PLACE YOUR AD HERE AT LOWEST PRICE
ಬಂಗಾರಪೇಟೆ:ನಾಗರಿಕತೆ ಬೆಳೆದಂತೆ ಜನರಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿದ್ದು ಜಾತಿ ಹೆಸರಿನಲ್ಲಿ ಪರಸ್ಪರ ದ್ವೇಷ, ಆಸೂಯೆ, ವೈಮನಸ್ಸು ಉಂಟಾಗಿ ನಿರಂತರವಾಗಿ ಮರ್ಯಾದೆಗೇಡು ಹತ್ಯೆಗಳಂತಹ ಪ್ರಕರಣಗಳು ನಡೆಯುತ್ತಿದೆ. ಇದನ್ನು ತಡೆಗಟ್ಟಲು ಪ್ರತ್ಯೇಕವಾದ ಕಾನೂನು ಜಾರಿ ಮಾಡಬೇಕು ಎಂದು ಜನವಾದಿ ಮಹಿಳಾ ಸಂಘದ ರಾಜ್ಯ ಮುಖಂಡರಾದ ವಿ.ಗೀತಾ ಒತ್ತಾಯಿಸಿದರು.
ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಮಸಮುದ್ರ ಹೋಬಳಿಯ ಬೋಡುಗುರ್ಕಿ ಗ್ರಾಮದಲ್ಲಿ ಗೊಲ್ಲ ಸಮುದಾಯಕ್ಕೆ ಸೇರಿದ 20 ವರ್ಷದ ಕೀರ್ತಿ ಎಂಬುವರು ಅದೇ ಗ್ರಾಮದ ದಲಿತ ಸಮುದಾಯದ 24 ವರ್ಷದ ಗಂಗಾಧರ ರವರನ್ನು ಪ್ರೀತಿಸಿದ ಕಾರಣ ಹುಡುಗಿಯ ತಂದೆ ಕೃಷ್ಣಮೂರ್ತಿ ರವರು ಜಾತಿ ಕಾರಣದಿಂದ ತನ್ನ ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಈ ವಿಷಯ ತಿಳಿದ ಯುವಕ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಈ ಘಟನೆಯಿಂದಾಗಿ ಇಡೀ ಗ್ರಾಮದಲ್ಲಿ ದುಃಖದ ಕಾರ್ಮೋಡ ಆವರಿಸಿತ್ತು, ಜಾತಿ ಆಧಾರದ ಮೇಲೆ ಕೊಲೆ ನಡೆದಿರುವುದು ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಹೇಯ ಕೃತ್ಯವಾಗಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದು, ರಾಷ್ಟ್ರವೂ ಜಾಗತಿಕ ಮಟ್ಟದಲ್ಲಿ ಅಭಿವೃದ್ಧಿ ಹೊಂದಿದ್ದರೂ ಸಹ ಅಸ್ಪೃಶ್ಯತೆ, ಜಾತೀಯತೆಯ ಆಧಾರದ ಮೇಲೆ ನಿರಂತರವಾಗಿ ಹತ್ಯೆಗಳು ನಡೆಯುತ್ತಿರುವುದು ಖಂಡನೀಯ ಎಂದರು.
ಮಹಿಳೆಯರ ಕುಂಕುಮ ಮತ್ತು ಬಲೆಯ ಬಗ್ಗೆ ಮಾತನಾಡುವ ಸಂಸದ ಎಸ್ ಮುನಿಸ್ವಾಮಿ ರವರನ್ನು ಒಳಗೊಂಡಂತೆ ಮೀಸಲಾತಿಯ ಅಡಿಯಲ್ಲಿ ಗೆದ್ದ ಯಾವೊಬ್ಬ ಶಾಸಕರು ಘಟನೆ ನಡೆದ ಸ್ಥಳಕ್ಕೆ ಸೌಜನ್ಯಕ್ಕಾದರೂ ಭೇಟಿ ನೀಡಿ ಎರಡು ಸಮುದಾಯಗಳ ಕುಟುಂಬ ಗಳಿಗೆ ಸಾಂತ್ವನ ಹೇಳುವ ಗೋಜಿಗೆ ಹೋಗದಿರುವುದು ಅತ್ಯಂತ ಖೇದಕರ. ಜಾತ್ಯಾತೀತ ಪರಿಕಲ್ಪನೆ ಹೆಸರಿನಲ್ಲಿ ಮತ ಪಡೆದವರು ಜಾತಿವಾದಕ್ಕೆ ಬೆಂಬಲ ನೀಡುತ್ತಿದ್ದಾರೆಯೇ ಎಂಬ ಸಂಶಯ ಕಾಡುತ್ತಿದೆ ಎಂದರು.
ಯುವ ಸಮುದಾಯ ಹಾಗೂ ಪೋಷಕರು ಜವಾಬ್ದಾರಿಯಿಂದ ನಡೆದುಕೊಳ್ಳಬೇಕು.
ಪ್ರೀತಿ ಎಂಬುದು ನಿಸರ್ಗದತ್ತವಾಗಿ ಬರುವಂತಹ ಪ್ರಕ್ರಿಯೆ, ಯುವ ಸಮುದಾಯ ಮೊದಲು ಶಿಕ್ಷಣ, ಉದ್ಯೋಗ ಪಡೆದುಕೊಂಡು ಜೀವನದಲ್ಲಿ ಯಶಸ್ಸನ್ನು ಸಾಧಿಸುವಂತಾಗಬೇಕು, ಅದೇ ರೀತಿಯಾಗಿ ಪೋಷಕರು ಮಕ್ಕಳನ್ನು ಅತ್ಯಂತ ಪ್ರೀತಿ ,ಸ್ನೇಹ ಮಯದಿಂದ ಜವಾಬ್ದಾರಿಯುತವಾಗಿ ಬೆಳೆಸುವುದು ಅತ್ಯಗತ್ಯ. ಸಂವಿಧಾನದ ಅಡಿಯಲ್ಲಿ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ, ಜಾತಿಯ ಹೆಸರಿನಲ್ಲಿ ಕೊಲೆ ಮಾಡುವುದು ಸಮಂಜಸವಲ್ಲ. ಎಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಗೌರಮ್ಮ, ಧಮನ ಸಂಸ್ಥೆಯ ಶಾಂತಮ್ಮ, ಜಿಲ್ಲಾ ಜನವಾದಿ ಮಹಿಳಾ ಮುಖಂಡರಾದ ಕೊಂಡರಾಜನಹಳ್ಳಿ ಮಂಜುಳಾ, ಲಲಿತಮ್ಮ ಮೊದಲಾದವರಿದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.