PLACE YOUR AD HERE AT LOWEST PRICE
ಅಲಮಟ್ಟಿ(ಬಿಜಾಪುರ),ಜ.೨೨: ದೇಶದಲ್ಲಿ ಇಂದು ಮನುವಾದ ಮೆರೆಯುತ್ತಿದೆ, ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂವಿಧಾನ ರಕ್ಷಣೆಗಿಂತ ಶ್ರೀರಾಮನ ರಕ್ಷಣೆ ಬಗ್ಗೆ ಹೆಚ್ಚು ಕಾಳಜಿ ಇದ್ದು, ಸಂವಿಧಾನ ರಕ್ಷಣೆಗೆ ಶೋಷಿತರು ಎಚ್ಚೆತ್ತುಕೊಳ್ಳಬೇಕಿದೆ ಎಂದು ರಾಜ್ಯ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಕರೆ ನೀಡಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ೫೦ ವರ್ಷಗಳು ಪೂರೈಸುತ್ತಿರುವ ಹಿನ್ನಲೆಯಲ್ಲಿ ಭಾನುವಾರ ಇಲ್ಲಿನ ಅಲಮಟ್ಟಿ ಡ್ಯಾಂ ಸಮೀಪದ ಹರ್ಡೆಕರ್ ಮಂಜಪ್ಪ ಸ್ಮಾರಕ ಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ೨ ದಿನಗಳ ಅಧ್ಯಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡ ಚಳುವಳಿಗಾರರು ರಾಜಕೀಯದಿಂದ ದೂರವಿರಬೇಕು, ರಾಜಕೀಯ ವ್ಯಕ್ತಿಗಳು ಚಳುವಳಿಯಲ್ಲಿ ಹಸ್ತಕ್ಷೇಪ ಮಾಡಬಾರದು ಆಗ ಮಾತ್ರ ಯಾವುದೇ ಚಳುವಳಿ ಸಮುದಾಯದ ರಕ್ಷಣೆ ಮಾಡಿಕೊಳ್ಳಲು ಸಾಧ್ಯ, ಅದು ಬಿಟ್ಟು ಚಳುವಳಿಯಲ್ಲಿ ರಾಜಕೀಯದವರಾಗಲೀ, ಅಥವಾ ರಾಜಕೀಯದಲ್ಲಿ ಚಳುವಳಿಗಾರರು ಮದ್ಯೆ ಪ್ರವೇಶ ಮಾಡಿದರೆ ಸಮುದಾಯ ಸಂಘಟನೆಗೆ ತೊಂದರೆಯಾಗುತ್ತದೆ. ಆದ್ದರಿಂದ ಚಳುವಳಿ ಸಮುದಾಯದ ಪರವಾಗಿ ಕೆಲಸ ಮಾಡುವುದು ಸೂಕ್ತವೆಂದು ಸಲಹೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ದಲಿತ ಸಂಘರ್ಷ ಸಮಿತಿಗೆ ೫೦ ವರ್ಷ ತುಂಬಿದೆ, ಈ ೫೦ ವರ್ಷಗಳಲ್ಲಿ ಸಾಧನೆಗಳು ಬೆರಳೆಣಿಕೆಯಷ್ಟು ಮಾತ್ರ, ಆದರೆ, ೫೦ ವರ್ಷಗಳಲ್ಲಿ ೫೦ ಒಡಕುಗಳಾಗಿ ವಿಗಟನೆಗೆ ಒಳಗಾಗಿದ್ದು ಮಾತ್ರ ದುರಂತವೇ ಸರಿ. ಅರ್ಧ ಶತಮಾನದ ಇತಿಹಾಸವಿರುವ ಒಂದು ಚಳುವಳಿಗೆ ಅದು ಪ್ರತಿನಿಧಿಸಿದ ಸಮುದಾಯಗಳನ್ನು ಆರ್ಥಿಕವಾಗಿ ಬಲಪಡಿಸಲು ಸಾಧ್ಯವಾಗಲಿಲ್ಲ. ಅಷ್ಟರಲ್ಲೇ ಅದು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಐದು ದಶಕಗಳ ಚಳುವಳಿಯ ಹೊರತಾಗಿಯೂ ದಲಿತರು ಆರ್ಥಿಕವಾಗಿ, ಸಾಮಾಜಿಕವಾಗಿ ಮುಂಚೂಣಿಗೆ ಬರಲು ಸಾಧ್ಯವಾಗದಿರಲು ಮುಖ್ಯಕಾರಣ, ಚಳುವಳಿ ರಾಜ್ಯಾಧಿಕಾರದ ಕಡೆ ಗಮನ ಹರಿಸದಿರುವುದು. ಬದಲಾಗಿ ಚಳುವಳಿ ತನ್ನ ಇತಿಹಾಸ ಉದ್ದಕ್ಕೂ ಓಲೈಕೆ ರಾಜಕಾರಣ ಮಾಡುತ್ತಲೇ ಬಂದಿದೆ ಎಂದ ಅವರು, ದಲಿತ ಸಮುದಾಯಗಳು ತಮ್ಮ ವಿಮೋಚನೆಗೆ ರಾಜ್ಯಾಧಿಕಾರದ ಕಡೆ ಸಾಗಲು ಅಗತ್ಯವಾದ ರಾಜಕೀಯ ಮರುಹುಟ್ಟನ್ನು ದಸಂಸ ಹೊಸ ಮುನ್ನೋಟದೊಂದಿಗೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಹೆಚ್.ಪಿ.ಸುದಾಮ್ ದಾಸ್, ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ್, ಬಹುಜನ ಚಿಂತಕ ಡಾ.ಬಿ.ಗೋಪಾಲ್, ದಲಿತ ವಿಮೋಚನೆಗಾಗಿ ಮಾನವ ಹಕ್ಕುಗಳ ವೇದಿಕೆ ರಾಜ್ಯ ಸಂಚಾಲಕ ಬಸವರಾಜ್ ಕೌತಾಳ್, ಸಮುದಾಯ ಮುಖಂಡ ಅಂಬಣ್ಣ ಅರೋಲಿಕರ್. ಭೀಮಜ್ಯೋತಿ ಶ್ರೀನಿವಾಸ್ ಮುಂತಾದವರು ಇದ್ದರು.