PLACE YOUR AD HERE AT LOWEST PRICE
ಜಿಲ್ಲಾ ಘಟಕದ ಆಡಳಿತದಲ್ಲಿ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪಶ್ಚಿಮ ಬಂಗಾಳ ಬಂಕುರಾದಲ್ಲಿರುವ ತಮ್ಮ ಪಕ್ಷದ ಕಚೇರಿಯಲ್ಲಿ ಕೇಂದ್ರ ಸಚಿವ ಸುಭಾಸ್ ಸರ್ಕಾರ್ ಅವರನ್ನು ಕೂಡಿ ಹಾಕಿ ಬೀಗ ಹಾಕಿದರು.
ಕೇಂದ್ರ ಶಿಕ್ಷಣ ಖಾತೆಯ ರಾಜ್ಯ ಸಚಿವ ಮತ್ತು ಪಶ್ಚಿಮ ಬಂಗಾಳ ಬಂಕುರಾದ ಸಂಸದ ಸರ್ಕಾರ್ ಅವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಭೆಯ ಅಧ್ಯಕ್ಷತೆ ವಹಿಸಿದ್ದಾಗ ಬಿಜೆಪಿ ಕಾರ್ಯಕರ್ತರ ಗುಂಪು ಘೋಷಣೆಗಳನ್ನು ಕೂಗುತ್ತಾ ಪಕ್ಷದ ಜಿಲ್ಲಾ ಕಚೇರಿಗೆ ಮೆರವಣಿಗೆ ನಡೆಸಿ ಸರ್ಕಾರ್ ಅವರನ್ನು ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿತು.
ಪ್ರತಿಭಟನಾಕಾರರಲ್ಲಿ ಒಬ್ಬರಾದ ಮೋಹಿತ್ ಶರ್ಮಾ, ಸರ್ಕಾರ್ ಅವರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಿಗೆ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ ಮತ್ತು ತನಗೆ ಹತ್ತಿರವಿರುವವರನ್ನು ಜಿಲ್ಲಾ ಸಮಿತಿಯ ಸದಸ್ಯರನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
”ನಮ್ಮಲ್ಲಿ ಕೆಲವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಪಕ್ಷ ಉಳಿಸಲು ಪ್ರತಿಭಟನೆ ನಡೆಸುತ್ತಿದ್ದೇವೆ. ಈ ಬಾರಿ ಬಂಕುರಾ ಪುರಸಭೆಯಲ್ಲಿ ಬಿಜೆಪಿಗೆ ಸ್ಥಾನ ಸಿಕ್ಕಿಲ್ಲ. ಕೇಂದ್ರ ಸಚಿವರ ಅದಕ್ಷತೆಯಿಂದ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಎರಡು ವಾರ್ಡ್ಗಳನ್ನು ಗೆದ್ದುಕೊಂಡಿತ್ತು. ಪಂಚಾಯಿತಿಯ ಹಲವು ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಇದು ನಾಚಿಕೆಗೇಡಿನ ಸಂಗತಿ’’ ಎಂದು ಆರೋಪಿಸಿದರು.
ಗೊಂದಲದ ನಡುವೆಯೇ ಮತ್ತೊಂದು ಗುಂಪು ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿದ್ದು, ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆಯಿತು.ದೊಡ್ಡ ಪೊಲೀಸ್ ತುಕಡಿ ಪಕ್ಷದ ಕಚೇರಿಗೆ ತೆರಳಿ ಸರ್ಕಾರ್ ಅವರನ್ನು ರಕ್ಷಿಸಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ದುರದೃಷ್ಟಕರ ಎಂದಿರುವ ಬಿಜೆಪಿ ರಾಜ್ಯ ವಕ್ತಾರ ಸೌಮಿಕ್ ಭಟ್ಟಾಚಾರ್ಯ, ಘಟನೆಯಲ್ಲಿ ಭಾಗಿಯಾಗಿರುವ ಪಕ್ಷದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. “ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ, ಯಾವುದೇ ಅಸಮಾಧಾನಗಳಿದ್ದರೆ, ಅವುಗಳನ್ನು ತಿಳಿಸಲು ಸೂಕ್ತ ವೇದಿಕೆ ಇದೆ. ನಾವು ಘಟನೆಯನ್ನು ಪರಿಶೀಲಿಸುತ್ತೇವೆ ಮತ್ತು ಸಂಬಂಧಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.