PLACE YOUR AD HERE AT LOWEST PRICE
ಮಾಲೂರು:ತಾಲ್ಲೂಕಿನಾದ್ಯಂತ ಸಮರ್ಪಕವಾಗಿ ವಿದ್ಯುತ್ ನೀಡದಿರುವ ಬಗ್ಗೆ ಇಂದು ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಹಸಿರು ಸೇನೆ ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಅವರ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು.
ಮಾಲೂರು ಪಟ್ಟಣದ ಬೆಸ್ಕಾಂ ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ಮಾತನಾಡಿದ ಟಿ.ಎನ್.ರಾಮೇಗೌಡ, ಮಾಲೂರು ತಾಲ್ಲೂಕಿನಾದ್ಯಂತ ರೈತರ ಪಂಪ್ಸೆಟ್ಗಳಿಗೆ ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ. ಇದರಿಂದ ರೈತರ ಬೆಳೆಗಳು ನಾಶವಾಗುತ್ತಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗುತ್ತಿದೆ.
ಬೆಸ್ಕಾಂ ಗುತ್ತಿಗೆದಾರರು ರೈತರ ಬಳಿ ೫೦ ರಿಂದ ೧ಲಕ್ಷ ರೂಗಳನ್ನು ತೆಗೆದುಕೊಂಡು ರೈತರಿಗೆ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸದೇ ತೊಂದರೆ ನೀಡುತ್ತಿದ್ದಾರೆ. ರೈತರು ಇದನ್ನು ನಂಬಿಕೊಂಡು ಹಾಕಿರುವ ಬೆಳೆಗಳು ನಾಶವಾಗುತ್ತಿದ್ದು, ಈ ನಷ್ಟಕ್ಕೆ ನೀವು ಜವಾಬ್ದಾರಿಗಳಾಗುತ್ತೀರಾ ಎಂದು ಬೆಸ್ಕಾಂ ಅಧಿಕಾರಿಗಳನ್ನು ಪ್ರಶ್ನಿಸಿದರು.
ರೈತರ ಬೆಳೆಗಳಿಗೆ ಕೇವಲ 7ಗಂಟೆ ವಿದ್ಯುತ್ ನೀಡುತ್ತಿದ್ದು, ಇದರಲ್ಲೂ ಸಹ ಕಣ್ಣಾ ಮುಚ್ಚಾಲೆ ಆಡುತ್ತಿದ್ದಾರೆ. ಲೈನ್ಮೆನ್ಗಳಿಗೆ ನಮ್ಮ ತೊಂದರೆ ತಿಳಿಸಿದರೂ ಸರಿಯಾದ ಸಮಯಕ್ಕೆ ಬಾರದೆ ಕಾಲಹರಣ ಮಾಡಿ, ರೈತರಿಗೆ ತೊಂದರೆ ನೀಡುತ್ತಿದ್ದಾರೆ. ರೈತರಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡಬೇಕು ಎಂದು ತಾಕೀತು ಮಾಡಿದರು.
ನಷ್ಟವಾಗುತ್ತಿರುವ ರೈತರ ಬೆಳೆಗಳಿಗೆ ಸರ್ಕಾರ ಪರಿಹಾರ ಒದಗಿಸಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಬೆಸ್ಕಾಂ ಇಲಾಖೆ ವಿರುದ್ದ ತೀವ್ರವಾದ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಮಾಲೂರು ತಾಲ್ಲೂಕು ಅಧ್ಯಕ್ಷ ವಿನೋದ್, ಗೌರವಾಧ್ಯಕ್ಷ ಸಂಪಂಗಿರಾಮೇಗೌಡ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ್, ಹಾಗೂ ಮೊದಲಾದವರಿದ್ದರು.