ಕರ್ನಾಟಕದ ಗಡಿನಾಡು ಜಿಲ್ಲೆ ಬಳ್ಳಾರಿಯಲ್ಲಿ ತೆಲುಗು ಭಾಷಿಗರ ಪ್ರಾಬಲ್ಯ ಹೆಚ್ಚಿದೆ. ಇಲ್ಲಿನ ರಾಜಕೀಯ ಮುಖಂಡರು ಕೂಡ ಇದನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದೇ ಹೆಚ್ಚು. ಇಂತಹ ಹಲವು ಉದಾಹರಣೆಗಳು ಆಗಾಗ ಸಿಗುತ್ತಲೇ ಇರುತ್ತವೆ.
ಬಳ್ಳಾರಿ ಜಿಲ್ಲೆ ಕರ್ನಾಟಕದ ಪ್ರಮುಖ ಅಂಗ. ಆದರೆ, ಅದ್ಯಾಕೋ ಇಲ್ಲಿ ರಾಜಕೀಯ ಮುಖಂಡರಿಗೆ ಕನ್ನಡದ ಮೇಲೆ ಒಲವು ಇಲ್ಲವೆಂದು ತೋರುತ್ತೆ. ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡುವ ಒಂದಲ್ಲ ಒಂದು ಘಟನೆಗಳು ನಡೆಯುತ್ತಲೇ ಇರುತ್ತವೆ.
ನಿನ್ನೆ (ಸೆಪ್ಟೆಂಬರ್ 6) ಬಳ್ಳಾರಿಯಲ್ಲಿ ತೆಲುಗು ಚಿತ್ರರಂಗದ ಮೇರು ನಟ ಎನ್ಟಿಆರ್ ಪ್ರತಿಮೆಯನ್ನು ಉದ್ಘಾಟನೆ ಮಾಡಲಾಗಿದೆ. ಈ ಸಮಾರಂಭದಕ್ಕೆ ಆಂಧ್ರದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಬಳ್ಳಾರಿಗೆ ಆಗಮಿಸಿದ್ದರು. ಈ ವೇಳೆ ಅವರು ಆಡಿದ ಮಾತುಗಳು ಕನ್ನಡಿಗರನ್ನು ಕೆರಳಿಸಿವೆ. ಅಲ್ಲದೆ ಅಣ್ಣಾವ್ರ ಅಭಿಮಾನಿಗಳ ಕಣ್ಣು ಕೆಂಪಾಗುವಂತೆ ಮಾಡಿವೆ.
ಎನ್ಟಿಆರ್ ಪ್ರತಿಮೆ ಅನಾವರಣ ಮಾಡುವುದಕ್ಕೆ ಬಂದಿದ್ದ ಚಂದ್ರಬಾಬು ನಾಯ್ಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರತಿಮೆ ಅನಾವರಣ ಮಾಡಿದ ಬಳಿಕ ಚಂದ್ರಬಾಬು ನಾಯ್ಡು ಅಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡುವಾಗ, ” ನಾನು ಆಂಧ್ರ ಪ್ರದೇಶದಲ್ಲಿ ಇದ್ದೇನಾ.. ಇಲ್ಲ ಕರ್ನಾಟಕದಲ್ಲಿ ಇದ್ದೇನಾ? ಗೊತ್ತಾಗುತ್ತಿಲ್ಲ” ಎಂದು ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕನ್ನಡಿಗರು ರೊಚ್ಚಿಗೆದ್ದಿದ್ದಾರೆ. ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರುತ್ತಿದ್ದಾರೆ.
ಇಷ್ಟೇ ಅಲ್ಲದೆ ಪ್ರತಿಮೆ ಉದ್ಘಾಟನೆ ಬಳಿಕ ಚಂದ್ರಬಾಬು ನಾಯ್ಡು ಎನ್ಟಿಆರ್ ಪೌರಾಣಿಕ ಪಾತ್ರಗಳ ಬಗ್ಗೆ ಮಾತಾಡಿದ್ದರು. ಇದು ಅಣ್ಣಾವ್ರ ಅಭಿಮಾನಿಗಳ ನಿದ್ದೆ ಕೆಡಿಸಿದೆ. “ಪೌರಾಣಿಕ ಪಾತ್ರಗಳಲ್ಲಿ ಎನ್ಟಿಆರ್ ಬಿಟ್ಟರೆ ಬೇರೆ ಯಾರೂ ಇಲ್ಲ” ಎಂದಿದ್ದಕ್ಕೆ ಕಿಡಿಕಾರಿದ್ದಾರೆ. ಕರ್ನಾಟಕದಲ್ಲಿ ಡಾ.ರಾಜ್ಕುಮಾರ್ ಸಾರ್ವಭೌಮ. ಕರ್ನಾಟಕದಲ್ಲಿ ಪೌರಾಣಿಕ ಪಾತ್ರ ಅಂತ ಬಂದಾಗ ಅಣ್ಣಾವ್ರನ್ನು ಬಿಟ್ಟು ಬೇರೆ ಯಾರಿಲ್ಲ. ಅವರು ನಿಮಗೆ ನೆನಪಾಗಲಿಲ್ಲವೇ?” ಎಂದು ನಾಯ್ಡು ವಿರುದ್ಧ ಕಿಡಿಕಾರುತ್ತಿದ್ದಾರೆ.
ಬಳ್ಳಾರಿಯಲ್ಲಿ ತೆಲುಗು ಮಾತಾಡುವವರ ಸಂಖ್ಯೆ ಹೆಚ್ಚಿದೆ. ಆದರೂ, ಬಳ್ಳಾರಿ ಕರ್ನಾಟಕದ ಒಂದು ಭಾಗ. ಹೀಗಾಗಿ ಕನ್ನಡದ ನೆಲದಲ್ಲಿ ಎನ್ಟಿಆರ್ ಪ್ರತಿಮೆ ಯಾಕೆ ಬೇಕಿತ್ತು? ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ. “ನಾಯ್ಡು ಇದು ಕರ್ನಾಟಕನ ಆಂಧ್ರನ ಅಥವಾ ತೆಲಂಗಾಣನ ಅಂತ ಕೇಳ್ತಾವ್ರೆ.. ಹಿಂಗೇ ಬಿಟ್ಟರೆ, ಇವತ್ತು ಬಳ್ಳಾರಿ ನಾಳೆ ಬೆಂಗಳೂರು” ಎಂದು ಅಣ್ಣಾವ್ರ ಅಭಿಮಾನಿಗಳು ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ್ದಾರೆ.
ಎನ್ಟಿಆರ್ ಪ್ರತಿಮೆ ಕಾರ್ಯಕ್ರಮದಲ್ಲಿ ಸಚಿವ ನಾಗೇಂದ್ರ ಕೂಡ ಉಪಸ್ಥಿತಿ ಎದ್ದು ಕಾಣುತ್ತಿತ್ತು. ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಸಚಿವ ನಾಗೇಂದ್ರ ವಿರುದ್ಧವೂ ಗರಂ ಆಗಿದ್ದಾರೆ. “ಇಲ್ಲಿಯ ಅನ್ನ ತಿಂದು, ಇಲ್ಲಿ ಬಂದು ನೆಲೆಸಿ ಜೀವನೋಪಾಯ ಮಾಡಿಕೊಂಡು ಬದುಕುತ್ತಿರುವ ಇವರಿಗೆ ಆತ್ಮಾಭಿಮಾನ ಇಲ್ಲವೇ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ.