PLACE YOUR AD HERE AT LOWEST PRICE
ಬಂಗಾರಪೇಟೆ: ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಹಲವು ದಿನಗಳು ಕಷ್ಠಪಟ್ಟು ರಚನೆ ಮಾಡಿರುವ ಭಾರತ ಸಂವಿಧಾನದ ತತ್ವಗಳನ್ನು ದೇಶದ ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಸಂವಿಧಾನಕ್ಕೆ ಗೌರವ ನೀಡಬೇಕೆಂದು ಕದಸಂಸ ರಾಜ್ಯ ಮುಖಂಡ ಸೂಲಿಕುಂಟೆ ರಮೇಶ್ ಕರೆ ನೀಡಿದರು.
ಪಟ್ಟಣದ ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಎದುರು ಭಾರತ ಸಂವಿಧಾನದ ಪೀಠಿಕೆಯನ್ನು ಓದುವುದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದಲ್ಲಿ ಸಂವಿಧಾನದಲ್ಲಿರುವ ತತ್ವಗಳನ್ನು ಕಾಪಾಡಬೇಕಾದರೆ ಮುಖ್ಯವಾಗಿ ಸಂವಿಧಾನದಲ್ಲಿರುವ ಎಲ್ಲಾ ವಿಚಾರಗಳನ್ನು ಮನನ ಮಾಡಬೇಕಾಗಿರುವುದರಿಂದ ಸಂವಿಧಾನದ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಭಾರತ ಸಂವಿಧಾನದಡಿಯಲ್ಲಿ ಬಂದಿರುವ ಮೀಸಲಾತಿಯಲ್ಲಿ ಗೆದ್ದಿರುವ ಜನಪ್ರತಿನಿಧಿಗಳು ಸಂವಿಧಾನದ ಬಗ್ಗೆ ಕೇವಲ ಅಧಿಕಾರವನ್ನು ಪಡೆಯುವವರೆಗೂ ಪಾಲನೆ ಮಾಡುತ್ತಿದ್ದಾರೆ. ಅಧಿಕಾರ ಸಿಕ್ಕಿದ ಮೇಲೆ ಕನಿಷ್ಠ ೧೦% ಪಾಲನೆ ಮಾಡುವಲ್ಲಿ ವಿಫಲರಾಗುತ್ತಿದ್ದಾರೆ. ಕೇವಲ ಅಧಿಕಾರಕ್ಕಾಗಿಯೇ ಮೀಸಲಾತಿ ಬೇಕೆ ಹೊರತು, ಸಂವಿಧಾನಲ್ಲಿರುವ ಪೀಠಿಕೆ, ಮೂಲಭೂತ ಹಕ್ಕುಗಳ ಸೇರಿದಂತೆ ಮುಖ್ಯವಾದ ಅಂಶಗಳ ಬಗ್ಗೆ ಅರಿವು ಇಲ್ಲದಂತೆ ವರ್ತನೆ ಮಾಡುತ್ತಿರುವುದು ದುರಾದೃಷ್ಠಕರವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭಾರತ ಸಂವಿಧಾನದಲ್ಲಿರುವ ಎಲ್ಲಾ ಅಂಶಗಳ ಮಹತ್ವವನ್ನು ಮೀಸಲಾತಿಯಡಿಯಲ್ಲಿ ಗೆದ್ದಿರುವ ಜನಪ್ರತಿನಿಧಿಗಳು ಅಧಿಕಾರ ಸಿಕ್ಕ ಮೇಲೆ ಮರೆತು ಹೋಗುತ್ತಿದ್ದಾರೆ. ಅಧಿಕಾರವನ್ನು ಹಿಡಿಯಲು ವೇಳೆ ಇದ್ದಂತಹ ಸಂವಿಧಾನದ ಗೌರವವು ನಂತರದ ದಿನಗಳಲ್ಲಿ ಮರೆತು ಸಂವಿಧಾನ ವಿರುದ್ದವೇ ಕೆಲವು ಚಟುವಟಿಕೆಗಳಲ್ಲಿ ನಿಸ್ಸೀಮರಾಗುತ್ತಾರೆಂದು ಆರೋಪಿಸಿದ ಅವರು, ಸಂವಿಧಾನದ ಮೀಸಲಾತಿಯಲ್ಲಿ ಗೆದ್ದಿರುವ ಶಾಸಕರು, ಲೋಕಸಭೆ ಸೇರಿದಂತೆ ದೊಡ್ಡ ಹುದ್ದೆಗಳನ್ನು ಅಲಂಕರಿಸುವ ವ್ಯಕ್ತಿಗಳು ಬಾಬಾ ಸಾಹೇಬ ಡಾ.ಬಿ.ಆರ್.ಅಂಬೇಡ್ಕರ್ರಿಗೆ ಗೌರವ ನೀಡಲೇಬೇಕೆಂದು ಒತ್ತಾಯಿಸಿದರು.
ಕದಸಂಸ ತಾಲೂಕು ಸಂಚಾಲಕ ದೇಶಿಹಳ್ಳಿ ಶ್ರೀನಿವಾಸ್, ಜಿಲ್ಲಾ ಸಮಿತಿ ಸದಸ್ಯ ಸೂಲಿಕುಂಟೆ ರವಿ, ತಾಲೂಕು ಸಂಘಟನಾ ಸಂಚಾಲಕ ಚೆನ್ನಕೃಷ್ಣ, ಶಿವಕುಮಾರ್, ಮೆಹಬೂಬ್, ನಾರಾಯಣಸ್ವಾಮಿ, ವೆಂಕಟೇಶ್, ರವಿ, ಕುಪ್ಪನಹಳ್ಳಿ ಆನಂದ್, ವೇಣು, ಮುನಿರಾಜು, ಗೌತಮ್ ಮುಂತಾದವರಿದ್ದರು.