PLACE YOUR AD HERE AT LOWEST PRICE
ಮಹಾರಷ್ಟ್ರ: ಎಂಟು ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಭೀಕರ ಹತ್ಯೆ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದ ವಿಷಯವನ್ನು ವರದಿ ಮಾಡಿದ ಪತ್ರಕರ್ತನ ಮೇಲೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣದ ಶಿವಸೇನಾ ಶಾಸಕನ ಬೆಂಬಲಿಗರು ಎನ್ನಲಾದ ಗೂಂಡಾಗಳು ಹಲ್ಲೆ ನಡೆಸಿದ್ದಾರೆ.
ಸಂದೀಪ್ ಮಹಾಜನ್ ಹಲ್ಲೆಗೊಳಗಾದ ಪತ್ರಕರ್ತ. ಇವರು ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಚೋರಾದಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನಲ್ ಮತ್ತು ಡೈ ಎಂಬ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಎಂಟು ವರ್ಷದ ಬಾಲಕಿಯ ಮೇಲೆ ಆಕೆಯ ನೆರೆಹೊರೆಯವರು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು.
ಆದರೆ ಸ್ಥಳೀಯ ಪೊಲೀಸರು ಹಾಗೂ ಏಕನಾಥ್ ಶಿಂಧೆ ಬಣದ ಶಾಸಕ ಕಿಶೋರ ಪಾಟೀಲ ಈ ಪ್ರಕರಣವನ್ನು ಹತ್ತಿಕ್ಕಲು ಯತ್ನಿಸಿದರು. ಈ ವಿಷಯವನ್ನು ತಮ್ಮ ಪತ್ರಿಕೆ ಹಾಗೂ ಚಾನಲ್ನಲ್ಲಿ ಸಂದೀಪ್ ಮಹಾಜನ್ ಅವರು ವರದಿ ಮಾಡಿ ಬಾಲಕಿಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಒತ್ತಾಯಿಸಿದ್ದರು.
ಇದೇ ದ್ವೇಷವನ್ನು ಮುಂದಿಟ್ಟುಕೊಂಡು ಶಾಸಕ ಕಿಶೋರ್ ಪಾಟೀಲ್ ಬೆಂಬಲಿಗರು ಎನ್ನಲಾದ ಗೂಂಡಾಗಳು ಸಂದೀಪ್ ಮಹಾಜನ್ ಅವರು ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಸಮಯದಲ್ಲಿ ವಾಹನವನ್ನು ಬೀಳಿಸಿ ಹಲ್ಲೆ ನಡೆಸಿದ್ದಾರೆ. ಘಟನೆಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸೆರೆಯಾಗಿದೆ.
ಘಟನೆಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ಹೋದರೆ ಪೊಲೀಸರು ಶಿವಸೇನಾ ಶಾಸಕ ಕಿಶೋರ್ ಪಾಟೀಲ್ ಮತ್ತು ಅವರ ಗೂಂಡಾಗಳ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ್ದಾರೆ ಎಂದು ಸಂದೀಪ್ ಆರೋಪಿಸಿದ್ದಾರೆ.
ಹಲ್ಲೆ ನಡೆಸುವ ಒಂದು ದಿನ ಮೊದಲು ಸಂದೀಪ್ ಮಹಾಜನ್ ಅವರಿಗೆ ಕರೆ ಮಾಡಿದ ಶಾಸಕ ಕಿಶೋರ್ ಪಾಟೀಲ್ ಅವಾಚ್ಯ ಪದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದರು.
ಪತ್ರಕರ್ತನ ಮೇಲೆ ಶಿವಸೇನೆ ಶಾಸಕ ಮತ್ತು ಆತನ ಗೂಂಡಾಗಳು ಹಲ್ಲೆ ನಡೆಸಿರುವ ಕೃತ್ಯವನ್ನು ಪ್ರತಿಪಕ್ಷಗಳು ಖಂಡಿಸಿದ್ದು, ಶಾಸಕ ಕಿಶೋರ್ ಪಾಟೀಲ್ ಮತ್ತು ಆತನ ಗೂಂಡಾಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿವೆ. ಅಲ್ಲದೇ ಪತ್ರಕರ್ತ ಹಾಗೂ ಆತನ ಕುಟುಂಬಕ್ಕೆ ಬೆದರಿಕೆಯೊಡ್ಡುತ್ತಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಎನ್ಸಿಪಿ ಶಾಸಕ ರೋಹಿತ್ ಪವಾರ್, ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ. ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾಗಿದೆ. ನ್ಯಾಯ ವರದಿ ಪ್ರಕಟಿಸಿ ತನ್ನ ಕರ್ತವ್ಯ ನಿರ್ವಹಿಸಿದ ಪತ್ರಕರ್ತನ ಮೇಲೆ ಹಗಲಿನಲ್ಲಿಯೇ ಸಾರ್ವಜನಿಕ ಸ್ಥಳದಲ್ಲಿ ಹಲ್ಲೆ ನಡೆಸಲಾಗುತ್ತಿದೆ. ಇದೊಂದು ನಾಚಿಕೆಗೇಡಿನ ಕೃತ್ಯವಾಗಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು” ಎಂದು ಪವಾರ್ ಆಗ್ರಹಿಸಿದ್ದಾರೆ.
ದೇಶದ್ರೋಹಿ ಗ್ಯಾಂಗ್ನ ಗೂಂಡಾಗಳು ನಿರ್ಲಜ್ಜವಾಗಿ ವರ್ತಿಸಿದ್ದಾರೆ ಎಂದು ಉದ್ಧವ್ ಠಾಕ್ರೆ ಬಣದ ಶಿವಸೇನೆ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.