PLACE YOUR AD HERE AT LOWEST PRICE
ಬಂಗಾರಪೇಟೆ: ಸಮಯಕ್ಕೆ ಸೂಕ್ತ ಬಸ್ ಸೌಲಭ್ಯಕ್ಕೆ ಆಗ್ರಹಿಸಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಟ್ಟಣದ ಬಸ್ ನಿಲ್ದಾಣದ ಬಳಿ ಸುಮಾರು ಅರ್ಧ ಘಂಟೆಗೂ ಹೆಚ್ಚು ಸಮಯ ಸಾರಿಗೆ ಬಸ್ ಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.
ಈ ವೇಳೆ ವಿಧ್ಯಾರ್ಥಿಗಳು ಮಾತನಾಡಿ, ಇತ್ತೀಚೆಗೆ ಸಮಯಕ್ಕೆ ಬಸ್ ಬಾರದ ಕಾರಣ ಶಾಲಾ-ಕಾಲೇಜು ತರಗತಿಗಳಿಗೆ ಹಾಜರಾಗಲು ತುಂಬಾ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಸಾರಿಗೆ ಸಂಸ್ಥೆಯ ಆಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ವಿವಿಧ ಹಳ್ಳಿಗಳಿಂದ ಪಟ್ಟಣಕ್ಕೆ ಬಂದು ಉನ್ನತ ವ್ಯಾಸಂಗ ಮಾಡಲೆಂದು ಕೋಲಾರ, ಕೆಜಿಎಫ್ ಮತ್ತು ವಿವಿಧ ಕಾಲೇಜುಗಳಿಗೆ ತೆರಳುತ್ತೇವೆ. ಆದರೆ ಬಂಗಾರಪೇಟೆಯ ಸಾರಿಗೆ ಅಧಿಕಾರಿಗಳ ನಿರ್ಲಕ್ಷದಿಂದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ಬಸ್ಸುಗಳಲ್ಲಿದೆ ಕಾಲೇಜುಗಳಿಗೆ ತೆರಳಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಇಂದು ಬಸ್ ನಿಲ್ದಾಣದ ಎರಡೂ ಗೇಟ್ ಗಳ ಮುಂದೆ ಬಸ್ಸುಗಳನ್ನು ತಡೆದು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಮಾಡಿದ್ದೇವೆ.
ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇರೆಡೆಗೆ ತೆರಳಲು ಉಚಿತ ಬಸ್ ಪಾಸ್ ನೀಡಿದೆಯಾದರೂ ಸಕಾಲಕ್ಕೆ ಸಾರಿಗೆ ಬಸ್ಸುಗಳಿಲ್ಲದ ಕಾರಣ ಪಾಸ್ ಪ್ರಯೋಜನಕ್ಕೆ ಬರುತ್ತಿಲ್ಲ ಎಂದು ಆರೋಪಿಸಿದ ಅವರು ಸಕಾಲಕ್ಕೆ ಬಸ್ಸುಗಳನ್ನು ವ್ಯವಸ್ಥೆ ಮಾಡದಿದ್ದರೆ ನಾಳೆಯೂ ಸಹ ಪ್ರತಿಭಟನೆಯನ್ನು ತೀವ್ರ ಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಧ್ಯಾರ್ಥಿಗಳು ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿರು ವಿಷಯ ತಿಳಿದ ಸಾರಿಗೆ ಇಲಾಖೆಯ ವಿಭಾಗೀಯ ಸಂಚಾಲನಾಧಿಕಾರಿ ಜಶಾಂತ್ ಕುಮಾರ್ ಸ್ಥಳಕ್ಕೆ ಬಂದು ನಾಳೆಯಿಂದ ಸಕಾಲಕ್ಕೆ ಬಸ್ಸುಗಳ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಮೇಲೆ ವಿಧ್ಯಾರ್ಥಿಗಳು ಪ್ರತಿಭಟನೆ ವಾಪಸ್ ಪಡೆದರು.
ಈ ಸಂದರ್ಭದಲ್ಲಿ ಫೋಕಸ್ ಟ್ರಷ್ಟ್ ನ ಅ ನಾ ಹರೀಶ್, ವಿದ್ಯಾರ್ಥಿಗಳಾದ ತೇಜಸ್, ಅಭಿಷೇಕ್, ಕಿರಣ್, ಲೋಕೇಶ್ಕುಮಾರ್, ಪ್ರಭುದೇವ್, ಸಂಜಯ್, ಕಾರ್ತಿಕ್, ಜಶ್ವಂತ್, ಕಿಶೋರ್, ಎಸ್.ಶಬರೀಶ್, ತರುಣ್. ಮೊದಲಾದವರು ಇದ್ದರು.