PLACE YOUR AD HERE AT LOWEST PRICE
ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು ಎಂಬುದಕ್ಕೆ
ಕೊತ್ತೂರು ಮಂಜುನಾಥ್ ವಿರುದ್ಧ ಬಂದಿರುವ ತೀರ್ಪು ಸಾಕ್ಷಿ
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಜಾತಿ ಪ್ರಮಾಣ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೋಲಾರ ಜಿಲ್ಲಾ ಶಾಖೆ ಸ್ವಾಗತಿಸುತ್ತದೆ ಎಂದು ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಹೇಳಿದರು.
ಕೋಲಾರ ನಗರದ ನಚಿಕೇತ ನಿಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ನ್ಯಾಯಾಂಗದ ತೀರ್ಪನ್ನು ಹಣ ಕೊಟ್ಟು ಕೊಳ್ಳಲಾಗದು ಎಂಬುದಕ್ಕೆ ಕೊತ್ತೂರು ವಿರುದ್ಧ ಬಂದಿರುವ ಈ ನ್ಯಾಯಾಲಯದ ತೀರ್ಪೇ ಸಾಕ್ಷಿ ಎಂದರು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಮುಳಬಾಗಿಲು ಪೋಲಿಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿರುವುದನ್ನು ರಾಜ್ಯ ಹೈ ಕೋರ್ಟ್ ಮುಖಾಂತರ ತಡೆಯಾಜ್ಞೆ ತಂದಿರುವುದನ್ನ ಈ ಕೂಡಲೇ ರಾಜ್ಯ ಸರ್ಕಾರ ಮಧ್ಯೆ ಪ್ರವೇಶಿಸಿ ಸರ್ಕಾರಿ ಅಭಿಯೋಜಕರ ಮುಖಾಂತರ ತಡೆಯಾಜ್ಞೆ ತೆರವುಗೊಳಿಸಿ ಭಾರತ ಚುನಾವಣಾ ಆಯೋಗಕ್ಕೆ ಕೊತ್ತೂರು ಮಂಜುನಾಥ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಚುನಾವಣಾ ಆಯೋಗ ನಿರ್ಬಂಧ ಹೇರಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಸಂಚಾಲಕ ನಾಗನಾಳ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ಕೊತ್ತೂರು ಮಂಜುನಾಥರಂಥ ರಾಜಕಾರಣಿಗಳು ದಲಿತರ ಜಾತಿ ಪ್ರಮಾಣ ಪತ್ರವನ್ನು ಪಡೆದು ರಾಜಕಾರಣದಲ್ಲಿ ಮುಂದುವರೆಯುತ್ತಿದ್ದಾರೆ ಅಂಥವರಿಗೆ ಇದೇ ರೀತಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ ಅವರು ಕೋಲಾರ ಜಿಲ್ಲೆಯ ಕೆಲ ರಾಜಕಾರಣಿಗಳು ಮತ್ತು ದಲಿತರ ಪರ ಕೆಲ ಮುಖಂಡರು ಇಂತಹ ಸುಳ್ಳು ಜಾತಿ ಪ್ರಮಾಣ ಪತ್ರಗಳನ್ನು ಪಡೆಯುವ ಜೊತೆಗೆ ಅವರ ವೇದಿಕೆಗಳಲ್ಲಿ ಭಾಗವಹಿಸುವುದು ದುರಂತವೇ ಸರಿ ಎಂದು ಛೇಡಿಸಿದರು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ರೋಜಾರ್ಪಲ್ಲಿ ಡಾ.ವೆಂಕಟರವಣಪ್ಪ, ಕೆ.ಜಿ.ಎಫ್.ಸಂಪತ್ಕುಮಾರ್, ಶ್ರೀಧರ, ಬಂಗಾರಪೇಟೆ ದೇಶಿಹಳ್ಳಿ ಶ್ರೀನಿ, ಕೋಲಾರದ ಯಲ್ಲಪ್ಪ, ಸ್ವಾಮಿದಾಸ್, ಸಿ.ಈರಪ್ಪ ಮುಂತಾದವರು ಹಾಜರಿದ್ದರು.