PLACE YOUR AD HERE AT LOWEST PRICE
ರಸ್ತೆ ಅಭಿವೃದ್ಧಿ ನೆಪದಲ್ಲಿ ಗುತ್ತಿಗೆದಾರರು ಸರಕಾರಿ ಜಾಗದಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿ ನಿರ್ಮಾಣ ಮಾಡಿದ್ದ ಬಸ್ ತಂಗುದಾಣ ಮತ್ತು ಗ್ರಂಥಾಲಯ ಕಟ್ಟಡವನ್ನು ನೆಲಸಮ ಮಾಡಿರುವ ಘಟನೆ ಕೋಲಾರ ತಾಲೂಕಿನ ಅರಹಳ್ಳಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ಜರುಗಿದ್ದು, ಗುತ್ತಿಗೆದಾರರ ದೌರ್ಜನ್ಯದ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಅರಹಳ್ಳಿ ಗೇಟ್ನಿಂದ ಕೋಲಾರ ಚಿಂತಾಮಣಿ ರಸ್ತೆಯ ಪವರ್ಗ್ರಿಡ್ವರೆಗಿನ ರಸ್ತೆ ಅಭಿವೃದ್ಧಿಗೆ ಶಾಸಕರ ನಿದಿಯಡಿ ಕಾಮಗಾರಿ ಮಂಜೂರಾಗಿದೆ.
3ಈ ರಸ್ತೆಯ ಅಗಲೀಕರಣ ಮತ್ತು ಅಭಿವೃದ್ಧಿಗೆ ಗುತ್ತಿಗೆ ಪಡೆದಿರುವವರು ಬುಧವಾರ ಏಕಾಏಕಿ ಜೆಸಿಬಿ ಯಂತ್ರವನ್ನು ತಂದು ಸುಮಾರು ೧೫ ಲಕ್ಷ ರೂಪಾಯಿ ನಷ್ಟವನ್ನುಂಟು ಮಾಡಿದ್ದಾರೆ.
ಸರಕಾರಿ ಜಾಗದಲ್ಲಿ ಸರಕಾರದ ಸುಮಾರು ೧೫ ಲಕ್ಷ ಅನುದಾನ ಬಳಸಿ ನಿರ್ಮಾಣ ಮಾಡಿದ್ದ ಬಸ್ ತಂಗುದಾಣ ಹಾಗೂ ಗ್ರಂಥಾಲಯ ಸಾಕಷ್ಟು ಸುಸ್ಥಿತಿಯಲ್ಲಿತ್ತು. ಆದರೂ, ರಸ್ತೆ ಅಗಲೀಕರಣದಲ್ಲಿ ಖಾಸಗಿ ಹಾಗೂ ರಾಜಕೀಯವಾಗಿ ಪ್ರಭಾವಿಗಳಾಗಿರುವ ಗ್ರಾಮದ ಕೆಲವು ಮುಖಂಡರ ಜಮೀನುಗಳನ್ನು ಉಳಿಸುವ ಸಲುವಾಗಿ ಸರಕಾರದ ಆಸ್ತಿಯನ್ನು ಕೆಡವಿ ನಷ್ಟವನ್ನುಂಟು ಮಾಡಲಾಗಿದೆಯೆಂದು ಗ್ರಾಮಸ್ಥರು ದೂರುತ್ತಿದ್ದಾರೆ.
ಗ್ರಾಮದ ಮುಖಂಡ ಅಶ್ವತ್ಥಪ್ಪ, ನಾಚೇಗೌಡ, ಡೇರಿ ಸೀನಪ್ಪ ಮತ್ತು ವಿಎಲ್ಎನ್ ನಾಗರಾಜ್ ಖುದ್ದು ತಾವೇ ಜೆಸಿಬಿ ಯಂತ್ರವನ್ನು ತರಿಸಿ ಮುಂದೆ ನಿಂತು ಸರಕಾರಿ ಕಟ್ಟಡಗಳನ್ನು ಗ್ರಾಮಸ್ಥರ ವಿರೋಧದ ನಡುವೆ ಕೆಡವಿ ಹಾಕಿದ್ದಾರೆ. ಜಿಪಂ ಕಚೇರಿಗೆ ಒಂದೆರೆಡು ಕಿಮೀ ಹತ್ತಿರವಿರುವ ಗ್ರಾಮದಲ್ಲಿ ಈ ಘಟನೆ ನಡೆದಿರುವುದು ಕೋಲಾರ ತಾಲೂಕಿನಲ್ಲಿ ಯಾರು ಏನು ಬೇಕಾದರೂ ಕೆಡವಬಹುದು, ಮಾಡಬಹುದು ಎನ್ನುವುದಕ್ಕೆ ನಿದರ್ಶನವಾಗಿದೆ.
ಈ ಎರಡೂ ಕಟ್ಟಡಗಳನ್ನು ಕಾಮಗಾರಿಯ ಹಿತದೃಷ್ಠಿಯಿಂದ ತೆರವುಗೊಳಿಸಲೇ ಬೇಕಾಗಿದ್ದರೆ ಸಂಬಂಧಪಟ್ಟ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಹಾಗೂ ಗ್ರಾಮ ಪಂಚಾಯ್ತಿ ಅನುಮತಿ ಪಡೆದು, ಈ ಎರಡೂ ಸಂಸ್ಥೆಯ ಮುಖ್ಯಸ್ಥರಿಂದಲೇ ತೆರವುಗೊಳಿಸಬೇಕಾಗುತ್ತದೆ. ಆದರೆ, ಇದ್ಯಾವುದನ್ನು ಪಾಲಿಸದ ಗ್ರಾಮದ ಕೆಲವು ಮುಖಂಡರು ಯಾರನ್ನು ಲೆಕ್ಕಿಸದೆ ಸರಕಾರಿ ಕಟ್ಟಡಗಳನ್ನು ನಿರ್ನಾಮ ಮಾಡುವ ಮೂಲಕ ತಾಲೂಕು ಆಡಳಿತಕ್ಕೆ ಸವಾಲು ಎಸೆದಿದ್ದಾರೆ.
ಖಾಸಗಿ ಜಮೀನುಗಳನ್ನು ಸಂರಕ್ಷಿಸಿಕೊಳ್ಳುವ ಸಲುವಾಗಿ ಗ್ರಾಮಸ್ಥರ ವಿರೋಧದ ನಡುವೆಯೇ ಸುಸ್ಥಿತಿಯಲ್ಲಿದ್ದ ಬಸ್ ತಂಗುದಾಣ ಮತ್ತು ಗ್ರಂಥಾಲಯ ಕಟ್ಟಡವನ್ನು ಕೆಡವಿದವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಕೆಡವಿದವರಿಂದ ನಷ್ಟ ಬಾಬ್ತಿನ ಪರಿಹಾರ ವಸೂಲು ಮಾಡಬೇಕು ಎಂದು ಅರಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.