PLACE YOUR AD HERE AT LOWEST PRICE
ತಾಲೂಕಿನ ಮದ್ಧೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕದರೀಪುರ ಗ್ರಾಮದಲ್ಲಿ ಅನಾದಿಕಾಲದಿಂದಲೂ ನೆಲೆಸಿರುವ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಾಗಿ ನಡೆಯಿತು. ಸಾವಿರಾರು ಮಂದಿ ಭಕ್ತಾದಿಗಳಿಗೆ ಅನ್ನದಾನ ವ್ಯವಸ್ಥೆಯನ್ನು ಸಮಾಜ ಸೇವಕ ಮುಕ್ಕಡ್ ವೆಂಕಟೇಶ್ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಭೇಟಿ ನೀಡಿದ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್ ದೇವರ ದರ್ಶನ ಪಡೆದು ಪುನೀತರಾದರು.
ಸಂದರ್ಭದಲ್ಲಿ ಮುಕ್ಕಡ್ ವೆಂಕಟೇಶ್ ಮಾತನಾಡಿ, ತಾವು ಕಳೆದ 20 ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತೊಡಗಿದ್ದು, ನನಗೆ ಲಕ್ಷ್ಮಿನರಸಿಂಹ ಸ್ವಾಮಿಯ ಅನುಗ್ರಹವಾಗಿದ್ದು, ನನ್ನ ಸಂಪಾದನೆಯ ಅರ್ಧ ಭಾಗವನ್ನು ಜನಸೇವೆಗೆ ಎಂದು ಮೀಸಲಾಗಿಟ್ಟಿದ್ದೇನೆ. ಈ ಸೇವಾ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ. ನನ್ನ ಅನಂತರ ಮಕ್ಕಳು ಈ ಸೇವಾ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುತ್ತಾರೆ. ತಾವು ಈಗ ಜೆಡಿಎಸ್ ಪಕ್ಷದ ಮುಖಂಡರಾಗಿದ್ದು, ಮುಂಬರುವ ಚುನಾವಣೆಯಲ್ಲಿ ವಿಧಾನಸಭಾ ಕ್ಷೇತ್ರದ ಜನತೆ ಸಿಎಂಆರ್ ಶ್ರೀನಾಥ್ ರವರನ್ನು ಖಂಡಿತ ಗೆಲ್ಲಿಸಿ ಕೊಡುತ್ತಾರೆ. ದೈವಾನುಗ್ರಹವೂ ಕೂಡ ಅದೇ ಆಗಿದೆ. ನಾವೆಲ್ಲ ಶಕ್ತಿ ಮೀರಿ ಕೆಲಸ ಮಾಡುವ ಮೂಲಕ ಉತ್ತಮ ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿಯನ್ನು ಕೋಲಾರದ ಶಾಸಕನನ್ನಾಗಿ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಸಿಎಂಆರ್ ಶ್ರೀನಾಥ್, ತಾವು ಕಳೆದ ಐದು ವರ್ಷಗಳಿಂದ ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಜನತೆ ನಮ್ಮ ಮೇಲೆ ಆಶೀರ್ವಾದ ಮಾಡಿ ಆ ದೇವರ ಕೃಪೆ ನಮಗಿದೆ ಎಂದು ಹೇಳಿದರಲ್ಲದೆ ಈ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನಗೆ ಆಶೀರ್ವಾದ ಮಾಡುತ್ತಾರೆ ಎಂದರು.
ಇದೇ ವೇಳೆ ಸಿಎಂಆರ್ ಶ್ರೀನಾಥ್ ಅಭಿಮಾನಿಗಳು ಬಾಳೆಹಣ್ಣಿನ ಮೇಲೆ ನೆಕ್ಸ್ಟ್ ಎಂಎಲ್ಎ ಸಿಎಂಆರ್ ಹಾಗೂ ನೆಕ್ಸ್ಟ್ ಸಿಎಂ ಹೆಚ್ ಡಿಕೆ ಎಂದು ಬರೆದು ರಥದ ಮೇಲೆ ಎಸೆದು ಮುಂಬರುವ ಚುನಾವಣೆಯಲ್ಲಿ ಕೋಲಾರ ಶಾಸಕರಾಗಿ ಸಿಎಂಆರ್ ಆರಿಸಿ ಬರಲಿ, ಮುಖ್ಯಮಂತ್ರಿ ಆಗಿ ಕುಮಾರಸ್ವಾಮಿ ಪೂರ್ಣಾವಧಿ ಸರ್ಕಾರ ರಚಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ, ಮುಕ್ಕಡ್ ವೆಂಕಟೇಶ್, ಕಾಂಗ್ರೆಸ್ ಮುಖಂಡ ಎ.ಶ್ರೀನಿವಾಸ್, ಡಿ.ವಿ.ಶ್ರೀನಿವಾಸ್, ಚೆನ್ನಕೇಶವ, ಕೆ.ಶ್ರೀನಿವಾಸಗೌಡ, ಬಾಬು, ಲಕ್ಷ್ಮೀ ನಾರಾಯಣ, ದೇವರಾಜ್, ನಾರಾಯಣಸ್ವಾಮಿ, ವೆಂಕಟೇಶ್, ಡಿ.ಕೆ.ಶ್ರೀನಿವಾಸ್, ನರಸಿಂಹಪ್ಪ ಭಾಗವಹಿಸಿದ್ದರು.