PLACE YOUR AD HERE AT LOWEST PRICE
ಬಂಗಾರಪೇಟೆ:ದಲಿತರು,ಹಿಂದುಳಿದ ವರ್ಗಗಳು ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಸಾಮಾಜಿಕ ಹಾಗೂ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡು, ಸಂಘಟಕರಾಗಿ ಜಾಗೃತರಾಗಬೇಕು ಎಂಬ ಆಶಯವನ್ನು ಕಾನ್ಷಿರಾಮ್ ಹೊಂದಿದ್ದರು ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಉಪಾಧ್ಯಕ್ಷ ರಮಣ್ಕುಮಾರ್ ಹೇಳಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮುಂಭಾಗ ಬಿ.ಎಸ್.ಪಿ ಸಂಸ್ಥಾಪಕ ಕಾನ್ಷಿರಾಮ್ ರವರ 89ನೇ ಹುಟ್ಟುಹಬ್ಬ ಆಚರಿಸಿ ಮಾತನಾಡಿದ ಅವರು, ಕಾನ್ಷಿರಾಮ್ರವರು ಪಕ್ಷವನ್ನು ಸಂಘಟಿಸಲು ಪಟ್ಟಂತಹ ಶ್ರಮ, ರಾಜಕೀಯ ಜಾಗೃತಿ ಇಂದಿಗೂ ನಮ್ಮೆಲ್ಲರಿಗೂ ದಾರಿದೀಪವಾಗಿದೆ. ಎಂದು ತಿಳಿಸಿದರು.
ಕಾರ್ಯಕರ್ತರು ಇತಿಹಾಸ ಮತ್ತು ನಾಯಕರ ಕೊಡುಗೆಗಳನ್ನು ತಿಳಿದುಕೊಳ್ಳಬೇಕು. ಕಾನ್ಷಿರಾಮ್ ಅವರು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶಕ್ತಿಯಾಗಿದ್ದರು.
ನಾಲ್ಕು ಸಾವಿರ ಕಿಲೋ ಮೀಟರ್ ದೂರ ಸೈಕಲ್ನಲ್ಲಿ ತೆರಳಿ ಗ್ರಾಮ ಗ್ರಾಮಗಳಲ್ಲಿ ಮತದಾನದ ಮಹತ್ವದ ಅರಿವು ಮೂಡಿಸಿದ್ದರು. ಹಣಕ್ಕೆ ತಮ್ಮ ಮತವನ್ನು ಮಾರಿಕೊಳ್ಳಬೇಡಿ ಎನ್ನುವ ಮೂಲಕ ಜಾಗೃತಿ ಮೂಡಿಸಿದ್ದರು.
ಅಂಬೇಡ್ಕರ್ರವರು ನಿಮಗೆ ಮತದಾನದ ಹಕ್ಕು ನೀಡಿದ್ದಾರೆ. ಮತದಾನದ ಹಕ್ಕು ಪವಿತ್ರವಾಗಿದೆ. ಮತದಾನದಿಂದ ಇಡೀ ಸಮಾಜದ ಬದಲಾವಣೆ ಸಾಧ್ಯ ಎಂಬುದು ಅವರ ವಾದವಾಗಿತ್ತು ಎಂದು ನುಡಿದರು.
ಕಾನ್ಷಿರಾಮ್ ರವರು ನಮಗೆಲ್ಲಾ ಆದರ್ಶ ಏಕೆಂದರೆ, ವಿಜ್ಞಾನಿಯಾಗಿದ್ದ ಅವರು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಅಂಬೇಡ್ಕರ್ ಜಯಂತಿ ಮಾಡಲು ಅವಕಾಶ ಕೊಟ್ಟಿಲ್ಲ ಎಂಬ ಒಂದೇ ಕಾರಣಕ್ಕೆ ತಮ್ಮ ಅಧಿಕಾರ ಹುದ್ದೆಗೆ ರಾಜೀನಾಮೆ ನೀಡಿದ್ದರು.
ನಂತರ ಅಂಬೇಡ್ಕರ್ ರೂಪಿಸಿದ ಕ್ರಾಂತಿಕಾರಿ ಚಿಂತನೆಯನ್ನು ಮೂರು ದಶಕಗಳಲ್ಲಿ ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರು ಅಧಿಕಾರ ಪಡೆವ ರಾಜಕೀಯ ಸಾಧನವನ್ನಾಗಿ ವಿಸ್ತರಿಸಿದ ರೀತಿ ಅದ್ಭುತವಾದುದು.
ವಿಜ್ಞಾನಿಯಾಗಿದ್ದ ಕಾನ್ಷಿರಾಮ್ ವ್ಯವಸ್ಥಿತವಾಗಿ ಚಿಂತಿಸಿ, ಹಂತಹಂತವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ ಬೆಳಿಸಿದರು. ಸೈಕಲ್ ಮೇಲೆ ಊರೂರು ಸುತ್ತುತ್ತಿದ್ದ ಕಾನ್ಷಿರಾಮ್, ಕಾರ್ಯಕರ್ತರ ಮನೆಯಲ್ಲಿ ಉಂಡು ಅಲ್ಲೇ ಮಲಗುತ್ತಿದ್ದರು.
ಈ ಸಂದರ್ಭದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಆನಂದ್, ಮುಖಂಡರುಗಳಾದ ಕುಪ್ಪನಹಳ್ಳಿ ಆನಂದ್, ಚಿನ್ನಕೋಟೆ ಪಾರ್ವತಮ್ಮ, ಸಿದ್ದನಹಳ್ಳಿ ವೆಂಕಟರಾಮ್, ಕೀಲುಕೊಪ್ಪ ವಿನೋದ, ಪುತ್ರಸೊಣ್ಣೇನಹಳ್ಳಿ ಚಲಪತಿ, ಹುಣಸನಹಳ್ಳಿ ಪ್ರಸಾದ್, ದ್ರಾಕ್ಷಾಯಿಣಿ, ನಾಯಕರಹಳ್ಳಿ ವೆಂಕಟೇಶಪ್ಪ, ಹೂವರಸನಹಳ್ಳಿ ಅಬ್ಬಯ್ಯಪ್ಪ, ಅನಿಗಾನಹಳ್ಳಿ ಜಿ.ಟಿ.ಎಸ್ ನಾರಾಯಣ ಸೇರಿದಂತೆ ಪಕ್ಷದ ಇತರೆ ಕಾರ್ಯಕರ್ತರು ಇದ್ದರು.