PLACE YOUR AD HERE AT LOWEST PRICE
ಹುಬ್ಬಳ್ಳಿ:ಕಾವೇರಿ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸುವ ಪ್ರಶ್ನೆ ಬರುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದಿಂದ ಆರಂಭದಿಂದಲೇ ತಪ್ಪು ಹೆಜ್ಜೆ ಆಗಿದ್ದು, ಈ ಕಾವೇರಿ ವಿಚಾರದಲ್ಲಿ ಪ್ರಧಾನಿ ಮತ್ತು ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯ ಪ್ರಶ್ನೆ ಬರುವುದಿಲ್ಲ. ಇಷ್ಟರ ನಡುವೆಯೂ ನಾವು ಸಾಧ್ಯವಾದಷ್ಟು ಸಾಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಡುತ್ತಿದ್ದೇವೆ ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ 2,500 ಕ್ಯೂಸೆಕ್ ನೀರು ಬಿಡುವುದಾಗಿ ಹೇಳುವ ಅವಶ್ಯಕತೆ ಇರಲಿಲ್ಲ. ತಮಿಳುನಾಡು ಮತ್ತು ಕರ್ನಾಟಕದ ಸಿಎಂಗಳು ಒಂದೆಡೆ ಕುಳಿತು ಚರ್ಚೆ ಮಾಡಬೇಕು. ರಾಜ್ಯದ ಎಲ್ಲ ಸಂಸದರು ಮತ್ತು ರಾಜ್ಯಸಭಾ ಸದಸ್ಯರು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮುಂದೆಯೂ ರಾಜ್ಯ ಸರ್ಕಾರದ ಜೊತೆಗೆ ಇರಲಿದ್ದೇವೆ ಎಂದು ಹೇಳಿದರು.
ಸದ್ಯದ ನೀರಿನ ಪರಿಸ್ಥಿತಿಯ ಕುರಿತು ಸಮಗ್ರ ಅಧ್ಯಯನಕ್ಕಾಗಿ ಅಧಿಕಾರಿಗಳ ತಂಡವನ್ನು ಕಳುಹಿಸಿ ಕೊಡುವಂತೆ ಕೇಳಿದ್ದಾರೆ ಅದನ್ನು ಕೇಂದ್ರ ಜಲಶಕ್ತಿ ಸಚಿವರಿಗೆ ಮನವರಿಕೆ ಮಾಡಿದ್ದೇವೆ.ಮತ್ತೊಮ್ಮೆ ಸದ್ಯದ ನೀರಿನ ಸಂಗ್ರಹದ ಅಧ್ಯಯನ ಮಾಡಲು ಹೇಳಿದ್ದೇವೆ. ಕೇಂದ್ರ ಸಚಿವರು ಸಹ ಒಪ್ಪಿಕೊಂಡಿದ್ದಾರೆ.
ಕಾವೇರಿ ಸೇರಿದಂತೆ ಯಾವುದೇ ನೀರಿನ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಆಗಬಾರದು. ಈ ನಿಟ್ಟಿನಲ್ಲಿ ಸರ್ವ ರೀತಿಯ ಸಹಕಾರವನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದೇವೆ. ಆದರೆ ರಾಜ್ಯ ಸರ್ಕಾರ ಆರಂಭದಿಂದಲೂ ಎಡವುತ್ತ ಬಂದಿದ್ದು,ಆದಷ್ಟು ಬೇಗ ನಮ್ಮ ನೀರನ್ನು ನಾವು ಉಳಿಸಿಕೊಳ್ಳಬೇಕು ಎಂದರು.
ರಾಜೀನಾಮೆ ಕೊಡಬೇಕೆಂಬ ಸಚಿವ ಮಹದೇವಪ್ಪ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಮಹದೇವಪ್ಪ ಅವರು ಹಿಂದೊಂದು, ಮುಂದೊಂದು ಮಾತನಾಡುತ್ತಾರೆ. ನಾವೇನು ಸಹಕಾರ ಕೊಟ್ಟಿದ್ದೇವೆ ಎನ್ನುವುದನ್ನು ಡಿಕೆಶಿ ಅವರಿಗೆ ಕೇಳಲಿ. ತಮ್ಮ ಘಟಬಂಧನ್ ಉಳಿಸಿಕೊಳ್ಳೋಕೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರವಿದ್ದು, ಡಿಎಂಕೆ ಸರ್ಕಾರ ಜೊತೆ ರಾಜ್ಯ ಕಾಂಗ್ರೆಸ್ ಸರ್ಕಾರದ ಒಳ್ಳೆಯ ನಂಟಿದೆ.
ಐಎನ್ಡಿಐಎ ಒಕ್ಕೂಟಕ್ಕಾಗಿ ಪರಸ್ಪರ ಆಲಂಗಿಸಿಕೊಂಡಿದ್ದರು. ಅವರಿಬ್ಬರೂ ಪರಸ್ಪರ ಕುಳಿತು ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳಬಹುದು ಆದರೆ ಅದನ್ನು ಇಬ್ಬರು ಮಾಡುತ್ತಿಲ್ಲ. ಸನಾತನ ಧರ್ಮದ ವಿಚಾರದಲ್ಲಿ ಅಸಭ್ಯವಾಗಿ ಮಾತನಾಡಿದಾಗಲೂ ಕಾಂಗ್ರೆಸ್ ಅದನ್ನು ಖಂಡಿಸುವ ಪ್ರಯತ್ನ ಮಾಡಲಿಲ್ಲ.ಕಾವೇರಿ ವಿಷಯದಲ್ಲಿ ಎಲ್ಲ ರೀತಿಯ ಸಹಕಾರವನ್ನು ನಾವು ಕೊಡಲು ಬದ್ಧ ಎಂದು ಹೇಳಿದರು.