PLACE YOUR AD HERE AT LOWEST PRICE
ಮಹಿಳೆಯರಿಗಾಗಿ ಮಾಸಿಕ 1 ಸಾವಿರ ಧನಸಹಾಯ ಯೋಜನೆಗೆ ಶುಕ್ರವಾರ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ದ್ರಾವಿಡ ನೇತಾರ ಸಿ ಎನ್ ಅಣ್ಣಾದೊರೈ ಅವರ ಜನ್ಮದಿನದಂದು ಕಾಂಚಿಪುರಂನಲ್ಲಿ ಚಾಲನೆ ನೀಡಿದರು.
ಇದು ಮಹಿಳೆಯರ ಶ್ರಮಕ್ಕೆ ಮನ್ನಣೆಯಾಗಿದೆ ಎಂದ ಸಿಎಂ ಹಲವಾರು ಫಲಾನುಭವಿಗಳಿಗೆ ಬ್ಯಾಂಕ್ ಡೆಬಿಟ್ ಕಾರ್ಡ್ಗಳನ್ನು ವಿತರಿಸಿದರು. ರಾಜ್ಯ ಉಸ್ತುವಾರಿ ಸಚಿವರು ತಮ್ಮ ಜಿಲ್ಲೆಗಳಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಂ ಕೆ ಸ್ಟಾಲಿನ್, ಅಣ್ಣಾದೊರೈ ಅವರ ಜನ್ಮದಿನದಂದು ಮತ್ತು ಕರುಣಾನಿಧಿ ಅವರ ಶತಮಾನೋತ್ಸವ ಸಂದರ್ಭದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.
ಯೋಜನೆಯು ಮೂಲ ಆದಾಯ ಕಾರ್ಯಕ್ರಮವಾಗಿದ್ದು, ಇದಕ್ಕೆ ಮಾಜಿ ಮುಖ್ಯ ಮಂತ್ರಿ ಎಂ ಕರುಣಾನಿಧಿ (ಕಲೈಗ್ನರ್ ಮಗಳಿರ್ ಉರಿಮೈ ತಿಟ್ಟಂ) ಅವರ ಹೆಸರನ್ನು ಇಡಲಾಗಿದೆ ಮತ್ತು ರಾಜ್ಯ ಸರ್ಕಾರವು ಸಹಾಯವನ್ನು ಮಹಿಳೆಯರ “ಹಕ್ಕು” ಎಂದು ನಾಮಕರಣ ಮಾಡಿದೆ.
ತಮಿಳುನಾಡು ಸರ್ಕಾರವು 1.06 ಕೋಟಿ ಮಹಿಳೆಯರನ್ನು ಫಲಾನುಭವಿಗಳೆಂದು ಗುರುತಿಸಿದೆ ಮತ್ತು ಅವರಿಗೆ 1,000 ರೂ. ಸಹಾಯಧನವನ್ನು ನೇರ ಲಾಭ ವರ್ಗಾವಣೆ ಮೂಲಕ ಪಾವತಿಸಲಾಗುತ್ತದೆ.
ತಮಿಳುನಾಡು ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಡಿಎಂಕೆಯ ಪ್ರಣಾಳಿಕೆಯ ಪ್ರಮುಖ ಲಕ್ಷಣವಾದ ಈ ಯೋಜನೆಯನ್ನು ಅಣ್ಣಾದೊರೈ ಅವರ ಜನ್ಮದಿನದಂದು ಸೆಪ್ಟೆಂಬರ್ 15 ರಂದು ಪ್ರಾರಂಭಿಸಲಾಗುವುದು ಎಂದು ರಾಜ್ಯ ಸರ್ಕಾರವು ತಿಂಗಳ ಹಿಂದೆ ಘೋಷಿಸಿತ್ತು.
ಕಾಂಚೀಪುರಂ ಅಣ್ಣಾದೊರೈ ಅವರ ತವರು ಪಟ್ಟಣವಾಗಿದ್ದು, ಅಣ್ಣಾ ಅವರು 1949ರಲ್ಲಿ ಡಿಎಂಕೆ ಸ್ಥಾಪಿಸಿ 1967 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯನ್ನು ಮೊದಲ ಬಾರಿಗೆ ತಮಿಳುನಾಡಿನಲ್ಲಿ ಅಧಿಕಾರಕ್ಕೆ ತಂದರು. ಅಲ್ಲದೆ 1967 ರಿಂದ 1969ರವರೆಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು.
ದ್ರಾವಿಡ ಮಾದರಿಯ ಆಡಳಿತದ ನೀತಿಯಂತೆ, ತಮಿಳುನಾಡಿನಲ್ಲಿ ಶೀಘ್ರದಲ್ಲೇ ಮಹಿಳೆಯರು ದೇವಾಲಯದಲ್ಲಿ ಅರ್ಚಕರಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ಪೋಸ್ಟ್ ಮಾಡಿರುವ ಸ್ಟಾಲಿನ್, ‘ಪೈಲಟ್ಗಳು ಹಾಗೂ ಬಾಹ್ಯಾಕಾಶ ಯಾತ್ರಿಗಳಾಗಿ ಮಹಿಳೆಯರು ಸಾಧನೆಯನ್ನು ಮಾಡಿರುವ ಹೊರತಾಗಿಯೂ ಅವರನ್ನು ಅಪವಿತ್ರವೆಂದು ಪರಿಗಣಿಸಿ ದೇವಾಲಯಗಳಲ್ಲಿ ಪೌರೋಹಿತ್ಯದಂತಹ ಪವಿತ್ರವಾದ ಪಾತ್ರಗಳನ್ನು ನಿರ್ವಹಿಸುವುದರಿಂದ ದೂರವಿಡಲಾಗಿದೆ. ಸ್ತ್ರೀದೇವತೆಗಳ ದೇವಾಲಯದಲ್ಲೂ ಅವರನ್ನು ದೂರವಿಡಲಾಗಿದೆ. ಆದರೆ ಕೊನೆಗೂ ಇಲ್ಲಿ ಬದಲಾವಣೆಯಾಗಿದೆ ಎಂದು ಸ್ಟಾಲಿನ್ ತಿಳಿಸಿದ್ದಾರೆ.
‘‘ನಮ್ಮ ದ್ರಾವಿಡ ಮಾದರಿಯ ಸರಕಾರವು ತಮಿಳುನಾಡಿನಲ್ಲಿ ಎಲ್ಲ ಜಾತಿಯವರನ್ನು ಅರ್ಚಕರಾಗಿ ನೇಮಿಸುವ ಮೂಲಕ ತಂದೆ ಪೆರಿಯಾರ್ ಅವರ ಹೃದಯಕ್ಕೆ ತಾಗಿದ್ದ ಮುಳ್ಳನ್ನು ತೆಗೆದುಹಾಕಿದೆ. ಮಹಿಳೆಯರು ಈಗ ಗರ್ಭಗುಡಿಯೊಳಗೆ ಪ್ರವೇಶಿಸಲಿದ್ದು, ಎಲ್ಲರನ್ನೂ ಒಳಪಡಿಸಿದ ಹಾಗೂ ಸಮಾನತೆಯ ನೂತನ ಯುಗಕ್ಕೆ ನಾಂದಿ ಹಾಡಲಾಗಿದೆ’’ ಎಂದು ಹೇಳಿದ್ದಾರೆ.
ಎಲ್ಲ ಜಾತಿಗೆ ಸೇರಿದ ವ್ಯಕ್ತಿಗಳನ್ನು ದೇವಾಲಯಗಳಲ್ಲಿ ಅರ್ಚಕರಾಗಿ ತರಬೇತಿ ನೀಡುವ ಮತ್ತು ನೇಮಿಸುವ ಯೋಜನೆಯನ್ನು ಸ್ಟಾಲಿನ್ ಸರಕಾರ ಆರಂಭಿಸಿತ್ತು. ಈ ಯೋಜನೆಯಡಿ ತಿರುಚಿರಾಪ್ಪಳ್ಳಿಯ ಶ್ರೀರಂಗಂನ ಶ್ರೀರಂಗನಾಥರ್ ದೇವಾಲಯವು ನಡೆಸುತ್ತಿರುವ ಅರ್ಚಕರ ತರಬೇತಿ ಶಾಲೆಯಲ್ಲಿ ಮೂವರು ಮಹಿಳೆಯರು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.
ಬ್ರಾಹ್ಮಣೇತರರನ್ನು ದೇವಾಲಯದಲ್ಲಿ ಅರ್ಚಕರ ಪಾತ್ರವನ್ನು ನಿರ್ವಹಿಸಲು ಅವಕಾಶ ನೀಡದೆ ಇರುವುದು ತನ್ನ ಹೃದಯಕ್ಕೆ ತಗಲಿದ ಮುಳ್ಳೆಂದು ದ್ರಾವಿಡ ಚಳವಳಿಯ ನಾಯಕ ದಿವಂಗತ ಪೆರಿಯಾರ್ ಇ.ರಾಮಸ್ವಾಮಿ ಅವರು ಈ ಹಿಂದೆ ತಿಳಿಸಿದ್ದರು.