PLACE YOUR AD HERE AT LOWEST PRICE
ಕೆ.ರಾಮಮೂರ್ತಿ.
ಬಂಗಾರಪೇಟೆ:ಸಮಯ ಬೆಳಿಗ್ಗೆ 10-30 ಆದರೂ ತಾಲ್ಲೂಕು ಕಛೇರಿಯಲ್ಲಿ ಕುರ್ಚಿಗಳು ಖಾಲಿ ಖಾಲಿ ಇದ್ದು ಸಮಯಕ್ಕೆ ಸರಿಯಾಗಿ ಕಛೇರಿಗೆ ಬಾರದ ಬಹುತೇಕ ಅಧಿಕಾರಿ/ಸಿಬ್ಬಂದಿ ಪ್ರತಿದಿನ ತಡವಾಗಿ ಬರುವುದನ್ನು ರೂಢಿಮಾಡಿಕೊಂಡಿದ್ದಾರೆ. ಚುನಾವಣೆ ಶಾಖೆ ತೆರೆದೇ ಇಲ್ಲ. ಇದರಿಂದಾಗಿ ಸಾರ್ವಜನಿಕರು ಗಂಟೆಗಟ್ಟಲೆ ಕಾದು ಹೈರಾಣಾಗುತ್ತಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ನೌಕರರ ನಿರ್ಲಕ್ಷತೆ ಮತ್ತು ಅದಕ್ಷತೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಗಳು ಪದೇ ಪದೇ ಮಾಡುವ ಆದೇಶಗಳು ಇದ್ದೂ ಇಲ್ಲದಂತಾಗಿದ್ದು ಸಂಬಂಧಪಟ್ಟ ಮೇಲಧಿಕಾರಿಗಳು ಸಮಯಕ್ಕೆ ಬಾರದ ಅಧಿಕಾರಿ/ಸಿಬ್ಬಂದಿ ಮೇಲೆ ಕ್ರಮ ಜರುಗಿಸದ ಕಾರಣ ಯಾವುದೇ ಭಯವಿಲ್ಲದೆ ಅಧಿಕಾರಿ/ಸಿಬ್ಬಂದಿ ಕಛೇರಿಗೆ ತಡವಾಗಿ ಬರುತ್ತಾರೆ.
ಇನ್ನು ಕರ್ತವ್ಯ ಅವಧಿಯಲ್ಲಿ ಅಧಿಕಾರಿ/ನೌಕರರು ಕಛೇರಿಯಲ್ಲಿ ಇಲ್ಲದ ಕಾರಣ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲು ಬರುವ ಸಾರ್ವಜನಿಕರಿಗೆ ಕಿರಿಕಿರಿ ಮತ್ತು ಅಲೆದಾಟದಿಂದ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ಈ ಹಿಂದಿನ ಸರ್ಕಾರ ತಿಂಗಳ ಒಂದು ಮಂಗಳವಾರ ಜಿಲ್ಲಾಧಿಕಾರಿ ತಹಶೀಲ್ದಾರ್ ಕಛೇರಿ ಭೇಟಿ ಆದೇಶ ಮೂಲೆಗುಂಪಾಗಿದೆ.
ಸರ್ಕಾರಿ ಆದೇಶದಂತೆ ಕಛೇರಿಯಲ್ಲಿ ಕಡ್ಡಾಯವಾಗಿ ಗುರುತಿನಿ ಚೀಟಿ ಧರಿಸಬೇಕು, ಅಧಿಕಾರಿ/ಸಿಬ್ಬಂದಿ ಕುಳಿತುಕೊಳ್ಳುವ ಕೊಠಡಿಯಲ್ಲಿ ಪದನಾಮ ಫಲಕ ಇಡಬೇಕು, ಟಿ/ಕಾಫಿ ಕುಡಿಯಲು ಹೊರಗೆ ಹೋಗುವಂತಿಲ್ಲ ಎಂಬಿತ್ಯಾದಿಗಳನ್ನು ಅಧಿಕಾರಿ/ಸಿಬ್ಬಂದಿ ಮರೆತೇ ಹೋಗಿದ್ದಾರೆ ಎನ್ನುವಂತಾಗಿದೆ.
ಇಂತಹ ಹಲವು ಕಾರಣಗಳಿಂದ ಜನ ತೊಂದರೆಗೊಳಗಾಗುತ್ತಿದ್ದಾರೆ. ಜನರನ್ನು ಕಛೇರಿಗೆ ಅಲೆಸಬಾರದು ಎಂದು ಸರ್ಕಾರ ನಾನಾ ಯೋಜನೆಗಳು, ಕಾರ್ಯಕ್ರಮಗಳನ್ನು ಮಾಡುತ್ತಿದೆಯಾದರೂ ಬಹುತೇಕ ಪ್ರಯೋಜನಕ್ಕೆ ಬರುತ್ತಿಲ್ಲ ಎಂಬುದಕ್ಕೆ ಸಾಕ್ಷಿಯಾಗಿ ಖಾಲಿ ಕುರ್ಚಿ ಮತ್ತು ಕಛೇರಿಗಳಿಗೆ ಜನ ದಿನಗಟ್ಟಲೆ ಅಲೆಯುವ ಸ್ಥಿತಿ ನೋಡಬಹುದು.
ಅಧಿಕಾರಿ/ಸಿಬ್ಬಂದಿ ತಡವಾಗಿ ಕಛೇರಿಗೆ ಬರುವುದು ಬರೀ ತಾಲ್ಲೂಕು ಕಛೇರಿ ಮಾತ್ರವಲ್ಲದೆ ತಾಲ್ಲೂಕಿನ ಬಹುತೇಕ ಕಛೇರಿಗಳಲ್ಲಿ ಇದೇ ಸ್ಥಿತಿ ಇದೆ. ಕೆಲವು ಕಛೇರಿಗಳು ಮದ್ಯಾನ್ಹದ ಮೇಲೆ ಮುಚ್ಚಿರುತ್ತವೆ. ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲದಿರುವುದೂ ಸಿಬ್ಬಂದಿ ತಡವಾಗಿ ಕಛೇರಿಗೆ ಬರಲು ಕಾರಣವಾಗಿದೆ.
ಅಧಿಕಾರಿ/ಸಿಬ್ಬಂದಿ ನಿರ್ಲಕ್ಷತೆ, ಕರ್ತವ್ಯಲೋಪಗಳು ದಿನೇ ದಿನೇ ಹೆಚ್ಚುತ್ತಿದೆ. ಜನ ತಮ್ಮ ಕೆಲಸಗಳಿಗಾಗಿ ಖುಷಿಯಿಂದ ಕಛೇರಿಗೆ ಬರುವ ಸ್ಥಿತಿ ದೂರವಾಗಿದೆ. ಕೆಲವರು ನೇರವಾಗಿ ಕಛೇರಿಯಲ್ಲಿ ಕೆಲಸ ಮಾಡಿಸಿಕೊಳ್ಳಲು ಆಗದ ಸ್ಥಿತಿ ಇದೆ. ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಕ್ರಮ ಜರುಗಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.