PLACE YOUR AD HERE AT LOWEST PRICE
ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಅವರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾಗಲೇ ಬಾಯಲ್ಲಿ ನೊರೆ ಬಂದಂತಾಗಿ ಕುಸಿದು ಬಿದ್ದ ಬಳಿಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದು, ‘ಚೈತ್ರಾ ಅವರಿಗೆ ಫಿಟ್ಸ್ ಇಲ್ಲ, ಅವರ ಆರೋಗ್ಯ ಸ್ಥಿರವಾಗಿದೆ’ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಚೈತ್ರಾ ಕುಂದಾಪುರ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವಿಕ್ಟೋರಿಯಾ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ.ಅಸೀಮಾ ಬಾನು, “ಚೈತ್ರಾ ಕುಂದಾಪುರ ಆರೋಗ್ಯ ಸ್ಥಿರವಾಗಿದೆ. ಸಿಟಿ ಸ್ಕ್ಯಾನ್, ಇಸಿಜಿ ಎಲ್ಲವೂ ನಾರ್ಮಲ್ ಇದೆ. ಈವರೆಗೆ ನಡೆಸಿದ ಎಲ್ಲ ಪರೀಕ್ಷೆಯಲ್ಲೂ ನಾರ್ಮಲ್ ಇದೆ.
ಮೊದಲು ಮೂರ್ಛೆ ರೋಗ ಇತ್ತು ಎಂದು ಮಾಹಿತಿ ಇದೆ. ಆದರೆ ಅವರನ್ನು ಆಸ್ಪತ್ರೆಗೆ ಕರೆತಂದಾಗ ಮೂರ್ಛೆ ರೋಗ ಇರಲಿಲ್ಲ. ಸದ್ಯ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿಸಿದ್ದೇವೆ. ಎಲ್ಲ ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ” ಎಂದು ಮಾಹಿತಿ ನೀಡಿದ್ದಾರೆ.
ಬಟ್ಟೆ ತೊಳೆಯಲು ಸಿಸಿಬಿ ಪೊಲೀಸರಲ್ಲಿ ಸಾಬೂನು ಕೇಳಿದ್ದ ಚೈತ್ರಾ ಕುಂದಾಪುರ
ಯಾವುದೇ ನೊರೆ ಬಾಯಲ್ಲಿ ಇರಲಿಲ್ಲ ಎಂದು ವೈದ್ಯೆ ಡಾ.ಅಸೀಮಾ ಬಾನು ತಿಳಿಸಿದ ನಂತರ, ಚೈತ್ರಾ ಸಾಬೂನು ನೊರೆ ಬಾಯಿಗೆ ಹಾಕಿ ಮೂರ್ಛೆ ಬಂದಂತೆ ನಟನೆ ಮಾಡಿರುವ ಸಂಗತಿ ಈಗ ಚರ್ಚೆಗೆ ಗ್ರಾಸವಾಗಿದೆ.
ಬಟ್ಟೆ ತೊಳೆಯಲು ಕೊಟ್ಟ ಸಾಬೂನನ್ನು ಬಾಯಿಗೆ ಹಾಕಿ ನೊರೆ ಬರಿಸಿರುವ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಯಲ್ಲಿರುವ ಶೌಚಾಲಯವನ್ನು ಪೊಲೀಸರು ಪರಿಶೀಲನೆ ನಡೆಸಿರುವುದಾಗಿ ವರದಿಯಾಗಿದೆ.
ಅಲ್ಲದೇ, ಆಸ್ಪತ್ರೆಗೆ ಪೊಲೀಸರು ದಾಖಲಿಸಲು ಕರೆತಂದ ವೇಳೆ ತನ್ನ ಬಟ್ಟೆಯನ್ನು ತಾನೇ ಸರಿಪಡಿಸಿಕೊಳ್ಳುತ್ತಿರುವ ದೃಶ್ಯಗಳು ಕೆಲ ಮಾಧ್ಯಮಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಿಸಿಬಿ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಚೈತ್ರಾ ಈ ರೀತಿಯ ಮೂರ್ಛೆ ರೋಗದ ನಾಟಕವಾಡಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ.