PLACE YOUR AD HERE AT LOWEST PRICE
ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ
ಕೋಲಾರ,ಸೆ.೧೫ : ನಗರಸಭೆ ಕಾರ್ಯಾಲಯ ಕೋಲಾರ, ಜಿಲ್ಲಾ ಪೌರಸೇವಾ ನೌಕರರ ಸೇವಾ ಸಂಘ ವತಿಯಿಂದ ಪೌರಕಾರ್ಮಿಕರ ಎರಡು ದಿನಗಳ ಕ್ರೀಡಾಕೂಟಕ್ಕೆ ಪೌರಾಯುಕ್ತ ಪಿ.ಸಿ.ಶಿವಾನಂದ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಸೆ.೧೫ ಮತ್ತು ೧೬ ರಂದು ನಡೆಯುವ ಎರಡು ದಿನಗಳ ಕ್ರೀಡಾಕೂಟಕ್ಕೆ ಕೋಲಾರ ನಗರಸಭೆ ಪೌರಾಯುಕ್ತ ಪಿ.ಸಿ.ಶಿವಾನಂದ ಚಾಲನೆ ನೀಡಿ ಎಲ್ಲರಿಗೂ ಉತ್ಸಾಹ ತುಂಬಿ ಶುಭ ಹಾರೈಸಿದರು. ಕ್ರೀಡಾಕೂಟದಲ್ಲಿ ಕೋಲಾರ ನಗರಸಭೆಯ ನೂರಾರು ಪೌರಕಾರ್ಮಿಕರು ಭಾಗವಹಿಸಿದ್ದರು.
ಪ್ರತಿನಿತ್ಯ ಕೋಳಿಕೂಗುವ ವೇಳೆಗೆ ರಸ್ತೆಗಳಿಗೆ ಇಳಿಯುವ ಪೌರಕಾರ್ಮಿಕರು ನಗರದ ಸ್ವಚ್ಚತೆಗಾಗಿ ವರ್ಷವಿಡೀ ದಣಿವರಿಯದೆ ದುಡಿಯುತ್ತಾರೆ. ಇಡೀ ದಿನ ತಮ್ಮ ಎರಡೂ ಕೈಗಳಲ್ಲಿ ಕಸ ಎತ್ತುವ ಪೌರಕಾರ್ಮಿಕರಿಗೆ ತಮ್ಮ ದಣಿದ ದೇಹಕ್ಕೆ ಮದ್ಯ ಸೇವನೆ ಮಾಡುವುದೊಂದೇ ಮನರಂಜನೆಯಾಗಿದ್ದು ಇತಿಹಾಸ. ಜೀವನದಲ್ಲಿ ಮನರಂಜನೆಯೇ ಕಾಣದ ಪೌರಕಾರ್ಮಿಕರು ಇಂದು ಆರೋಗ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು, ನೂರಾರು ಪೌರಕಾರ್ಮಿಕರು ಕ್ರೀಡಾಕೂಟದಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು.
ಕ್ರೀಡಾಕೂಟದಲ್ಲಿ ಸಮೀಪ ದೂರದ ಓಟಗಳು, ಗುಂಡು ಎಸೆತ, ವಾಲಿಬಾಲ್, ಕ್ರಿಕೆಟ್, ಮಹಿಳೆಯರಿಗೆ ಲೆಮೆನ್ ಸ್ಪೂನ್ ಓಟ, ಬಕೆಟ್ ಅಂಡ್ ಬಾಲ್, ಮ್ಯೂಸಿಕಲ್ ಚೇರ್, ಕಬ್ಬಡಿ ಮುಂತಾದ ಆಟಗಳಲ್ಲಿ ಪೌರಕಾರ್ಮಿಕರು ಖುಷಿಯಿಂದ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ನಗರಸಭೆ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಯಂತರ ದಿಲೀಪ್, ಹಿರಿಯ ಆರೋಗ್ಯ ನಿರೀಕ್ಷಕ ಮಹಮದ್ ನವಾಜ್, ಪೌರಸೇವಾ ನೌಕರರ ಸೇವಾ ಸಂಘದ ಜಿಲ್ಲಾಧ್ಯಕ್ಷ ನಾರಾಯಣಸ್ವಾಮಿ, ದೈಹಿಕ ಶಿಕ್ಷಕರಾದ ವೆಂಕಟರಾಯನ್, ಮುರಳಿಧರ್, ಮನೋಹರ್, ಯುವಜನ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ನಾಸಿರ್ ಇದ್ದರು.