PLACE YOUR AD HERE AT LOWEST PRICE
ರೈತ ಈ ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ, ಆದರೆ ಅದೇ ರೈತನಿಗೆ ತೊಂದರೆಯಾದಾಗ ಬೇಜವಾಬ್ದಾರಿಯಾಗಿ ಅಧಿಕಾರಿಗಳು ನಡೆದುಕೊಳ್ಳುವುದು ರೈತರ ಕಷ್ಟಗಳಿಗೆ ಮೂಲ ಕಾರಣವಾಗಿದೆ. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದ ರೈತರು ಕೈಯಲ್ಲಿ ಜೀವ ಹಿಡಿದು ಬೇಸಾಯದಲ್ಲಿ ತೊಡಗ ಬೇಕಾದ ಸ್ಥಿತಿ ಉಂಟಾಗಿದೆ.
ವೇಮಗಲ್ ಹೋಬಳಿಯ ಹಲವು ಕಡೆ ರೈತರ ಜಮೀನುಗಳಲ್ಲಿ ಬಹುತೇಕ ಕಡೆ ವಿದ್ಯುತ್ ತಂತಿಗಳು ಜೋತು ಬಿದ್ದಿದ್ದು ಸ್ಥಳೀಯರಲ್ಲಿ ಪ್ರಾಣ ಭೀತಿ ಸೃಷ್ಟಿಸಿದೆ.
ಕೆಲವು ರೈತರ ಜಮೀನಿನ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು ರೈತರ ಗೋಳಾಟಕ್ಕೆ ಕಾರಣವಾಗಿದೆ. ರೈತರ ತಲೆಯ ಮಟ್ಟಕ್ಕೆ ನಿಲುಕುವ ತಂತಿಗಳು ಯಾವುದೇ ಸಮಯದಲ್ಲಿ ಪ್ರಾಣಕ್ಕೆ ಕುತ್ತು ತರಬಹುದು. ಜೀವ ಕೈಯಲ್ಲಿ ಹಿಡಿದು ಜಮೀನುಗಳಿಗೆ ತೆರಳಬೇಕಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಚಂದಿಗಾನಹಳ್ಳಿಯ ಮುರಳಿ ರವರ ಜಮೀನಿನಲ್ಲಿ ಭೂಮಿಯಿಂದ ಕೇವಲ 6 ಅಡಿ ಅಂತರದಲ್ಲಿ ವಿದ್ಯುತ್ ತಂತಿ ಜೋತು ಬಿದ್ದಿದ್ದರೆ ಮತ್ತೊಂದು ಪಕ್ಕದ ಜಮೀನಿನಲ್ಲಿ ಕಂಬದಿಂದ ವಿದ್ಯುತ್ ತಂತಿ ಸಂಪೂರ್ಣವಾಗಿ ನೆಲಕಚ್ಚಿದೆ.
ಈ ವಿದ್ಯುತ್ ತಂತಿ ಬಿದ್ದು ಸುಮಾರು 20 ದಿನಗಳು ಕಳೆದಿದ್ದು, ಆನ್ಲೈನ್ ಮತ್ತು ಮೌಖಿಕವಾಗಿ ದೂರು ನೀಡಿದ್ದರೂ ದುರಸ್ತಿಗಾಗಿ ಇಂದು ಅಥವಾ ನಾಳೆ ಎಂದು ಸಬೂಬು ಹೇಳಿಕೊಂಡು ಬರುತ್ತಿರುವುದು ಸರಿ ಅಷ್ಟೇ ಆದರೆ ಈವರೆಗೂ ಈ ದುರಸ್ತಿ ಕಾರ್ಯ ಕೈಗೊಳ್ಳದಿರುವುದು ಬೇಸರದ ಸಂಗತಿ ಎಂದು ರೈತ ಮುರಳಿ ತಮ್ಮ ನೋವನ್ನು ವ್ಯಕ್ತಪಡಿಸಿದರು.
ಇದೇ ವಿದ್ಯುತ್ ತಂತಿ ಬಿದ್ದ ನಂತರ ವಿದ್ಯುತ್ ತಂತಿ ಸ್ಪರ್ಶಿಸಿ ಮೂಖ ಪ್ರಾಣಿಯಾದ ನಾಯಿ ಮೃತಪಟ್ಟಿದ್ದು, ಜಮೀನಿನಲ್ಲಿ ವ್ಯವಸಾಯ ಮಾಡುವ ಯಾರಿಗಾದರೂ ವಿದ್ಯುತ್ಪರ್ಷ ಉಂಟಾಗಿದ್ದರೆ ಇದಕ್ಕೆ ಯಾರು ಹೊಣೆ? ಎಂದು ರೈತರು ಪ್ರಶ್ನಿಸಿದ್ದಾರೆ.
ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ