PLACE YOUR AD HERE AT LOWEST PRICE
ಬಂಗಾರಪೇಟೆ:ಉತ್ತರ ಕನ್ನಡ ಜಿಲ್ಲೆಯ ಸಂಸತ್ ಸದಸ್ಯ ಅನಂತ್ ಕುಮಾರ್ ಹೆಗಡೆ ಪದೇ ಪದೇ ಸಂವಿಧಾನ ಬದಲಾವಣೆ ಮಾಡಬೇಕೆಂಬ ಬಹಿರಂಗ ಹೇಳಿಕೆಯನ್ನ ಕರ್ನಾಟಕ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಆತನ ಮೇಲೆ ಸುಮೋಟೋ ಕೇಸ್ ದಾಖಲಿಸಿ ದೇಶದ್ರೋಹ ಕೇಸಿನ ಮೇಲೆ ಬಂಧಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಆಗ್ರಹಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಈ ರಾಜ್ಯದ ಬಿಜೆಪಿ ನಾಯಕರಿಗೆ ಸಂವಿಧಾನ ಬಗ್ಗೆ ಗೌರವಿದ್ದರೆ ಕೂಡಲೇ ಈತನನ್ನ ಪಕ್ಷದಿಂದ ಸಸ್ಪೆಂಡ್ ಮಾಡಬೇಕು. ಈತನ ಹೇಳಿಕೆಯಿಂದ ಇಡೀ ಭಾರತದ ಕೋಟ್ಯಾಂತರ ಅಂಬೇಡ್ಕರ್ ಅನುಯಾಯಿಗಳಾದ ನಮಗೆ ಅಲ್ಲದೆ ಭಾರತ ಮಾತೆಗೆ ಮಾಡಿದ ಅವಮಾನವೆಂದು ಭಾವಿಸಬೇಕು ಎಂದು ಹೇಳಿದ್ದಾರೆ.
ಈ ದೇಶದ ಚುಕ್ಕಾಣೆ ಹಿಡಿದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಸಂವಿಧಾನ ಮೇಲೆ ಗೌರವಿದ್ದರೆ ಕೂಡಲೇ ಅನಂತ್ ಕುಮಾರ್ ಹೆಗಡೆಯನ್ನು ಪಕ್ಷದಿಂದ ಉಚ್ಚಾಟಿಸಲು ಹಾಗೂ ಆತನಿಗೆ ರಾಜ್ಯದ ಯಾವುದೇ ಹೊಣೆಗಾರಿಕೆಯನ್ನು ನೀಡಬಾರದು ಎಂದು ನಾವು ಒತ್ತಾಯಿಸುತ್ತೇವೆ.
ಒಂದು ವೇಳೆ ಆತನಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಕೊಟ್ಟರೆ ಪರೋಕ್ಷವಾಗಿ ಬಿಜೆಪಿ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಸಹ ಆತನ ಹೇಳಿಕೆಯನ್ನು ಸಮರ್ಥಿಸಿಕೊಂಡ ಹಾಗೆ ಎಂದು ಭಾವಿಸಬೇಕಾಗುತ್ತದೆ. ಏಕೆಂದರೆ ಈತ ಸಾರ್ವಜನಿಕವಾಗಿ ಬಹಿರಂಗವಾಗಿ ಸಂವಿಧಾನದ ಮೇಲೆ ಗೌರವಿಲ್ಲದೆ ಮಾತನಾಡಬೇಕಾದರೆ ಇದು ಬಿಜೆಪಿಯ ಆಂತರಿಕ ಅಜೆಂಡ ಎಂದು ಭಾವಿಸಬೇಕಾಗುತ್ತದೆ.
ಕರ್ನಾಟಕ ಸರ್ಕಾರ ಕೂಡಲೇ ಈತನ ಮೇಲೆ ಸುಮೋಟೋ ಕೇಸ್ ದಾಖಲಿಸಲು ಹಾಗೂ ದೇಶ ದ್ರೋಹದ ಕೇಸ್ ದಾಖಲಿಸಿ ಬಂಧಿಸಲು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನೆ ಸಂಚಾಲಕರಾದ ಸೂಲಿಕುಂಟೆ ರಮೇಶ್ ಮತ್ತು ನಾಗನಾಳ ಮುನಿಯಪ್ಪ ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.