PLACE YOUR AD HERE AT LOWEST PRICE
ಧನರಾಜ್ ಕನಸನ್ನು ಪೂರ್ಣಗೊಳಿಸವ ಜವಾಬ್ದಾರಿ ನಮ್ಮೆಲ್ಲರದು;ಸಿಎಂಆರ್ ಶ್ರೀನಾಥ್.
ಕೋಲಾರ:ಸದಾ ಕ್ರೀಯಾಶೀಲರಾಗಿದ್ದ, ಸದಾ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಪ್ರಗತಿಗೆ ಶ್ರಮಿಸಿದ ಹಿರಿಯ ವಕೀಲರಾದ ಕೆ.ಆರ್. ಧನರಾಜ್ ಅಗಲಿಕೆಯು ಬಹಳ ನೋವು ಉಂಟುಮಾಡಿದ್ದು, ಅವರು ಕೈಗೊಂಡಿದ್ದ ಕಾರ್ಯಕ್ರಮಗಳು ನಮಗೆಲ್ಲರಿಗೂ ಸ್ಪೂರ್ತಿಯಾಗಿದೆ. ಧನರಾಜ್ರವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು ಸಮಾಜ ಸೇವಕ ಸಿ.ಎಂ.ಆರ್. ಶ್ರೀನಾಥ್ ತಿಳಿಸಿದರು.
ಆತ್ಮೀಯ ಬಳಗ ಕೋಲಾರ ನಗರದ ಗಾಂಧಿವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ವಕೀಲ ಕೆ.ಆ ಧನರಾಜ್ ರವರಿಗೆ ಸಂತಾಪ ಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ, ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಧನರಾಜ್ರವರು ನಮ್ಮನ್ನು ಅಗಲಿದ್ದು, ಅವರ ಆದರ್ಶಗಳು, ಸಾಮಾಜಿಕ ಕಾರ್ಯಗಳು, ಕಾನೂನು ಅರಿವು ಕಾರ್ಯಮಗಳು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ. ಅವರ ಕಾರ್ಯಕ್ರಮಗಳನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಬೇಕಾಗಿದೆ ಎಂದರು.
ಕಾರ್ಯನಿರತ ಪತ್ರಕರ್ತ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಇಪ್ಪತ್ತು ವರ್ಷಗಳ ಹಿಂದೆ ಧನರಾಜ್ ಸ್ಥಾಪಿಸಿದ ಕೆ.ಸಿ.ಟಿ.ವಿ. ಮೂಲಕ ನನ್ನ ಅವರ ಪರಿಚಯ ಪ್ರಾರಂಭವಾಯಿತು. ಆ ಮೂಲಕ ನಗರದ ಜನತೆಗೆ ಮೊಟ್ಟ ಮೊದಲನೆಯದಾಗಿ ಸ್ಥಳೀಯ ನ್ಯೂಸ್ ಚಾನಲ್ ಪ್ರಾರಂಭವಾಯಿತು.
ನ್ಯೂಸ್ ನೋಡಲು ಕೋಲಾರದ ಜನತೆ ಪ್ರತಿನಿತ್ಯ ೭.೩೦ಕ್ಕೆ ಟಿ.ವಿ. ಮುಂದೆ ಹಾಜರಾಗುತ್ತಿದ್ದರು. ಆ ಮೂಲಕ ಕೋಲಾರ ಸುದ್ದಿಗಳನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದರು ಎಂದರು
ನಗರದ ಪಿಸಿ ಹಳ್ಳಿಯಲ್ಲಿ ಸಾಮಾಜಿಕ ಕಾಳಜಿಯಿಂದ ಧನರಾಜ್ ಸ್ಥಾಪಿಸಿರುವ ಮುಸ್ಸಂಜೆ ಮನೆಯ ಮೂಲಕ ವೃದ್ದರು, ಅನಾಥ ಚಿಣ್ಣರನ್ನು ತಮ್ಮ ಕುಟುಂಬದ ಮಕ್ಕಳಂತೆ ಪ್ರೀತಿಯಿಂದ ಪೋಷಿಸುವ ಮೂಲಕ ಆಶ್ರಮದ ಹಿರಿಯ ಜೀವಿಗಳ ಕನಸುಗಳಿಗೆ ಜೀವ ತುಂಬಿದ್ದರು.
ನಾವೆಲ್ಲರೂ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಸಂಸ್ಥೆಯ ಮುಖ್ಯಸ್ಥರಿಗೆ ಸಹಕಾರ ನೀಡಬೇಕು. ಆಗ ಮಾತ್ರ ಅವರ ಆತ್ಮಕ್ಕೆ ಶಾಂತಿ ದೊರೆತಂತಾಗುತ್ತದೆ ಎಂದರು.
ಅಮೇರಿಕಾದಲ್ಲಿರುವ ಪತ್ನಿ, ಮಕ್ಕಳು ಸೋಮವಾರ ಆಗಮಿಸಲಿದ್ದು, ನಂತರವಷ್ಟೇ ಧನ್ ರಾಜ್ ರವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದರು.
ಕನ್ನಡ ಹೋರಾಟಗಾರ ಕೊ.ನ. ಪ್ರಭಾಕರ್ ಮಾತನಾಡಿ, ಕನ್ನಡಪರ ಹೋರಾಟ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿ ಇರುತ್ತಿದ್ದ ಧನರಾಜ್, ವೀರಪ್ಪನ್ರಿಂದ ಡಾ.ರಾಜ್ ಅಪಹರಣವಾದ ಸಂದರ್ಭದಲ್ಲಿ ಕ್ಯಾಮರಾ ತಂಡದೊಂದಿಗೆ ಕಾಡಿಗೆ ತೆರಳಿ ಹುಡುಕಾಟ ನಡೆಸಿದ್ದರು.
ಬಹುಮುಖ ಪ್ರತಿಭೆಯಾಗಿದ್ದ ಧನರಾಜ್ರವರು ಆಡಂಬರದ ಪ್ರಚಾರವಿಲ್ಲದೆ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು ಎಂದರು.
ಕಾಂಗ್ರೆಸ್ ಎಸ್.ಸಿ. ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಮಾತನಾಡಿ, ಧನರಾಜ್ ರವರು ನನಗೆ ಬಹಳ ಆತ್ಮೀಯಾಗಿದ್ದರು. ಪತ್ನಿ ಮಕ್ಕಳೊಂದಿಗೆ ಅಮೇರಿಕಾಗೆ ಹೋದ ಸಂದರ್ಭದಲ್ಲಿ ಅವರನ್ನು ಏರ್ಪೋರ್ಟ್ವರೆಗೂ ನಾನೇ ಬಿಟ್ಟು ಬಂದೆ ಆಗ ನನಗೆ ಬಹಳ ದುಃಖವಾಗಿ ಅವರನ್ನು ಅಪ್ಪಕೊಂಡು ಬೀಳ್ಕೊಟ್ಟಿದ್ದೆ.
ಆದರೆ ಅವರು ಕೆಲವೇ ವರ್ಷಗಳಲ್ಲಿ ಅಮೇರಿಕಾದಲ್ಲಿ ಇರಲೊಪ್ಪದೇ ಜನಸೇವೆಗೆಂದೇ ಪತ್ನಿ, ಮಕ್ಕಳನ್ನು ಅಲ್ಲೇ ಬಿಟ್ಟು ಕೋಲಾರದಲ್ಲಿ ವಕೀಲ ವೃತ್ತಿಯೊಂದಿಗೆ ಕಾನೂನು ನೆರವು ಶಿಬಿರಗಳು, ಕಾರ್ಮಿಕರಿಗೆ ನೆರವು, ಕನ್ನಡಪರ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು.
ಧನರಾಜ್ರವರ ಸಾವಿನ ಸುದ್ದಿ ತಿಳಿದು ದಿಢೀರ್ ಅಲ್ಲಿಗೆ ಧಾವಿಸಿದ ವೃದ್ದಾಶ್ರಮದ ಹಿರಿಯರು ಕಣ್ಣೀರಿಡುತ್ತಾ ಬಿಕ್ಕಿಬಿಕ್ಕಿ ಅತ್ತದ್ದು, ಹೃದಯ ಕಲುಕುವಂತಿತ್ತು. ವೃದ್ಧಾಶ್ರಮಕ್ಕೆ ಆದಾಯ ತೆರಿಗೆ ಕಡಿತಗೊಂಡಿತ್ತು. ಆಗಾಗಿ ನನಗೆ ಸರ್ಕಾರದ ಸಂಬಂಧಪಟ್ಟವರೊಂದಿಗೆ ಮಾತನಾಡಿ ತೆರಿಗೆ ವಿನಾಯಿತಿ ಮಾಡಿಸುವಂತೆ ಕೇಳಿದ್ದರು.
ನಾನು ಅವರ ಮಾತಿನಂತೆ ಸರ್ಕಾರದಿಂದ ತೆರಿಗೆ ವಿನಾಯಿತಿ ಆದೇಶ ಪಡೆದುಕೊಂಡು ಶುಕ್ರವಾರ ಕೋಲಾರಕ್ಕೆ ಬಂದು ಕರೆ ಮಾಡಿದರೆ ಕರೆ ಸ್ವೀಕರಿಸಿಲಿಲ್ಲ. ಮಧ್ಯಾಹ್ನ ಅವರು ಮರಣ ಹೊಂದಿರುವುದು ತಿಳಿದು ಅತೀವ ದುಃವಾಗಿದೆ ಎಂದರು.
ಟಿಪ್ಪು ಸೆಕ್ಯೂಲ್ ಸೇನೆಯ ಅಧ್ಯಕ್ಷ ಆಸೀಪ್ ವುಲ್ಲಾ ಮಾತನಾಡಿ ಧನರಾಜ್ ಸಾವಿನ ಸುದ್ಧಿ ನನಗೆ ಆಘಾತವನ್ನುಂಟು ಮಾಡಿದೆ. ನನ್ನ ಎಲ್ಲಾ ಸಾಮಾಜಿಕ ಕಾರ್ಯಗಳು ಹೋರಾಟಗಳನ್ನು ಬೆಂಬಲಿಸುತ್ತಿದ್ಧ ಧನರಾಜ್ರವರು ನನಗೆ ಮಾರ್ಗದರ್ಶಿಗಳಾಗಿದ್ದು, ಕಾನೂನು ಸಲಹೆಗಾರರಾಗಿದ್ದುರು.
ಕೋಲಾರದ ಕೊಂಡರಾಜನಹಳ್ಳಿಯಲ್ಲಿ ನಡೆಯುವ ವಿಜಯದಶಮಿಯ ಕೋಲಾರ ದಸರಾ ಸಮಿತಿ ಅಧ್ಯಕ್ಷರಾಗಿದ್ದ ಧನರಾಜ್, ದೇವರುಗಳ ಮೆರವಣಿಗೆ ವಿಷಯದಲ್ಲಿ ಎರಡು ಕೋಮುಗಳ ನಡುವೆ ಉಂಟಾಗಿದ್ದ ಸಂಘರ್ಷಕ್ಕೆ ಕೊನೆಯಾಡುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳು ಒಟ್ಟಾಗಿ ಸೇರಿ ದಸರಾ ಮೆರವಣಿಗೆಯನ್ನು ಆಹ್ವಾನಿಸುವಂತೆ ಮಾಡಿ ಸೌಹಾರ್ದತೆಯ ಸಂದೇಶ ಸಾರಿದ್ದರು ಎಂದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾಧ್ಯಕ್ಷಧ್ಯಕ್ಷ ತ್ಯಾಗರಾಜ್, ಕೋಲಾರ ನಗರಸಭಾ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ಎಪಿಎಂಸಿ ಪುಟ್ಟರಾಜು, ಪತ್ರಕರ್ತ ಸಿ.ವಿ.ನಾಗರಾಜ್, ಖಾಜಿಕಲ್ಲಹಳ್ಳಿ ನಾರಾಯಣಸ್ವಾಮಿ, ರಾಮಾಂಜಿನಪ್ಪ, ಮಂಜುಳ, ವೆಂಕಟಕೃಷ್ಣಪ್ಪ, ಕೋ.ನಾ. ಮಂಜುನಾಥ್, ಜಗನ್, ನಾಗರಾಜ್, ಡಿಟಿಪಿ ನಾರಾಯಣ, ಚಿನ್ನಾಪುರ ಅನಿಲ್, ಈಕಂಬಳ್ಳಿ ಮಂಜುನಾಥ್ ಉಪಸ್ಥಿತರಿದ್ದರು.