PLACE YOUR AD HERE AT LOWEST PRICE
ಬಂಗಾರಪೇಟೆ:ತಾಂತ್ರಿಕ ಕಾರಣದಿಂದ ಕನ್ನಡ ಭವನ ನಿರ್ಮಾಣಕ್ಕೆ ತೊಡಕಾಗಿದ್ದು ಈ ಬಾರಿ ಯಾವುದೇ ವಿಘ್ನಗಳಿಲ್ಲದೆ ಕನ್ನಡ ಭವನವನ್ನು ನಿರ್ಮಾಣ ಮಾಡಿಯೇ ತೀರುವೆವು ಎಂದು ಕನ್ನಡ ಸಂಘದ ಅಧ್ಯಕ್ಷ ಡಾಃಪಲ್ಲಮಣಿ ತಿಳಿಸಿದರು.
ಪಟ್ಟಣದ ಗಂಗಮ್ಮನಪಾಳ್ಯ ರಸ್ತೆಯಲ್ಲಿರುವ ಕನ್ನಡ ಸಂಘದ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ೬೮ನೇ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸಿ ಮಾತನಾಡಿದ ಅವರು ಸುಮಾರು ೫೫ ವರ್ಷಗಳಿಂದ ಹಲವು ಮಹಾನೀಯರು ಕಟ್ಟಿ ಬೆಳೆಸಿರುವ ಕನ್ನಡ ಸಂಘವನ್ನು ಮುನ್ನೆಡೆಸುವ ಜವಾಬ್ದಾರಿ ನನಗೆ ದಕ್ಕಿರುವುದು ನನ್ನ ಪುಣ್ಯವಾಗಿದೆ.
ಪುರಸಭೆ ೫೦ಕ್ಕೆ೧೦೦ ಅಳತೆಯ ನಿವೇಶನವನ್ನು ಕನ್ನಡ ಭವನ ಕಟ್ಟಲಿಕ್ಕೆ ನೀಡಿದೆ, ಆದರೆ ಅದರ ಪಕ್ಕದಲ್ಲಿರುವ ಜಾಗವನ್ನೂ ಪಡೆದು ನಿರ್ಮಾಣ ಮಾಡಲು ಪುರಸಭೆಗೆ ಮನವಿ ಸಲ್ಲಿಸಲಾಗಿದೆ. ಅದು ತಾಂತ್ರಿಕ ಕಾರಣದಿಂದ ಈಡೇರಲಿಲ್ಲ ಎಂದು ತಿಳಿಸಿದರು.
ಇನ್ನು ವಿಳಂಬ ಮಾಡದೆ ನಾವು ಭವನ ಕಟ್ಟಲಿಕ್ಕೆ ಶುರು ಮಾಡಿದರೆ ಹಲವು ಮಂದಿ ದಾನಿಗಳು ಸಹಕಾರ ನೀಡಲು ಮುಂದೆ ಬರುವರು. ಸಂಘ ಈಗ ಭವನ ನಿರ್ಮಾಣಕ್ಕೆ ಕಂಕಣ ಬದ್ದವಾಗಿದ್ದು ಅತಿ ಶೀಘ್ರದಲ್ಲೆ ಭವನ ನಿರ್ಮಾಣ ಕರ್ಯ ಆರಂಭವಾಗಲಿದೆ ಎಂದರು.
ಪಟ್ಟಣದ ಕನ್ನಡ ಸಂಘವು ರಾಜ್ಯದಲ್ಲಿಯೇ ಮಾದರಿಯಾಗಿದೆ,ಇಡೀ ವರ್ಷ ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವ ಹಾಗೂ ಅನ್ಯ ಭಾಷಿಗರಿಗೆ ಕನ್ನಡ ಭಾಷೆ ಕಲಿಸುವ ಕೆಲಸವನ್ನು ಕನ್ನಡ ಸಂಘ ಮಾಡುತ್ತಿದೆ ಎಂದರು.
ಈ ವೇಳೆ ಸಂಘದ ಹೇಮಂತ್ ಕುಮಾರ್, ಬಿ.ಪಿ.ಮಹೇಶ್, ಮುರಳಿ, ವಿಜಿಕುಮಾರ್, ನಾರಾಯಣಸ್ವಾಮಿ, ನಂಜಪ್ಪ, ಉಮೇಶ್, ನಂಜುಂಡಿ, ಎಸ್.ನಾರಾಯಣ್, ಮಧುಸೂದನ್, ಮಂಜುನಾಥ್ ಮತ್ತಿತರರು ಇದ್ದರು.