PLACE YOUR AD HERE AT LOWEST PRICE
ಕೆಜಿಎಫ್:ನಗರದ ಪ್ರಸಿದ್ಧ ಲಲಿತಾಂಭಿಕಾ ಸಮೇತ ರಾಮಲಿಂಗೇಶ್ವರಸ್ವಾಮಿಯ 60ನೇ ವರ್ಷದ ಬ್ರಹ್ಮರಥೋತ್ಸವವು ವಿಜೃಂಭಣೆಯಿಂದ ಜರುಗಿತು.
ಇದೇ ಬುಧವಾರದಿಂದ ಅಂಕುರಾರ್ಪಣ, ನಂದಿ ವಾಹನೋತ್ಸವದಿಂದ ಪ್ರಾರಂಭವಾಗಿರುವ ರಥೋತ್ಸವ ಕಾರ್ಯಗಳು, ಸಿಂಹವಾಹನೋತ್ಸವ, ಕಲ್ಯಾಣೋತ್ಸವ, ಗಜವಾಹನೋತ್ಸವ, ರುದ್ರಾಭಿಷೇಕಗಳನ್ನು ಮುಗಿಸಿ ಇಂದು ರಥೋತ್ಸವ ಸಮಿತಿ ವತಿಯಿಂದ ಅಪಾರ ಜನಸ್ತೋಮದ ಮಧ್ಯೆ ಜರುಗಿತು.
ಬೆಳಗ್ಗೆ 9.30 ಗಂಟೆಗೆ ಪ್ರಾರಂಭವಾದ ಬ್ರಹ್ಮರಥೋತ್ಸವದಲ್ಲಿ ನೆರೆಯ ಆಂಧ್ರಪ್ರದೇಶ ಮತ್ತು ತಮಿಳುನಾಡು ಸೇರಿದಂತೆ ಸಾವಿರಾರು ಭಕ್ತರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಹರಕೆಗಳನ್ನು ಹೊತ್ತಿದ್ದ ಭಕ್ತರು ಬಾಳೆಹಣ್ಣು, ದವನ, ಉಪ್ಪು, ಮೆಣಸು ಕಾಳುಗಳನ್ನು ರಥದ ಶಿಖರಕ್ಕೆ ಎಸೆಯುವ ಮೂಲಕ ಹರಕೆಗಳನ್ನು ತೀರಿಸಿದರು.
ರಥೋತ್ಸವ ಸಮಿತಿ ಅಧ್ಯಕ್ಷ ನಾರಾಯಣಮೂರ್ತಿ ಮಾತನಾಡಿ, ಇದೇ ತಿಂಗಳ 25ರ ಶನಿವಾರದವರೆಗೆ ಪಾರ್ವಾಟೋತ್ಸವ, ಚಂದ್ರಪ್ರಭ ಉತ್ಸವ, ವಸಂತೋತ್ಸವ, ಪುಷ್ಟಯಾನೋತ್ಸವ, ಹಂಸವಾಹನೋತ್ಸವ, ಪುಷ್ಪಪಲ್ಲಕ್ಕಿ ಉತ್ಸವ ಮತ್ತು ಶಯನೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾಧಿಗಳು ತನು, ಮನ, ಧನಗಳನ್ನು ಅರ್ಪಿಸುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಶಿವರಾತ್ರಿ ಪ್ರಯುಕ್ತ ಶನಿವಾರ ರಾತ್ರಿಯಿಡೀ ರುದ್ರಾಭಿಷೇಕ ಪೂಜಾ ಕಾರ್ಯಗಳು ನಡೆದವು. ಭಾನುವಾರ ಸನಾತನ ಧರ್ಮಸಭಾದಲ್ಲಿ ಅನ್ನಸಂತರ್ಪಣೆ ನಡೆಯಿತು. ಗಣೇಶ್ಪುರಂ ಗಂಗಮ್ಮ ದೇವಸ್ಥಾನದ ಅರ್ಚಕ ಗುರುಮೂರ್ತಿ ದೀಕ್ಷಿತ್, ಶಂಕರಮಠದ ಕೃಷ್ಣಮೂರ್ತಿ, ರಾಮಕೃಷ್ಣ ಮೊದಲಾದವರು ಭಾಗವಹಿಸಿದ್ದರು.