PLACE YOUR AD HERE AT LOWEST PRICE
ಕೋಲಾರ : ಭಾರತ ಸಂವಿಧಾನ ದೇಶದ ಜನತೆಯ ರಕ್ಷಾ ಕವಚ, ಸಂವಿಧಾನ ಜಾಗೃತಿ ಎಲ್ಲಾ ಪ್ರಜೆಗಳಿಗೂ ಅಗತ್ಯವಾಗಿದೆ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಕೆ.ಸಿ. ಮೋಹನ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ದೊಡ್ಡಹಸಾಳ ಗ್ರಾಮ ಪಂಚಾಯ್ತಿಗೆ ಗುರುವಾರ ಮದ್ಯಾಹ್ನ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾ ಉದ್ದೇಶಿಸಿ ಅವರು ಮಾತನಾಡಿದರು. ಭಾರತದ ಸಂವಿಧಾನ ಅಂಗೀಕರವಾಗಿ ೭೫ ವರ್ಷಗಳು ಕಳೆದ ಹಿನ್ನಲೆಯಲ್ಲಿ ಜಾಗೃತಿ ಜಾಥಾ ಪಂಚಾಯ್ತಿಗೆ ಅರಿವು ಮೂಡಿಸುವ ಸಲುವಾಗಿ ಆಗಮಿಸಿದ ವೇಳೆ ಅವರು ಮಾತನಾಡಿದರು.
ಸಂವಿಧಾನ ಜಾಗೃತಿ ಜಾಥಾಗೆ ಗ್ರಾಮ ಪಂಚಾಯ್ತಿಯ ಜನತೆ ಪೂರ್ಣಕುಂಭ ಕಳಸ ಹೊತ್ತು ಮೆರವಣಿಗೆಯ ಮೂಲಕ ಆಹ್ವಾನಿಸಿದರೆ, ಸ್ಥಳೀಯ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲಾ ಮಕ್ಕಳು ಸಂವಿಧಾನ ಜಾಥಕ್ಕೆ ಅದ್ದೂರಿಯಾಗಿ ಸ್ವಾಗತಿಸಿದರು.
ಕರ್ನಾಟಕ ಸರ್ಕಾರ ರಾಜ್ಯದ ಜನ ಸಾಮಾನ್ಯರಿಗೆ ಸಂವಿಧಾನದ ಮೂಲ ಆಶಯಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಜನವರಿ ೨೬ ರಿಂದ ಫೆ.೨೫ ರವರೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂವಿಧಾನ ಜಾಗೃತಿ ಜಾಥಾ ಹಮ್ಮಿಕೊಂಡಿದೆ. ಜನ ಸಾಮಾನ್ಯರು ಸಂವಿಧಾನದ ಮಹತ್ವ ಹಾಗೂ ಮೌಲ್ಯಗಳ ಕುರಿತು ಹೆಚ್ಚು ಜ್ಞಾನವಂತರಾಗಲು ಜಾಥಾ ಮೂಲಕ ಜಾಗೃತಿ ಮೂಡಿಸುವ ಉದ್ದೇಶದಿಂದ ಜಾಗೃತಿ ಜಾಥ ನಡೆಯುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸಂವಿಧಾನ ಪೀಠಿಕೆಯನ್ನು ಪ್ರಮಾಣ ವಚನ ಭೋಧಿಸಿದರು. ಕಲಾವಿದರಿಂದ ಸಂವಿಧಾನ, ಸಂವಿಧಾನದ ಮಹತ್ವ ಕುರಿತು ಜಾಗೃತಿ ಗೀತೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಮುಕ್ತಾಯವಾದ ನಂತರ ಜಾಥಾ ಮುಳಬಾಗಿಲು ತಾಲ್ಲೂಕಿನ ದೇವರಾಯ ಸಮುದ್ರದತ್ತ ಸಾಗಿದೆ.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಆಂಜಮ್ಮ ಚೌಡಪ್ಪ ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಮುನಿರಾಜು, ಸರೋಜಮ್ಮ, ಜಗದೀಶ್, ರಾಜೇಶ್ವರಿ, ಗೌರಮ್ಮ, ಮಮತ, ಮುನಿರತ್ನಮ್ಮ , ಸ್ಥಳೀಯ ಶಿಕ್ಷಕರುಗಳಾದ ಬಿ.ಎಂ. ಚಾಮುಂಡೇಶ್ವರಿದೇವಿ, ಮುನಿರಾಜು, ಗ್ರಾಮ ಪಂಚಾಯ್ತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.