PLACE YOUR AD HERE AT LOWEST PRICE
ಎನ್ಟಿಆರ್ ಭಾರತ ಚಿತ್ರರಂಗದಲ್ಲಿಯೇ ಅತಿ ಹೆಚ್ಚು ಪೌರಾಣಿಕ, ಐತಿಹಾಸಿಕ,ದೇವರ ಪಾತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಹೃದಯದಲ್ಲಿ ನಟದೈವವಾಗಿ ಶಾಶ್ವತ ಸ್ಥಾನ ಸಂಪಾದಿಸಿಕೊಂಡಿದ್ದಾರೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.
ಕೋಲಾರ ನಗರದ ಗಂಗಮ್ಮನಪಾಳ್ಯ ವೃತ್ತದಲ್ಲಿ ಬುಧವಾರ ವಿಶ್ವವಿಖ್ಯಾತ ನಟ ಎನ್ಟಿಆರ್ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸರಕಾರಿ ಅಧಿಕಾರಿಯಾಗಿದ್ದ ಎನ್ಟಿಆರ್ ಕಲೆಯತ್ತ ಆಕರ್ಷಿತರಾಗಿ ಅಭಿನಯದ ಆಲದ ಮರವಾಗಿ ರೂಪುಗೊಂಡರು, ನಟರಾಗಿ, ನಿರ್ದೇಶಕರಾಗಿ ಅವರು ಕೊಡುಗೆಯಾಗಿ ನೀಡಿದ ಚಿತ್ರಗಳು ಭಾರತೀಯ ಚಿತ್ರರಂಗದಲ್ಲಿ ಎಂದೆಂದಿಗೂ ಮಿನುಗುವ ನಕ್ಷತ್ರಗಳಾಗಿವೆ ಎಂದರು.
ಕಾಂಗ್ರೆಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಕೆ.ಜಯದೇವ್ ಮಾತನಾಡಿ, ಎನ್ಟಿಆರ್ ಅಭಿನಯದ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಒತ್ತಿದ ನಂತರ ರಾಜಕೀಯ ಕ್ಷೇತ್ರ ಪ್ರವೇಶಿಸಿ ಸಂಚಲನವನ್ನುಂಟು ಮಾಡಿದರು. ಮುಖ್ಯಮಂತ್ರಿಯಾಗಿ ಅವರು ಜನರಿಗೆ ನೀಡಿದ ಕೊಡುಗೆಗಳು ಉತ್ತಮ ಆಡಳಿತ ಇಂದಿಗೂ ಆದರ್ಶವಾಗಿದೆ, ನಾಯಕ ನಟರಾಗಿ, ಜನಾನುರಾಗಿ ರಾಜಕಾರಣಿಯಾಗಿ ಎನ್ಟಿಆರ್ ಸ್ಮರಣೀಯ ಸೇವೆ ಸಲ್ಲಿಸಿದ್ದಾರೆಂದು ಬಣ್ಣಿಸಿದರು.
ಎನ್ಬಿಕೆ ಹೆಲ್ಪಿಂಗ್ ಹ್ಯಾಂಡ್ಸ್ ಅಧ್ಯಕ್ಷ ರಮೇಶ್ಯಾದವ್ ಮಾತನಾಡಿ, ಎನ್ಟಿಆರ್ ಈ ಕಾಲದ ಅನೇಕ ನಟ ಮತ್ತು ನಿರ್ದೇಶಕರಿಗೆ ಸ್ಪೂರ್ತಿಯಾಗಿದ್ದಾರೆ, ಅನೇಕ ಮಂದಿ ನಟರು ಅವರ ಹಾದಿಯಲ್ಲಿ ಚಿತ್ರರಂಗ ಪ್ರವೇಶಿಸಿ ಹೆಸರು ಕೀರ್ತಿಸಂಪಾದಿಸಿಕೊಂಡಿದ್ದಾರೆ. ಈಗ ಎನ್ಟಿಆರ್ ಕುಟುಂಬದ ಅನೇಕ ನಟ ನಕ್ಷತ್ರಗಳು ತೆರೆಯ ಮೇಲೆಮಿಂಚುತ್ತಿದ್ದು, ನಂದಮೂರಿ ಬಾಲಕೃಷ್ಣ ತಮ್ಮ ತಂದೆ ಎನ್ಟಿಆರ್ ನಟನಾ ಪರಂಪರೆಯನ್ನು ಭರ್ಜರಿಯಾಗಿ ಮುಂದುವರೆಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆಂದರು.
ಎನ್ಟಿಆರ್ ಭಾವಚಿತ್ರಕ್ಕೆ ಪುಷ್ಪಾಭಿಷೇಕ ಮಾಡಿ ಎನ್ಟಿಆರ್ಸ್ಮರಣೆಯಲ್ಲಿ ಸಾರ್ವಜನಿಕರಿಗೆ ಅನ್ನದಾನ ಏರ್ಪಡಿಸಲಾಗಿತ್ತು.
ಗಂಗಮ್ಮನಪಾಳ್ಯ ಮಂಜುನಾಥ್ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶಬರೀಶ್ ಯಾದವ್, ಮುನಿವೆಂಕಟ್, ಕಿಲಾರಿಪೇಟೆ ಮಣಿ, ಡೆಕೋರೇಷನ್ ಶಂಕರ್, ದೇವುಡು ರವಿ, ಗಂಗಮ್ಮನಪಾಳ್ಯ ಮುರಳಿ, ಪ್ರಸಾದ್, ದೇವರಾಜ್ ಮತ್ತಿತರರು ಭಾಗವಹಿಸಿದ್ದರು.