PLACE YOUR AD HERE AT LOWEST PRICE
ನಕಲಿ ಪೇಮೆಂಟ್ ಆ್ಯಫ್ ಬಳಸಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಪೊಲೀಸ್ ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ವಂಚಕರನ್ನು ಬಂಧಿಸಿ, ಅವರಿಂದ ಸುಮಾರು ರೂ. ೩.೨೫ ಲಕ್ಷ ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಜಿ.ಎಫ್ ನಗರದ ವರ್ಧಮಾನ್ ಜ್ಯುವೆಲ್ಲರಿಗೆ ಗ್ರಾಹಕರಾಗಿ ಹೋಗಿ ಪೇಮೆಂಟ್ ನ ನಕಲಿ ಆಪ್ ಮತ್ತು ನಕಲಿ ಸಿಮ್ ಬಳಸಿ ಪೇಮೆಂಟ್ ಆಗಿರುವುದಾಗಿ ತೋರಿಸಿ ವಂಚಿಸಿದ್ದರ ಸಂಬಂಧ ಸಿ.ಇ.ಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ, ತನಿಖೆ ಕೈಗೊಳ್ಳಲಾಗಿತ್ತು.
ಸಿಇಎನ್ ಪಿಐ ಲಕ್ಷ್ಮೀನಾರಾಯಣ ಅವರ ನೇತೃತ್ವದ ತಂಡವು ತೀವ್ರ ಕಾರ್ಯಾಚರಣೆ ನಡೆಸಿ, ಆರೋಪಿಗಳಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಪಟ್ಟಣದ ನಿವಾಸಿ ನಂದನ್ ಮತ್ತು ದೇವನಹಳ್ಳಿಯ ಗಿರೀಶ್.ಕೆ. ಎಂಬುವವರನ್ನು ಬಂದಿಸುವಲ್ಲಿ ಯಶ್ವಿಯಾಗಿದ್ದಾರೆ.
ಆರೋಪಿಗಳಿಂದ ಸುಮಾರು ೨೪ ಗ್ರಾಂ ತೂಕದ ಬಂಗಾರದ ಚೈನು ಮತ್ತು ಎರಡು ಬಂಗಾರದ ಉಂಗುರಗಳು ಹಾಗೂ ಎರಡು ಮೊಬೈಲ್ ಪೋನ್, ಕೃತ್ಯಕ್ಕೆ ಬಳಸಿದ ಕಾರನ್ನು (ಒಟ್ಟು ಮೌಲ್ಯ ಸುಮಾರು ರೂ. ೩,೨೫,೦೦೦/- ಮೂರು ಲಕ್ಷದ ಇಪ್ಪತ್ತೈದು ಸಾವಿರ ರೂಗಳು ಮಾತ್ರ) ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ನಕಲಿ ಪೇಮೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಿ, ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಸಿಇಎನ್ ಕ್ರೈಂ ಠಾಣೆಯ ಪಿಐ ಲಕ್ಷ್ಮೀನಾರಾಯಣ, ಸಿಬ್ಬಂದಿಗಳಾದ ಎಂ.ವಿ.ರಮೇಶ, ರಘುನಾಥ, ವಿ.ಶೇಷಾದ್ರಿ, ಚೇತನ್ಯಾದವ್, ಚೇತನ್ಕುಮಾರ್, ಶರಣಕುಮಾರ್ ಅವರುಗಳ ತಂಡವು ಯಶಸ್ವಿಯಾಗಿದ್ದು, ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಅವರು ಪ್ರಶಂಶಿಸಿದ್ದಾರೆ.