PLACE YOUR AD HERE AT LOWEST PRICE
ದೇಶಾದ್ಯಂತ ಇರುವ 90 ಕಾರ್ಯದರ್ಶಿ ಮಟ್ಟದ ಅಧಿಕಾರಿಗಳಲ್ಲಿ ಒಬಿಸಿ ಸಮುದಾಯದವರ ಸಂಖ್ಯೆ ಕೇವಲ ಮೂವರು ಮಾತ್ರ. ಇವರು ಭಾರತದ ಬಜೆಟ್ನ ಶೇ.5 ರಷ್ಟು ಮಾತ್ರ ನಿಯಂತ್ರಿಸುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೇಸರ ವ್ಯಕ್ತಪಡಿಸಿದ್ದಾರೆ.
ಸಂಸತಿನ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, “ಕಾರ್ಯದರ್ಶಿಗಳಲ್ಲಿ ಒಬಿಸಿ ಅಧಿಕಾರಿಗಳು ಎಷ್ಟಿದ್ದಾರೆ ಎಂದು ಕೇಳಿ ಉತ್ತರ ತಿಳಿದುಕೊಂಡಾಗ ನಾನು ಆಘಾತಕ್ಕೊಳಗಾದೆ. ಕೇವಲ ಮೂವರು ಮಾತ್ರ ಒಬಿಸಿ ಅಧಿಕಾರಿಗಳಿದ್ದು ಬಜೆಟ್ನ ಶೇ. 5 ರಷ್ಟು ಹಣ ಮಾತ್ರ ಅವರು ನಿಯಂತ್ರಿಸುತ್ತಾರೆ. ಇದು ಅವಮಾನ ಮತ್ತು ಅಪಮಾನಕರವಾದ ವಿಷಯವಾಗಿದೆ” ಎಂದು ತಿಳಿಸಿದರು.
“ದೇಶದಲ್ಲಿ ಎಷ್ಟು ಮಂದಿ ಒಬಿಸಿ, ದಲಿತರು ಮತ್ತು ಆದಿವಾಸಿಗಳಿದ್ದಾರೆ ಎಂದು ಪ್ರಶ್ನಿಸಿದ ಅವರು, ಜಾತಿ ಗಣತಿ ಬಳಸಿ ಮಾತ್ರ ಈ ಸಂಖ್ಯೆಯ ನಿಖರತೆಯನ್ನು ನಿರ್ಧರಿಸಲು ಸಾಧ್ಯ. ಪ್ರತಿಪಕ್ಷಗಳು ಜಾತಿ ಗಣತಿ ವಿಷಯ ಎತ್ತುವ ಕ್ಷಣದಲ್ಲಿ ಬಿಜೆಪಿಯು ಹೊಸ ಗೊಂದಲವನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ” ಎಂದು ರಾಹುಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಿಳಾ ಮೀಸಲಾತಿ ಮಸೂದೆಯಲ್ಲಿ ಒಬಿಸಿ ಕೋಟಾಕ್ಕೆ ಒತ್ತಾಯಿಸಿದ ರಾಹುಲ್ ಗಾಂಧಿ, ಈ ಸಮುದಾಯಕ್ಕೆ ಕೋಟಾದ ಕೊರತೆಯಿಂದಾಗಿ ಮೀಸಲಾತಿ ಉದ್ದೇಶ ಅಪೂರ್ಣವಾಗುತ್ತದೆ. ಮಹಿಳಾ ಮೀಸಲಾತಿ ಮಸೂದೆಯಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಪ್ರತ್ಯೇಕ ಕೋಟಾವನ್ನು ನೀಡಬೇಕು. ಅಲ್ಲದೆ ಜಾತಿ ಜನಗಣತಿ ಅಂಕಿಅಂಶವನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಹೊಸ ಸಂಸತ್ತಿನ ಕಟ್ಟಡಕ್ಕೆ ಕಲಾಪಗಳನ್ನು ವರ್ಗಾವಣೆ ಮಾಡುವಾಗ ರಾಷ್ಟ್ರಪತಿಯನ್ನು ಆಹ್ವಾನಿಸಬೇಕಿತ್ತು ಎಂದೂ ರಾಹುಲ್ ಗಾಂಧಿ ಈ ಸಂದರ್ಭದಲ್ಲಿ ಹೇಳಿದರು.
“ಇದು ಸಾಕಷ್ಟು ಸುಂದರವಾದ ಕಟ್ಟಡ, ನೆಲದ ಮೇಲೆ ಮತ್ತು ಕುರ್ಚಿಯಲ್ಲಿ ಸುಂದರವಾದ ನವಿಲುಗಳ ಚಿತ್ರವನ್ನು ಕೆತ್ತಲಾಗಿದೆ. ಆದರೆ ನಾನೂ ಒಬ್ಬ ಮಹಿಳೆಯಾಗಿರುವ ಭಾರತದ ರಾಷ್ಟ್ರಪತಿಯನ್ನು ನೋಡಲು ಇಷ್ಟಪಡುತ್ತೇನೆ. ಅವರು ಬುಡಕಟ್ಟು ಸಮುದಾಯವನ್ನು ಪ್ರತಿನಿಧಿಸುತ್ತಾರೆ. ಒಂದು ಸದನದಿಂದ ಇನ್ನೊಂದು ಸದನಕ್ಕೆ ವರ್ಗಾವಣೆಯಾಗುವಾಗ ಅವರು ಕಾಣಿಸಿಕೊಳ್ಳುವುದು ಸೂಕ್ತವಾಗಿತ್ತು” ಎಂದು ರಾಹುಲ್ ಗಾಂಧಿ ಹೇಳಿದರು.