PLACE YOUR AD HERE AT LOWEST PRICE
ಕೋಲಾರ:ಪಠ್ಯ ಪುಸ್ತಕಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಪಠ್ಯ ಪುಸ್ತಕಗಳು ಪಕ್ಷಗಳ ಪುಸ್ತಕಗಳಾಗಬಾರದು. ನಾವು ವಸ್ತುನಿಷ್ಠವಾಗಿ ಪಠ್ಯ ಪರಿಷ್ಕರಣೆ ಮಾಡಿದ್ದೆವು. ಆದರೆ, ಬಳಿಕ ಅನಗತ್ಯ ವಿವಾದ ಉಂಟು ಮಾಡಲಾಯಿತು ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಕೋಲಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶಿಕ್ಷಣ ಇಲಾಖೆ ಆಯೋಜಿಸಿದ್ದ ಕನ್ನಡ ಬೋಧಕರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. “ಪಠ್ಯವು ಯಾವುದೇ ಒಂದು ಪಕ್ಷದ ಸಿದ್ದಾಂತಗಳಿಗೆ ಅನುಗುಣವಾಗಿರಬಾರದು. ಪಠ್ಯವು ಕಾಂಗ್ರೆಸ್ಸೀಕರಣ ಅಥವಾ ಕೇಸರೀಕರಣ ಅಥವಾ ಕಮ್ಯುನಿಸ್ಟೀಕರಣ ಆಗಬಾರದು. ಅದು ಶಿಕ್ಷಣ ಪಠ್ಯವಾಗಿರಬೇಕು” ಎಂದು ಹೇಳಿದರು.
“ಚುನಾವಣೆಗೂ ಮುಂಚೆ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿದೆ. ಅದು ಸ್ವಾಗತಾರ್ಹ. ಆದರೆ, ಈ ಗ್ಯಾರಂಟಿಗಳು ಶಿಕ್ಷಣ ಕ್ಷೇತ್ರಕ್ಕೆ ಯಾಕಿಲ್ಲ. ಶಿಕ್ಷಣವನ್ನೂ ಗ್ಯಾರಂಟಿಗಳ ಪಟ್ಟಿಗೆ ಸೇರಿಸಬೇಕು” ಎಂದರು
“ಹಸಿವು ಮುಕ್ತ ಸಮಾಜ ನಿರ್ಮಾಣ ಎಷ್ಟು ಮುಖ್ಯವೋ, ಅನಕ್ಷರತೆ ಮುಕ್ತ ಸಮಾಜದ ನಿರ್ಮಾಣವೂ ಅಷ್ಟೇ ಮುಖ್ಯ. ಹಾಗಾಗಿ, ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಆದ್ಯತಾ ಕ್ಷೇತ್ರವನ್ನಾಗಿ ಘೋಷಿಸಬೇಕು” ಎಂದು ಆಗ್ರಹಿಸಿದರು.
“ಶಿಕ್ಷಣ ಕ್ಷೆತ್ರದ ಸಮಸ್ಯೆಗಳನ್ನು ಪರಿಹರಿಸಲು ಕ್ರಿಯಾ ಯೋಜನೆಗಳನ್ನು ರೂಪಿಸಬೇಕು. ಸರ್ಕಾರಿ ಮತ್ತು ಅನುದಾನಿತ ಶಾಲೆಗಳನ್ನು ಅಭಿವೃದ್ಧಿ ಪಡಿಸಬೇಕು. ಮೂಲ ಸೌಕರ್ಯಗಳನ್ನು ಒದಗಿಸಬೇಕು. ಆ ಶಾಲೆಗಳನ್ನು ಮಕ್ಕಳು ಹುಡುಕಿಕೊಂಡು ಬರುವಂತಾಗಬೇಕು” ಎಂದು ಅವರು ಆಶಯ ವ್ಯಕ್ತಪಡಿಸಿದರು.