PLACE YOUR AD HERE AT LOWEST PRICE
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಅನುಸರಿಸಿ ರಾಜ್ಯ ಸರ್ಕಾರ ಮತ್ತೆ ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಮಾಡುತ್ತಿದೆ. ಇದೇ ವಿಚಾರ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಸಾಕಷ್ಟು ಜನ ರೈತರು ಈ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿನಿಮಾ ತಾರೆಯರು ಬೆಂಬಲಕ್ಕೆ ಬರುವಂತೆ ಆಗ್ರಹಿಸಿದ್ದಾರೆ.
ನಿಧಾನವಾಗಿ ಸ್ಯಾಂಡಲ್ವುಡ್ ತಾರೆಯರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ದರ್ಶನ್, ಸುದೀಪ್ ಟ್ವೀಟ್ ಮಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೀಗ ನಟ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ. ವಿಡಿಯೋ ಮಾಡಿ ಮಾತನಾಡಿದ್ದಾರೆ. ಇನ್ನು ರಾಘವೇಂದ್ರ ರಾಜ್ಕುಮಾರ್, ದೊಡ್ಡಣ್ಣ, ಸುಮಲತಾ ಅಂಬರೀಶ್ ಸೇರಿದಂತೆ ಹಲವರು ಈ ವಿಚಾರದ ಬಗ್ಗೆ ದನಿ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಶಿವರಾಜ್ಕುಮಾರ್ ಮಾತನಾಡಿ “ರೈತ ದೇಶದ ಬೆನ್ನೆಲುಬು ಅಂತಾರೆ ಆ ರೈತನ ಬೆನ್ನೆಲುಬು ನಮ್ಮ ಕಾವೇರಿ. ರಾಜ್ಯದಲ್ಲಿ ಈ ಸರಿ ಮಳೆಯ ಅಭಾವವಿದು ರೈತ ಆಗಲೇ ಸಂಕಷ್ಟದಲ್ಲಿದಾನೆ. ಎರಡು ರಾಜ್ಯದ ನಾಯಕರು ಹಾಗು ನ್ಯಾಯಾಲಯ ಎಲ್ಲ ಅಂಶಗಳನ್ನು ಪರಿಶೀಲಿಸಿ ಒಂದು ಸಮಾಧಾನಕರ ಪರಿಹಾರ ಕಂಡುಕೊಳ್ಳಬೇಕು ಅನ್ನೋದು ನನ್ನ ಪ್ರಾರ್ಥನೆ” ಎಂದಿದ್ದಾರೆ.
ನಟ ಅಭಿಷೇಕ್ ಅಂಬರೀಶ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರೈತರ ಹೋರಾಟಕ್ಕೆ ಅಂಬಿ ಬೆಂಬಲ ನೀಡಿದ್ದ ಹಳೇ ಫೋಟೊ ಶೇರ್ ಮಾಡಿ “ನಮಸ್ಕಾರ.. ನಮ್ಮ ಕರ್ನಾಟಕದ ಕೋಟ್ಯಾಂತರ ಜನರ ಜೀವನದಿಯಾಗಿರುವ ಕಾವೇರಿ ನೀರನ್ನು ದಯಾ ದಾಕ್ಷಣೆ ಇಲ್ಲದೆ ಅನ್ಯಾಯವಾಗಿ ನಮ್ಮಿಂದ ಕಸಿದುಕೊಳ್ಳುತ್ತಿರುವುದು ಸರಿಯಲ್ಲ. ಇನ್ನಾದರೂ ಈ ತಕ್ಷಣವೇ ಈಗಿರುವ ಎರಡು ರಾಜ್ಯದ ಸರ್ಕಾರಗಳು ಈ ಅನ್ಯಾಯವನ್ನು ತಡೆದು ಇದನ್ನೇ ನಂಚಿಕೊಂಡಿರುವ ಕೋಟ್ಯಾಂತರ ಜನರಿಗೆ ತಕ್ಷಣವೇ ನ್ಯಾಯ ಸಲ್ಲಿಸಬೇಕು.
ಈ ವಿಷಯವಾಗಿ ಯಾವುದೇ ಸಂದರ್ಭ ಬಂದರು ಕಾವೇರಿ ತಾಯಿಯನ್ನು ನಂಬಿರುವ ನನ್ನ ಜನರ ಪರವಾಗಿ ಹೋರಾಟ ಮಾಡಲು ಸದಾ ಅವರ ಜೊತೆ ಇರುತ್ತೇನೆ, ಮೊದಲು ನಮ್ಮ ರೈತರನ್ನು ನೋಡಿಕೊಳ್ಳೋಣ ಆಮೇಲೆ ಪಕ್ಕದ ಊರಿನ ಬಗ್ಗೆ ಚಿಂತಿಸೋಣ. ಕಾವೇರಿ ನಮ್ಮದು ಜೈ ಕರ್ನಾಟಕ ಮಾತೆ” ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.