PLACE YOUR AD HERE AT LOWEST PRICE
ಸುಮಾರು ನಲವತ್ತು ವರ್ಷಗಳ ಅನುಭವ ಹೊಂದಿರುವವರು ಆರಂಭಿಸಿರುವ ವೆಲ್ ಕಮ್ ಕ್ರಾಪ್ ಸೈನ್ಸ್ ಕಂಪನಿಯಲ್ಲಿ ಬಿತ್ತನೆ ಬೀಜಗಳನ್ನು ಆಯಾ ಭಾಗಕ್ಕೆ ತಕ್ಕಂತೆ ಸಂಶೋಧನೆಗಳನ್ನು ನಡೆಸಿ ವಿತರಣೆ ಮಾಡಲಾಗುತ್ತಿದ್ದು, ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಂಪನಿಯ ಸಿಇಒರಾಜಶೇಖರ್ ಮನವಿ ಮಾಡಿದರು.
ತಾಲೂಕಿನ ಅರಿನಾಗನಹಳ್ಳಿಯ ರೈತ ನಾಗರಾಜ್ ಅವರ ತೋಟದಲ್ಲಿ ನಡೆದ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ, ರೈತರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿದರು. ನಮ್ಮದು ದೇಶೀಯ ತಳಿಗಳ ಕಂಪನಿಯಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳಂತೆಯೇ ಹೆಚ್ಚಿನ ತಂತ್ರಜ್ಞಾನ ಒಳಗೊಂಡಿದೆ. ತರಕಾರಿ ಬಿತ್ತನೆ ಬೀಜಗಳನ್ನು ಅನೇಕ ಬಾರಿ ಸಂಶೋಧನೆಗಳನ್ನು ನಡೆಸಿಯೇ ತಯಾರಿಸಲಾಗುತ್ತಿದೆ. ಕೋಲಾರ, ಬೆಂಗಳೂರು ಗ್ರಾಮಾಂತರ, ಆಂಧ್ರದ ಚಿತ್ತೂರು ಭಾಗ ಸೇರಿದಂತೆ ಆಯಾ ಭಾಗಗಳಿಗೆ ಅನುಕೂಲವಾಗುವಂತೆಯೇ ತಯಾರಿಸಲಾಗುವುದಾಗಿ ಹೇಳಿದ ಅವರು, ಬೇರೆ ಕಂಪನಿಗಳಿಗಿಂತಲೂ ಕಡಿಮೆ ಬೆಲೆ ನಮ್ಮಲ್ಲಿ ಎಂದರು.
ಕೋಲಾರದಲ್ಲಿ ಸಕ್ಸಸ್ ಆದರೆ ಎಲ್ಲಿ ಬೇಕಾದರೂ ಬೆಳೆಯಬಹುದಾಗಿದ್ದು, ಕೋಲಾರವು ಸಂಶೋಧನಾ ಜಾಗವಾಗಿದೆ. ಈ ಮೊದಲು ಬೆಳೆಗಳಿಗೆ ರೋಗ ಕಡಿಮೆ ಇತ್ತು. ಮನುಷ್ಯನಂತೆಯೇ ಬೆಳೆಗಳಿಗೂ ರೋಗಗಳು, ಹುಳಗಳ ಕಾಟ. ಕೊರೊನಾ ವೈರಸ್ಗೆ ಲಸಿಕೆ ಬಂದಂತೆಯೆ ಇವುಗಳಿಗೂ ಕಂಡು ಹಿಡಿಯಲಾಗುತ್ತಿದೆ. ಭಾರತದಲ್ಲಿ ಸಂಶೋಧನೆ ವೇಗವಾಗಿದ್ದು, ಮುಂದಿನ ದಿನಗಳಲ್ಲಿ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಾದೇಶಿಕ ವ್ಯವಸ್ಥಾಪಕ ಕಿಶೋರ್ ರೆಡ್ಡಿ ಮಾತನಾಡಿ ಆಂದ್ರದ ನಮ್ಮ ಗುಂಟೂರು ಭಾಗದ ರೈತರಿಗೂ ಇಲ್ಲಿನ ರೈತರಿಗೂ ಅಜಗಜಾಂತರ ವ್ಯತ್ಯಾಸ. ಸಾಕಷ್ಟು ಮುಂದೆ ಇದ್ದೀರಿ. ಹೂಕೋಸು ಡಬ್ಲ್ಯೂಎಸ್ 936 ಉತ್ತಮ ತಳಿಯಾಗಿದ್ದು, ಎಲ್ಲೆಡೆ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ ಬಳಸಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕಂಪನಿಯ ಪ್ರತಿನಿಧಿ ಸತೀಶ್, ಆಕಾಶ್, ತೋಟದ ಮಾಲೀಕ ನಾಗರಾಜ್, ನರ್ಸರಿ ಮಾಲೀಕ ಪ್ರವೀಣ್, ರೈತರಾದ ಸುಬ್ಬಣ್ಣ, ಮಧುಸೂದನ್, ಶ್ರೀನಿವಾಸ್, ಶಂಕರೇಗೌಡ ಮತ್ತಿತರರು ಉಪಸ್ಥಿತರಿದ್ದರು.