PLACE YOUR AD HERE AT LOWEST PRICE
ಸನಾತನ ಧರ್ಮದ ವಿರುದ್ಧ ಮಾತನಾಡಿದವರ ಕಣ್ಣು ಹಾಗೂ ನಾಲಿಗೆಯನ್ನು ಕೀಳಲಾಗುವುದು ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಜಸ್ಥಾನದ ಬಾರ್ಮರ್ನಲ್ಲಿ ಬಿಜೆಪಿಯ ಪರಿವರ್ತನ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ‘ನಮ್ಮ ಪೂರ್ವಜರು ತಮ್ಮ ಪ್ರಾಣ ಒತ್ತೆಯಿಟ್ಟು ಸಂರಕ್ಷಿಸಿದ ಸನಾತನ ಧರ್ಮವನ್ನು ಕೊನೆಗೊಳಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಇನ್ನು ಅವರನ್ನು ನಾವು ಸಹಿಸುವುದಿಲ್ಲ. ಸನಾತನ ಧರ್ಮದ ವಿರುದ್ಧ ಮಾತನಾಡುವವರ ನಾಲಿಗೆಯನ್ನು ಸೀಳುತ್ತೇವೆ. ಕಣ್ಣುಗಳನ್ನು ಕೀಳುತ್ತೇವೆ’ ಎಂದು ಹೇಳಿದರು.
ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಸಚಿವ ಗಜೇಂದ್ರ ಸಿಂಗ್ ಶೇಖಾವತ್ ವಿಡಿಯೊವನ್ನು ಟ್ವೀಟ್ ಮಾಡಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಜಿ20 ಮುಗಿದಿದೆ ಮತ್ತು ಧಾರ್ಮಿಕ ಸ್ವಾತಂತ್ರದ 78ನೇ ಅಂಶದ ಘೋಷಣೆಗೆ ಯಾವುದೇ ಪ್ರಯೋಜನವಿಲ್ಲ ಎಂದು ನರೇಂದ್ರ ಮೋದಿ ಸಂಪುಟದ ಗೌರವಾನ್ವಿತ ಸಚಿವರು ಹಿಂಸಾಚಾರವನ್ನು ಪ್ರತಿಪಾದಿಸುತ್ತಾರೆ. ಹಾಗಾಗಿ ಈಗ ಇದು “ಮುಕ್ತ ಮಾತಾಗಿದೆ” ಎಂದಿದ್ದಾರೆ.
ಈ ನಡುವೆ, ಸನಾತನ ಧರ್ಮದ ಕುರಿತು ಡಿಎಂಕೆ ನಾಯಕ ಉದಯನಿಧಿ ಮತ್ತು ನಟ ಪ್ರಕಾಶ್ ರಾಜ್ ಅವರ ಹೇಳಿಕೆಗಳಿಗೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಕೂಡ ಪ್ರತಿಕ್ರಿಯಿಸಿದ್ದಾರೆ. ‘ಸನಾತನ ಧರ್ಮವನ್ನು ಕೊನೆಗಾಣಿಸುವ ಸಾಮರ್ಥ್ಯ ಯಾರಿಗೂ ಇಲ್ಲ, ಸನಾತನ ಧರ್ಮದ ಬಗ್ಗೆ ಇಂತಹ ಹೇಳಿಕೆ ನೀಡುವ ಡಿಎಂಕೆ ನಾಯಕ ಉದಯನಿಧಿ, ನಟ ಪ್ರಕಾಶ್ ರಾಜ್ ಅವರಂತಹವರು ದೇಶದ ವಿರುದ್ಧ ಮಾತನಾಡುವ ಖಳನಾಯಕರೇ ಹೊರತು ನಾಯಕರಲ್ಲ.
ನಾವೇನು ಎಂಬುದರ ಬಗ್ಗೆ ಅವರಿಗೆ ಅರಿವಿಲ್ಲ. ಸುಮ್ಮನೆ ಮಾತನಾಡುತ್ತಾರೆ. ಸನಾತನ ಧರ್ಮವನ್ನು ಕುಷ್ಠರೋಗ, ಮಲೇರಿಯಾ, ಡೆಂಗ್ಯೂ, ಏಡ್ಸ್ನಂತಹ ಕಾಯಿಲೆ ಎಂದು ಕರೆದ ಜನರು ಈ ಕಾಯಿಲೆಗಳ ನೋವನ್ನು ಅನುಭವಿಸಬೇಕು. ಇದು ದೇವರಲ್ಲಿ ನನ್ನ ಪ್ರಾರ್ಥನೆ’ ಎಂದಿದ್ದಾರೆ.
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರು ಸಭೆಯೊಂದರಲ್ಲಿ ಸನಾತನ ಧರ್ಮವು ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದರು. ಸನಾತನ ಧರ್ಮವನ್ನು ಕರೋನಾ ವೈರಸ್, ಮಲೇರಿಯಾ ಮತ್ತು ಡೆಂಗ್ಯೂ ವೈರಸ್ ಮತ್ತು ಮಲೇರಿಯಾಗೆ ಹೋಲಿಸಿದ್ದ ಅವರು, ಇಂತವುಗಳನ್ನು ವಿರೋಧಿಸಬಾರದು, ಆದರೆ ನಾಶಪಡಿಸಬೇಕು ಎಂದು ಹೇಳಿದ್ದರು.