PLACE YOUR AD HERE AT LOWEST PRICE
ಕೆಜಿಎಫ್:ಆಂದ್ರ ಪ್ರದೇಶದ ತೆಲುಗು ದೇಶಂ ಪಕ್ಷದ(ಪಾರ್ಟಿ) ನಾಯಕ ಮಾಜಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಶೀಘ್ರವಾಗಿ ಬಿಡುಗಡೆಯಾಗಲಿ ಎಂದು ಪಕ್ಷದ ಕಾರ್ಯಕರ್ತರು ಬಂಗಾರು ತಿರುಪತಿ(ಗುಟ್ಟಹಳ್ಳಿ)ಯ ಶ್ರೀ ವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಂಗಾರು ತಿರುಪತಿ ದೇಗುಲಕ್ಕೆ ತೆಲುಗು ದೇಶಂ ಪಕ್ಷದ ವಿ.ಕೋಟ ಮಂಡಲ್ಗೆ ಸೇರಿದ ಸುಮಾರು ೪೦೦ಕ್ಕೂ ಹೆಚ್ಚು ಕಾರ್ಯಕರ್ತರು ಬೈಕ್ ರ್ಯಾಲಿಯ ಮೂಲಕ ಬಂದು ಬಂಗಾರು ತಿರುಪತಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಈ ವೇಳೆ ತೆಲುಗು ದೇಶಂ ಪಕ್ಷದ ವಿ.ಕೋಟ ಮಂಡಲ್ ಅಧ್ಯಕ್ಷ ರಂಗನಾಥ್ ಮಾತನಾಡಿ, ಆಂದ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಇಲ್ಲಸಲ್ಲದ ಸುಳ್ಳು ಕೇಸುಗಳನ್ನು ಹಾಕಿ ಕುತಂತ್ರದಿಂದ ಜೈಲಿಗೆ ಕಳುಹಿಸಿದ್ದಾರೆ. ಆಂದ್ರ ಪ್ರದೇಶ ಸೇರಿದಂತೆ ಇತರೆ ರಾಜ್ಯದ ಜನತೆಯೂ ಸಹ ಇಷ್ಟು ಪಡುವಂತಹ ಆಡಳಿತವನ್ನು ಅವರು ೫ ವರ್ಷಗಳಲ್ಲಿ ನೀಡಿದ್ದಾರೆ. ಈಗಿನ ಸರ್ಕಾರ ಕುತಂತ್ರದಿಂದ ಬಂಧಿಸಿದ್ದಾರೆಂದು ಆರೋಪಿಸಿದರು.
ಜಿಪಂ ಮಾಜಿ ಸದಸ್ಯ ಚೌಡಪ್ಪ ಮಾತನಾಡಿ, ಆಂದ್ರ ಪ್ರದೇಶದ ಮಾಜಿ ಮುಖ್ಯ ಮಂತ್ರಿ ಚಂದ್ರಬಾಬುನಾಯ್ಡು ಅವರನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಅವರ ಆರೋಗ್ಯವನ್ನು ಸಹ ಜೈಲಿನಲ್ಲಿ ಕಾಪಾಡಿಕೊಳ್ಳಬೇಕಿದೆ. ಪ್ರತಿಯೊಬ್ಬರೂ ಪ್ರೀತಿಸುವಂತಹ ನಾಯಕ ಚಂದ್ರಬಾಬು ನಾಯ್ಡು. ಆಂದ್ರ ಪ್ರದೇಶದಲ್ಲಿನ ಆಡಳಿತ ಸರ್ಕಾರ ಮುಂದಿನ ಚುನಾವಣೆಯಲ್ಲಿ ಸೋತು, ತೆಲುಗು ದೇಶಂ ಪಾರ್ಟಿ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಂಬಾಬು, ನಾಗಭೂಷಣ್, ಯುವ ಘಟಕ ಅಧ್ಯಕ್ಷ ದೀರಾಜ್, ಜಿಪಂ ಮಾಜಿ ಸದಸ್ಯ ವಿಶ್ವನಾಥ್, ಮಹಿಳಾ ಘಟಕ ಅಧ್ಯಕ್ಷೆ ಶಿವ ಕುಮಾರಿ, ಮುಖಂಡರಾದ ಕುಮಾರ್, ಗೋವಿಂದಪ್ಪ, ಜ್ಯೋತಿಸರ, ನಾರಾಯಣಸ್ವಾಮಿ ಮೊದಲಾದವರು ಭಾಗವಹಿಸಿದ್ದರು.