PLACE YOUR AD HERE AT LOWEST PRICE
ಈಗಾಗಲೇ ಅಂತ್ಯ ಸಂಸ್ಕಾರ ಮಾಡಿರುವ ಸ್ಥಳದಲ್ಲಿಯೇ ಮತ್ತೆ ಗುಂಡಿ ತೆಗೆದು ಶವ ಸಂಸ್ಕಾರ ಮಾಡಲಾಗುತ್ತಿದೆ. ಹಾಗಾಗಿ ನಗರಸಭೆ ಅಕಾರಿಗಳು ಸ್ಮಶಾನಕ್ಕೆ ಪರ್ಯಾಯ ಜಾಗ ನೀಡಬೇಕು ಮತ್ತು ವಿದ್ಯುತ್ ಚಿತಾಗಾರ ನಿರ್ಮಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಕೋಲಾರ ನಗರದ ಟೇಕಲ್ ರಸ್ತೆಯಲ್ಲಿರುವ ಆಗ್ರೋ ಕಚೇರಿ ಹಿಂದೆ ನಗರವಾಸಿಗಳಿಗೆ ಮೀಸಲಿರುವ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಲು ಜನ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕೋಲಾರ ನಗರದ ಸುತ್ತಮುತ್ತ ಸರ್ಕಾರಿ ಜಮೀನುಗಳು ಯಾವುದೂ ಇಲ್ಲ. ಹಾಗಾಗಿ ನಗರಸಭೆ ವತಿಯಿಂದ ಅನಿಲ ಚಿತಾಗಾರ ನಿರ್ಮಿಸುವಂತೆ ಹಲವು ಬಾರಿ ಸಂಬಂಧಪಟ್ಟ ಅಕಾರಿಗಳಿಗೆ ಒತ್ತಾಯಿಸಲಾಗಿದೆ. ಈ ಸ್ಮಶಾನದಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಸಹ ಇಲ್ಲ ಎಂದು ಸಾಮಾಜಿಕ ಕಾರ್ಯಕರ್ತ ತ್ಯಾಗರಾಜ್ ಮುದ್ದಪ್ಪ ದೂರಿದರು.
ಈ ಹಿಂದೆಯೇ ಸ್ಮಶಾನಕ್ಕಾಗಿ ಜಾಗ ಮೀಸಲಿಡಬೇಕಿತ್ತು. ಆದರೆ, ಈಗ ಎಲ್ಲಿಯೂ ಜಾಗ ದೊರೆಯುತ್ತಿಲ್ಲ. ಹಿಂದೂ ಸಂಪ್ರದಾಯದಲ್ಲಿ ಶವ ಸಂಸ್ಕಾರಕ್ಕೆ ತನ್ನದೇ ಆದ ಪಾವಿತ್ರ್ಯತೆ ಇದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಅತಿ ಶೀಘ್ರವಾಗಿ ಶವ ಸಂಸ್ಕಾರಕ್ಕೆ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಮನವಿ ಮಾಡಿದ್ದಾರೆ.