PLACE YOUR AD HERE AT LOWEST PRICE
ಬಂಗಾರಪೇಟೆ.ಕನ್ನಡ ಸಂಘಕ್ಕೆ ಕನ್ನಡ ಭವನ ನಿರ್ಮಾಣಕ್ಕೆ ನೀಡಿದ್ದ ನಿವೇಶನವನ್ನು ಹಿಂಪಡೆದು ಸರ್ಕಾರದ ವತಿಯಿಂದಲೇ ಭವ್ಯವಾದ ಕನ್ನಡ ಭವನವನ್ನು ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ನಾರಾಯಾಣಸ್ವಾಮಿ ಭರವಸೆ ನೀಡಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ೬೮ನೇ ಕನ್ನಡ ರಾಜೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ೪೦ವರ್ಷಗಳ ಹಿಂದೆ ಕನ್ನಡ ಭವನ ನಿರ್ಮಾಣಕ್ಕೆ ಕನ್ನಡ ಸಂಘಕ್ಕೆ ನಿವೇಶನ ಕೊಡಲಾಗಿತ್ತು.ಆದರೆ ಇದುವರೆಗೂ ಸಂಘವು ಭವನ ನಿರ್ಮಾಣ ಮಾಡಿಲ್ಲ.
ಭವನ ನಿರ್ಮಾಣ ಮಾಡುವುದಾಗಿ ಹೇಳಿಕೊಂಡು ಜನರನ್ನು ಯಾಮಾರಿಸಲಾಗುತ್ತಿದೆಯೇ ವಿನಃ ಉದ್ದೇಶ ಈಡೇರಿಲ್ಲ ಎಂದು ಕನ್ನಡ ಸಂಘದ ಅಧ್ಯಕ್ಷರಾದ ಪಲ್ಲವಿಮಣಿರನ್ನು ಹೆಸರು ಹೇಳದೆ ಟೀಕಿಸಿದರು.
ಕನ್ನಡ ಸಂಘದ ಹೆಸರನ್ನು ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು ಕಾಲಹರಣ ಮಾಡಲಾಗುತ್ತಿದೆ. ಈಗಾಗಲೇ ೫ಬಾರಿ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಲಾಗಿದೆ ಆದರೆ ಭವನ ಮಾತ್ರ ತಲೆ ಎತ್ತಲಿಲ್ಲ.
ಆದ್ದರಿಂದ ಕನ್ನಡ ಸಂಘಕ್ಕೆ ನೀಡಿದ್ದ ನಿವೇಶನವನ್ನು ಹಿಂಪಡೆದು ಸರ್ಕಾರದ ವತಿಯಿಂದಲೇ ಕನ್ನಡ ಭವನ ನಿರ್ಮಾಣ ಮಾಡಲಾಗುವುದು. ಈ ಕಾರ್ಯಕ್ಕೆ ಸರ್ಕಾರದಿಂದ ೫೦ಲಕ್ಷ ಅನುದಾನ ತರುವೆ ಹಾಗೂ ನಾನು ೧೦ಲಕ್ಷ ನೀಡುವೆ ಎಂದು ಭರವಸೆ ನೀಡಿದರು.
ಇದಲ್ಲದೆ ನ.೧೦ರಂದು ಕೋದಂಡರಾಮಸ್ವಾಮಿ ದೇವಾಲಯದ ವಾಣಿಜ್ಯ ಸಂಕಿರಣಕ್ಕೆ ಸಹ ಚಾಲನೆ ನೀಡಲಾಗುವುದು ಎಂದರು.
ಭಾರತ ದೇಶವನ್ನು ಆಕರ್ಷಣೆ ಮಾಡುವ ಕರ್ನಾಟಕ ಎಲ್ಲರಿಗೂ ಸುರಕ್ಷಿತ ಪ್ರದೇಶವಾಗಿದೆ. ಇಂತಹ ರಾಜ್ಯದಲ್ಲಿ ವಾಸವಾಗಿರುವ ಅನ್ಯ ಭಾಷಿಕರು ಕನ್ನಡ ಕಲಿತು ಭಾಷೆ ಅಭಿವೃದ್ದಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಬೇಕು ರಂದರು.
ಇದೇ ವೇಳೆ ಕನ್ನಡ ಹೋರಾಟಗಾರರಾದ ರಂಗರಾಮಯ್ಯ, ನಂಜಪ್ಪ, ಪ್ರಸಾದ್, ಜಗದೀಶ್, ಬೇಕರಿ ಶ್ರೀನಿವಾಸ್ ರನ್ನು ಸತ್ಕರಿಸಲಾಯಿತು.
ಈ ವೇಳೆ ತಹಸೀಲ್ದಾರ್ ಯು.ರಶ್ಮಿ ತಾಪಂ ಇಒ ರವಿಕುಮಾರ್, ಪುರಸಭೆ ಮುಖ್ಯಾಧಿಕಾರಿ ಎಂ.ಮೀನಾಕ್ಷಿ, ಬಿಇಒ ಬಿ.ಎನ್.ಸುಕನ್ಯ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಅಪ್ಪಯ್ಯಗೌಡ, ಕಾರ್ಯದರ್ಶಿ ಎಲ್.ರಾಮಕೃಷ್ಣ, ಡಿಸಿಸಿ ಬ್ಯಾಂಕಿನ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಂಜನೇಯಗೌಡ, ಕಸಾಪ ಸಂಜೀವಪ್ಪ, ಪುರಸಭೆ ಸದಸ್ಯರಾದ ಶಂಷುದ್ದಿನ್ ಬಾಬು, ರಾಕೇಶ್ ಗೌಡ ಮತ್ತಿತರರು ಇದ್ದರು.