PLACE YOUR AD HERE AT LOWEST PRICE
ಕೋಲಾರ ಚಿನ್ನದ ಗಣಿ ಪ್ರದೇಶ(ಕೆಜಿಎಫ್)ಕ್ಕೆ ಕೇವಲ 4 ಕಿ.ಮೀ.ದೂರದಲ್ಲಿ ಗೌಡ ಗಿಡ್ಡನಹಳ್ಳಿ ಎಂಬ ಕುಗ್ರಾಮದಲ್ಲಿ ಭಗ್ನಗೊಂಡಿರುವ ದಂಡು ಮೇಸ್ತ್ರಿ ಕುಟ್ಟಪ್ಪನ ಸುವರ್ಣಮಹಲ್ ನ್ನು ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ಧೇಶಕ ಚೆನ್ನಬಸಪ್ಪ ವೀಕ್ಷಿಸಿ ಈ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು.
ಈ ಗ್ರಾಮದಲ್ಲಿ ಬಹುತೇಕ ದಲಿತರು ವಾಸಿಸುತ್ತಿದ್ದು, ಇಲ್ಲೊಂದು ಅದ್ಭುತ ಬಂಗಲೆ ಇದ್ದ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಅದು ನಿರ್ಮಾಣಗೊಂಡಿರುವುದು ಒಂದು ಶತಮಾನದ ಹಿಂದೆ. ಅದಕ್ಕೆ ಬರೋಬ್ಬರಿ 113 ವರ್ಷಗಳ ಇತಿಹಾಸವಿದ್ದು ಈಗದು ಭಾಗಶಹ ಕುಸಿದಿದೆ.
ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಈ ಬಂಗಲೆಗೆ ಭೇಟಿ ನೀಡಿ ದಲಿತ ಮೇಸ್ತ್ರಿಯ ಇತಿಹಾಸ ದೇಶಕ್ಕೆ ತಿಳಿಯಬೇಕು ಮತ್ತು ಈ ಬಂಗಲೆ ಉಳಿಯಬೇಕು ಎಂಬ ಉದ್ದೇಶದಿಂದ ಜಿ್ಲ್ಲಾ ಸಮಾಜ ಕಲ್ಯಾಣ ಇಲಾಖೆಗೆ ಮನವಿ ಮಾಡಿದ ಮೇರೆಗೆ ಅಧಿಕಾರಿ ಭೇಟಿ ನೀಡಿದ್ದರು.
ಈ ವೇಳೆ ಸಮಾಜಕಲ್ಯಾಣ ಇಲಾಖೆಯ ಜಂಟಿ ನಿರ್ಧೇಶಕ ಚೆನ್ನಬಸಪ್ಪ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೇ ದಲಿತನೊಬ್ಬ ಗುತ್ತಿಗೆದಾರನಾಗಿ, ಬ್ರಿಟೀಷರ ಬಳಿ ಸಂಪಾದಿಸಿ ಭವ್ಯವಾದ ಬಂಗಲೆ ನಿರ್ಮಿಸಿದ್ದಾನೆ. ಇದು ಅತ್ಯಂತ ಕೌತಕದ ಮತ್ತು ಅಚ್ಚರಿಯ ವಿಷಯವಾಗಿದೆ.
ಇಲ್ಲಿಗೆ ಬಂದು ದಂಡು ಮೇಸ್ತ್ರಿ ಕುಟ್ಟಪ್ಪನ ಕುಂಟುಂಬದವರನ್ನು ಮಾತನಾಡಿಸಿದಾಗ ಕುಟ್ಟಪ್ಪ ಗುತ್ತಿಗೆದಾರನಾಡಿ ಚಿನ್ನದಗಣಿಯೊಳಗೆ ಕೆಲಸಮಾಡಲು ತಮಿಳುನಾಡು ಮತ್ತು ಬೇರೆ ಬೇರೆ ಕಡೆಯಿಂದ ಜನರನ್ನು ಸರಬರಾಜು ಮಾಡುತ್ತಿದ್ದ.
ಬ್ರಿಟೀಷರಿಂದ ಸಂಪಾದಿಸಿದ ಹಣದಲ್ಲಿ ಈ ಭವ್ಯ ಬಂಗಲೆ ಕಟ್ಟಿಸಿದ್ದಾನೆ ಎಂದು ತಿಳಿಸಿದರು. ಕುಟ್ಟಪ್ಪನ ಬಗ್ಗೆ ಮತ್ತು ಅತ್ಯಂತ ಸುಂದರವಾದ ಮತ್ತು ಬ್ರಿಟೀಷರ ಬಂಗಲೆಗಳಿಗೆ ಸರಿಸಾಟಿಯಾದ ಈ ಭವ್ಯ ಬಂಗಲೆಯ ಸ್ಥಿತಿಗತಿಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡುತ್ತೇನೆ ಎಂದರು.
ಈ ಬಂಗಲೆಯ ಸ್ಥಿತಿಯ ಬಗ್ಗೆ ನಮ್ಮಸುದ್ದಿ.ನೆಟ್ ನಲ್ಲಿ 13-06-2023ರಂದು ಸುದ್ದಿ ಪ್ರಕಟವಾಗಿತ್ತು. ಈ ಸಂದರ್ಭದಲ್ಲಿ ಕೆಜಿಎಫ್ ತಾಲ್ಲೂಕು ಸಹಾಯಕ ನಿರ್ಧೇಶಕಿ ಅಂಜಲಿದೇವಿ ಇದ್ದರು.