಣೆ ಮಾಡಲು ಒಂದು ಎಕರೆಗೆ ೫ ರಿಂದ ೧೦ ಲಕ್ಷ ರೂ. ರೈತರ ಬಳಿ ಲಂಚಕ್ಕೆ ಒತ್ತಾಯಿಸುತ್ತಿದ್ದು ಈ ಸಂಬಂಧ ನೊಂದ ಜಮೀನು ಮಾಲೀಕರು ತಮ್ಮ ನೋವನ್ನು ವ್ಯಕ್ತಪಡಿಸಿದ್ದು ಒಬ್ಬೊಬ್ಬರ ಕಥೆಯೂ ಒಂದೊಂದು ತೆರನಾಗಿದ್ದು ಆದರೆ ಲಂಚದ ಮುಖ ಒಂದೇ ಆಗಿದೆ.
ಗ್ರಾಮದ ರೈತ ಸುರೇಶ್ ಮಾತನಾಡಿ, ೨೦೧೯ರಲ್ಲಿ ಭೂ ಸ್ವಾಧಿನ ಆಗಿದ್ದು ಸರ್ಕಾರದಿಂದ ಒಂದೂವರೆ ವರ್ಷದ ಹಿಂದೆ ಹಣ ಬಿಡುಗಡೆ ಆದರೂ ಇದುವರೆಗೂ ರೈತರಿಗೆ ನಯಾಪೈಸೆ ಕೊಟ್ಟಿಲ್ಲ. ಲಂಚದ ಆರೋಪದ ಮೇಲೆ ಹಿಂದೆ ಇದ್ದ ಅಧಿಕಾರಿಯನ್ನು ಸರ್ಕಾರ ವರ್ಗಾ ಮಾಡಿ ಹೊಸದಾಗಿ ಮಹಿಳಾ ಅಧಿಕಾರಿ ಅಪೂರ್ವ ಬಿದರಿ ಅವರನ್ನು ನೇಮಕ ಮಾಡಿದ್ದು ಇದೀಗ ರೈತರ ಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತಾಗಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು. ಲಂಚ ಕೊಡದಿದ್ದರೆ ಅಧಿಕಾರಿಗಳೇ ಕೇಸ್ ಹಾಕಿಸಿ ಫೈಲ್ ಪೆಂಡಿಂಗ್ ಇಡುತ್ತಾರೆ. ಸ್ಟೇ ಮಾಡಿಸಿ ಕಾಟ ಕೊಡುತ್ತಾರೆ.
ಮಹಿಳಾ ಅಧಿಕಾರಿ ಭಾವನಹಳ್ಳಿಯಲ್ಲಿ ಮೂವರು ಬ್ರೋಕರ್ಗಳನ್ನು ಇಟ್ಟುಕೊಂಡಿದ್ದು ಲಂಚ ವಿರೋಧಿಸಿದ್ದಕ್ಕೆ ಕುಮಾರ್ ಮತ್ತು ಪ್ರವೀಣ್ ಎಂಬ ಇಬ್ಬರು ಯುವ ರೈತರ ಮೇಲೆ ಎಫ್ಐಆರ್ ಹಾಕಿಸಲಾಗಿದೆ. ಬಡವರ ರಕ್ತ ಹೀರುತ್ತಿರುವ ಮಹಿಳಾ ಅಧಿಕಾರಿ ೨೦ ಕೋಟಿ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಂಡಿರುವುದಾಗಿ ಹೇಳುತ್ತಿದ್ದು ಸಿಎಂ, ಡಿಸಿಎಂ ಅಭಯಹಸ್ತ ಇರುವುದಾಗಿ ಬಹಿರಂಗವಾಗಿ ಅಬ್ಬರಿಸುತ್ತಿದ್ದಾರೆ. ಲಂಚದ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಮಹಿಳಾ ಅಧಿಕಾರಿ ದರ್ಪ ಹೆಚ್ಚಾಗಿದ್ದು ರೈತರಿಗೆ ಚೇರ್ ಕೊಡದೆ ಅಪಮಾನಿಸುತ್ತಿದ್ದು ಭೂಮಿ ಕಳೆದುಕೊಂಡವರನ್ನು ನಿಲ್ಲಿಸಿ ಮಾತನಾಡಲಾಗುತ್ತಿದೆ.
ದಿನಕ್ಕೆ ಒಂದು ಕೋಟಿ ರೂ. ಲಂಚ ಮಾಡಲಾಗುತ್ತಿದ್ದು ಹೀಗಾಗಿ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಮಹಿಳಾ ಅಧಿಕಾರಿ ವಿರುದ್ಧ ಕ್ರಮ ಕೈಗೊಂಡು ಪ್ರಾಮಾಣಿಕ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಆಗ್ರಹಿಸಿದರು. ಮುಖಂಡ ಬಾಬು ಮಾತನಾಡಿ, ಎಕರೆಗೆ ೧೫ ಲಕ್ಷ ರೂ. ಲಂಚ ಕೊಡಬೇಕಿದ್ದು ಅಪೂರ್ವ ಮೇಡಂ ಯಾರಿಗೆ ಬೇಕಾದರೂ ದೂರು ಕೊಡಿ ಎಂದು ದಬ್ಬಾಳಿಕೆ ಮಾಡುತ್ತಾರೆ, ಮಧ್ಯವರ್ತಿಗಳನ್ನು ಸಂಪರ್ಕಿಸಬೇಡಿ. ನೇರವಾಗಿ ಕಚೇರಿಗೆ ಬನ್ನಿ ಎಂದು ಉದ್ದುದ್ದ ಭಾಷಣ ಮಾಡಿದ ಮಹಿಳಾ ಅಧಿಕಾರಿ ಒಂದು ಗಿಡಕ್ಕೆ ೪ ಸಾವಿರ ರೂ. ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲಾಗದೆ ರೈತನೊಬ್ಬ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಇನ್ನಾದರೂ ಪರಿಹಾರ ಬಿಡುಗಡೆ ಆಗದಿದ್ದರೆ ಉಳಿದವರೂ ಅದೇ ಹಾದಿ ಹಿಡಿಯಲಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುನಿಸ್ವಾಮಿ, ಗೋಪಿ, ಗುಂಡ, ಪ್ರಕಾಶ್, ವೆಂಕಟೇಶ್, ಶಂಕರ್ ನಾರಾಯಣಸ್ವಾಮಿ ಇನ್ನಿತರು ಇದ್ದರು.