PLACE YOUR AD HERE AT LOWEST PRICE
ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಅನ್ಯಾಯವಾಗಿದೆ. ಮುಂದಿನ 15 ದಿನಗಳವರೆಗೆ ಪ್ರತಿ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ರಾಜ್ಯಕ್ಕೆ ಸೂಚನೆ ನೀಡಿದೆ.
ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ವಿವಾದಕ್ಕೆ ಕಾರಣವಾಗಿರುವ ಕಾವೇರಿ ನೀರು ಹಂಚಿಕೆ ವಿಚಾರವಾಗಿ ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ನಡೆಸಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಸಮಿತಿ ಅಧಿಕಾರಿಗಳು, ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯದ ನೀರಾವರಿ ತಜ್ಞರು, ವಕೀಲರು ಮತ್ತು ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಈ ಭಾಗದ ರೈತರ ವಿರೋಧದ ನಡುವೆ ಕೂಡ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಅನ್ವಯ ಕರ್ನಾಟಕ ತಮಿಳುನಾಡಿಗೆ 75,000 ಕ್ಯೂಸೆಕ್ ನೀರು ಬಿಟ್ಟಿದೆ. ಆದರೂ ತಮಿಳುನಾಡಿಗೆ ಹೆಚ್ಚುವರಿ ನೀರು ಹರಿಸಬೇಕು ಎಂದು ತಮಿಳುನಾಡು ಪರ ಅಧಿಕಾರಿಗಳು ವಾದಿಸುತ್ತಿದ್ದಾರೆ.
ಆಗಸ್ಟ್ 29ರಂದು ದೆಹಲಿಯಲ್ಲಿ ನಡೆದಿದ್ದ ಕಾವೇರಿ ನೀರು ಪ್ರಾಧಿಕಾರ ಸಭೆಯಲ್ಲಿ 15 ದಿನಗಳ ಕಾಲ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು ರಾಜ್ಯಕ್ಕೆ ಸೂಚನೆ ನೀಡಿತ್ತು. ರಾಜ್ಯದಲ್ಲಿ ರೈತರು ವಿರೋಧಿಸಿದರೂ ಕೂಡ ಕೆಆರ್ಎಸ್ ಡ್ಯಾಂನಿಂದ 75,000 ಕ್ಯೂಸೆಕ್ ನೀರು ಹರಿಸಲಾಗಿದೆ. ಈಗ ಮತ್ತೆ ನೀರು ಹರಿಸಲು ಸೂಚನೆ ನೀಡಿದೆ. ಕಾವೇರಿ ನೀರು ಹಂಚಿಕೆ ವಿವಾದದ ಅರ್ಜಿ ವಿಚಾರಣೆ ಸೆ.21ಕ್ಕೆ ಸುಪ್ರೀಂಕೋರ್ಟ್ನಲ್ಲಿ ನಡೆಯಲಿದೆ.
ರಾಜ್ಯ ಸರ್ಕಾರ ನೀರು ಹರಿಸಿದ್ದರೂ ಅದು ಸಾಲಲ್ಲ ಇನ್ನೂ 10 ದಿನಗಳ ಕಾಲ ಪ್ರತಿದಿನ 24,000 ಕ್ಯೂಸೆಕ್ ನೀರು ಹರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿದೆ. ತಮಿಳುನಾಡಿನ ಬೇಡಿಕೆಗೆ ರಾಜ್ಯದ ಅಧಿಕಾರಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ತಮಿಳುನಾಡಿಗೆ ನೀರು ಹರಿಸಲಾಗಿದೆ. ಇನ್ನು ಮುಂದೆ ನೀರು ಹರಿಸಿದರೆ ಕುಡಿಯುವ ನೀರಿಗೂ ತೊಂದರೆಯಾಗಲಿದೆ ಎಂದು ರಾಜ್ಯದ ಅಧಿಕಾರಿಗಳು ಸಭೆಯಲ್ಲಿ ವಾದಿಸಿದರು. ಎರಡೂ ರಾಜ್ಯಗಳ ವಾದವನ್ನು ಆಲಿಸಿದ ಸಮಿತಿ ನೀರು ಹರಿಸಲು ಸೂಚನೆ ನೀಡಿದೆ.
ಸದ್ಯ ಕೆಆರ್ ಎಸ್ ಜಲಾಶಯದಲ್ಲಿ 98 ಅಡಿಗಳು ಮಾತ್ರ ನೀರು ಸಂಗ್ರಹವಾಗಿದೆ. 21 ಟಿಎಂಸಿ ನೀರು ಇದ್ದು, ಇದರಲ್ಲಿ 5 ಟಿಎಂಸಿ ನೀರನ್ನು ಡೆಡ್ ಸ್ಟೋರೇಜ್ ಎಂದು ಪರಿಗಣಿಸಿದರೆ, ಇನ್ನು 16 ಟಿಎಂಸಿ ಮಾತ್ರ ಲಭ್ಯವಿರಲಿದ್ದು, ಮುಂದಿನ ದಿನಗಳಲ್ಲಿ ಮಳೆ ಕೊರತೆಯಾದರೆ ಬೆಂಗಳೂರು, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ಕೊರತೆ ಎದುರಾಗಲಿದೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಪ್ರಧಾನಮಂತ್ರಿಗಳ ಕಚೇರಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪತ್ರ ಬರೆಯಲಾಗಿದ್ದು, ಪ್ರಧಾನಮಂತ್ರಿಗಳ ಕಚೇರಿಯ ಪ್ರತಿಕ್ರಿಯೆಗೆ ಎದುರು ನೋಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿದ್ದಾರೆ.